ಮುಳವಾಡ ಸಮೀಪದಲ್ಲಿ ಟೋಲನ್ನು ಏಕಾಏಕಿ ಪ್ರಾರಂಭಿಸಿ ಅನಧಿಕೃತವಾಗಿ ಟೋಲ್ ಹಣ ಸಂಗ್ರಹಣೆ ಮಾಡುತ್ತಿರುವುದನ್ನು ಸ್ಥಗಿತಗೊಳಿಸಿ ರೈಲ್ವೆ ಹಳಿಯ ಮೇಲೆ ನಿರ್ಮಿಸುತ್ತಿರುವ ಮೇಲುಸೇತುವೆ ಕಾಮಗಾರಿ ಮುಗಿದ ಬಳಿಕ ಟೋಲ್ ಹಣ ಸಂಗ್ರಹಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮನವಿ ಸಲ್ಲಿಸಿ ಮಾತನಾಡಿ, “ರೈಲ್ವೆ ಮೇಲುಸೇತುವೆಯನ್ನು ಸಂಪೂರ್ಣ ನಿರ್ಮಿಸದೆ ಟೋಲ್ ಹಣ ಸಂಗ್ರಹಿಸುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಹೆದ್ದಾರಿಯವರು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ವಾಹನದಲ್ಲಿ ಒಂದು ಗ್ಲಾಸ್ ನೀರು ಇಟ್ಟು ಚಲಿಸುವಾಗ ನೀರು ಚೆಲ್ಲಿದರೆ ಅಂತಹ ರಸ್ತೆಗಳಿಗೆ ತೆರಿಗೆ ಕಟ್ಟುವ ಹಾಗಿಲ್ಲ ಎಂಬಿತ್ಯಾದಿ ನಿಯಮಗಳಿವೆ. ಮೂಲಭೂತವಾಗಿ ಇರಬೇಕಾಗಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದ ನಂತರವೇ ಟೋಲ್ ಸಂಗ್ರಹ ಮಾಡಬೇಕು” ಎಂದು ಆಗ್ರಹಿಸಿದರು.
ಕೊಲ್ಹಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, “ಟೋಲ್ ಪ್ಲಾಜ಼ಾದಿಂದ ಸುತ್ತಮುತ್ತಲಿನ ಮುಳವಾಡ ಮಲರ್ಘಾಣ, ಕಲಗುರಕಿ, ರೋಣಿಹಾಳ ಕುಬಕಡ್ಡಿ, ದುಡ್ಯಾಳ, ಕಾರಜೋಳ, ತೊನಶ್ಯಾಳ, ಹೊನಗನಹಳ್ಳಿ, ಚಿಕ್ಕ ಆಸಂಗಿ, ಹಿರೇ ಆಸಂಗಿ, ಕೊಲ್ಹಾರ ಸೇರಿದಂತೆ ಎಲ್ಲ ವಾಹನ ಸವಾರರಿಗೆ ಉಚಿತ ಹಾಗೂ ಶಾಶ್ವತವಾಗಿ ಪ್ರಯಾಣ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ ಮಾತನಾಡಿ, “ರೈತ ಸಂಘಟನೆ ಹಾಗೂ ಉಳಿದ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹಾಗೂ ಟೋಲ್ ಸಂಬಂಧಿಸಿದ ಅಧಿಕಾರಿಗಳೊಡನೆ ಸಭೆ ಮಾಡಿ ಒಂದು ತಿಂಗಳ ಕಾಲಾವಕಾಶ ತೆಗೆದುಕೊಂಡು ಎಲ್ಲ ಮೂಲಭೂತ ಸೌಕರ್ಯ ಮತ್ತು ರೇಲ್ವೆ ಸೇತುವೆ ಮಾಡಲಾಗುವುದು” ಎಂದು ಭರವಸೆ ನೀಡಿದ್ದಾರೆ. ಎಂದರು.
“ಭರವಸೆ ದೊರೆತ ನಂತರ ಹೋರಾಟದ ನಿರ್ಧಾರ ಕೈ ಬಿಡಲಾಯಿತು. ಒಂದು ವೇಳೆ ಈ ತಿಂಗಳಲ್ಲಿ ನಮ್ಮ ಬೇಡಿಕೆಗಳನ್ನು ಬಗೆಹರೆಸದಿದ್ದರೆ ಟೋಲ್ ಬಂದ್ ಮಾಡಿ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣ ದಿನ
ಈ ವೇಳೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಹೆದ್ದಾರಿ ಅಧಿಕಾರಿಗಳೊಂದಿಗೆ ಮಾತನಾಡಿ, ಶೀಘ್ರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಮತ್ತು ಒಂದು ತಿಂಗಳ ಕಾಲಾವಕಾಶದೊಳಗೆ ರೈಲ್ವೆ ಸೇತುವೆ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಮಠ, ವಿಜಯಪುರ ತಾಲೂಕು ಅಧ್ಯಕ್ಷ ಮಹಾದೇವಪ್ಪ ತೇಲಿ, ಉಪಾಧ್ಯಕ ಪ್ರಕಾಶ ತೇಲಿ, ರೋಣಿಹಾಳ ಅಧ್ಯಕ್ಷ ಬಸು ನ್ಯಾಮಗೊಂಡ, ಚಡಚಣ ಪ್ರಧಾನ ಕಾರ್ಯದರ್ಶಿ ಸೋಮು ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಇದ್ದರು.