ಇಡೀ ದೇಶವ್ಯಾಪಿ ಶ್ರಮವಹಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನದಲ್ಲಿರುವ ಅಸಮಾನತೆ ಹೋಗಲಾಡಿಸಿ ಘನತೆಯ ಬದುಕು ಸಾಗಿಸಲು ಕೇಂದ್ರ ಸರ್ಕಾರ ಒಂದೇ ರೀತಿಯ ಸಮಾನ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ ನಾಗರಾಜ್ ಆಗ್ರಹಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸೇವಲಾಲ ಕಲ್ಯಾಣ ಮಂಟಪದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷ(ಮಾರ್ಕ್ಸ್ ವಾದಿ)ದ ಪ್ರಥಮ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
“ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆಗಳು ಒಂದೇ ರೀತಿ ಏರುತ್ತಿದ್ದು, ಅದಕ್ಕನುಗುಣವಾಗಿ ದುಡಿಯುವ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಾಗುತ್ತಿಲ್ಲ. ದೇಶದಲ್ಲಿ ₹30,000ಕ್ಕೆ ಕನಿಷ್ಠ ವೇತನ ಜಾರಿಮಾಡಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಶಿಕ್ಷಣ, ನಿರುದ್ಯೋಗ, ಆರೋಗ್ಯ, ವಸತಿ ಹಾಗೂ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬದಲಾಗಿ ಕೋಮು ಸಾಮರಸ್ಯ ಕದಡುವಂತಹ ದಾಳಿ, ಜಗಳಗಳನ್ನುಂಟುಮಾಡುವ ಮೂಲಕ ಸಮಾಜದಲ್ಲಿ ಜಾತಿ ಧರ್ಮಗಳ ಹೆಸರಿನಲ್ಲಿ ದ್ವೇಷ, ವೈಷಮ್ಯವನ್ನು ನಡೆಸುತ್ತಿದ್ದಾರೆ” ಎಂದರು.
“ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಎಂಬುದು ಮರೀಚಿಕೆಯಾಗಿದೆ. ರೈತರಿಗೆ ಬೆಂಬಲ ಬೆಲೆ ನೀಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದ್ದು, ಸಾಗುವಳಿ ರೈತರಿಗೆ ಹಕ್ಕುಪತ್ರ ನೀಡಿ ಎಂದರೆ ಸರ್ಕಾರ ಬಂಡವಾಳಶಾಹಿಗಳ ಕಂಪೆನಿಗಳಿಗೆ ಭೂಮಿಯನ್ನು ಬರೆದು ಕೊಡುತ್ತಿದೆ” ಎಂದು ಜಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಮಹೇಶ್ ಪತ್ತಾರ ಮಾತನಾಡಿ, “ಕಾರ್ಪೊರೇಟ್ ಬಂಡವಾಳಶಾಹಿ ಹಾಗೂ ಕೋಮುವಾದದ ಅನೈತಿಕ ಸ್ವರೂಪವಾಗಿರುವ ಮೋದಿ ಸರ್ಕಾರ ಕಳೆದ ಹತ್ತು ವರ್ಷದಿಂದ ಜನವಿರೋಧಿಯಾಗಿ ಅಧಿಕಾರ ನಡೆಸುತ್ತಿದೆ. ನಮ್ಮ ಪಕ್ಷ ಈ ಭಾಗದಲ್ಲಿ ಸಣ್ಣದೇ ಆದರೂ, ಈ ಪ್ರದೇಶದ ಜನರ ಸಂಕಷ್ಠಗಳನ್ನು ಪರಿಹರಿಸಲು ಇಲ್ಲಿರುವ ಎಲ್ಲ ಅವಕಾಶವನ್ನು ಬಳಸಿಕೊಂಡು ಜನಚಳವಳಿಯನ್ನು ಬಲಿಷ್ಠವಾಗಿ ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಈ ಸಮ್ಮೇಳನ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರಗಳ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಶೋಷಿತ ಜನವಿಭಾಗವನ್ನು ಸಂಘಟಿಸಿ ಹೋರಾಟ ಕಟ್ಟಲು ನಾವೆಲ್ಲರೂ ಪಣತೊಡಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಪಕ್ಷದ ಹಿರಿಯ ನಾಯಕ ಬಸವರಾಜ ಮಂತೂರು ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಹುತಾತ್ಮ ಸ್ಥಂಭಕ್ಕೆ ಮುಖಂಡರು ಹಾಗೂ ಪ್ರತಿನಿಧಿ ಸಂಗಾತಿಗಳು ಪುಷ್ಪಾರ್ಪಣೆ ಮಾಡಿ ಗೌರವ ಕೆಂಪು ನಮನಗಳನ್ನು ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ ಅಸ್ಮಿತೆಗೆ ಸಿಕ್ಕ ಮೊದಲ ಜಯ; ʼಬಾಡೂಟ ನಿಷೇಧʼ ಕೈಬಿಟ್ಟ ಕಸಾಪ
ನೂತನವಾಗಿ ಜಿಲ್ಲಾ ಸಮಿತಿ ಸದಸ್ಯರಾಗಿ ಎಂ ಎಸ್ ಹಡಪದ, ಬಾಲು ರಾಠೋಡ, ಮೆಹಬೂಬ್ ಹವಾಲ್ದಾರ್, ಪೀರು ರಾಠೋಡ, ಫಯಾಜ್ ತೋಟದ, ಮಹೇಶ ಹಿರೇಮಠ, ಜೈತನುಬಿ ಮುಲ್ಲಾ, ಸಂಕಪ್ಪ ಕುರಹಟ್ಟಿ, ದ್ರಾಕ್ಷಿಯಣಿ ಶಿರೂರು, ಹಾಗೂ ಖಾಯಂ ಆಹ್ವಾನಿತರಾಗಿ ಬಸವರಾಜ ಮಂತೂರು ಒಳಗೊಂಡಂತೆ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಬಾಲು ರಾಠೋಡ ಸರ್ವಾನುಮತದಿಂದ ಆಯ್ಕೆಯಾದರು.
ಸಮ್ಮೇಳನದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಶಾಖಾ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಚೆನ್ನಪ್ಪ ಗುಗಲೋತ್ತರ, ಚಂದ್ರು ರಾಠೋಡ, ಶಿವಾಜಿ ಗಡ್ಡದ, ರೇಣಪ್ಪ ಕಲ್ಗುಡಿ, ಕರಿಯಮ್ಮ ಗುರಿಕಾರ, ನಜೀರ ಮಾಲ್ದಾರ ಸೇರಿದಂತೆ 80ಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು ಇದ್ದರು.