ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ತಿದ್ದುಪಡಿ ಮೂಲಕ ಕೃಷಿ ಕೂಲಿಕಾರ್ಮಿಕರು, ರೈತರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿ, ಬಡವರ ಅನ್ನ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ಪ್ರಾಂತ ಕೃಷಿಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಬೃಹತ್ ಬೈಕ್ ಜಾಥಾ ಮತ್ತು ಪ್ರತಿಭಟನೆ ನಡೆಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಕೆ ನಾಗರಾಜ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡವರನ್ನು ಬೀದಿಗೆ ತರಲು ಯತ್ನಿಸುತ್ತಿವೆ. ಬಿಪಿಎಲ್ ಕಾರ್ಡಿನ ಪಡಿತರ ಅಕ್ಕಿ ತಿಂದು ಬದುಕುತ್ತಿರುವ ಬಡವರಿಗೆ ಇರುವ ಕಾರ್ಡನ್ನು ರದ್ದುಗೊಳಿಸಿ ಅನ್ಯಾಯ ಮಾಡುತ್ತಿವೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಆರೋಗ್ಯ ಸೌಲಭ್ಯಗಳು ದೊರೆಯುವುದಿಲ್ಲ. ಇಂತಹ ಅವೈಜ್ಞಾನಿಕ ಮತ್ತು ಸಂವಿಧಾನ ಬಾಹಿರ ನಿರ್ಧಾರಗಳಿಂದ ತಾಲೂಕಿನಲ್ಲಿ ಸುಮಾರು 1,000 ಬಿಪಿಎಲ್ ಕಾರ್ಡ್ ರದ್ದು ಮಾಡಿ, ಬಡವರನ್ನು ಬೀದಿಗೆ ತರುವತ್ತ ಹೊರಟಿದ್ದಾರೆ. ಕೂಡಲೇ ಇಂತಹ ನಿರ್ಧಾರಗಳನ್ನು ಕೈಬಿಡಬೇಕು. ಯಾವುದೇ ಬಡವನಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಕೂಲಿಕಾರ್ಮಿಕರ ಸಂಘಟನೆಯು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಗಳಿಗೆ ಬಿಸಿ ಮುಟ್ಟಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಅಖಿಲ ಎಐಎಡಬ್ಲ್ಯೂಯುನ ರಾಜ್ಯ ಉಪಾಧ್ಯಕ್ಷ ಎಂ ಪಿ ಮುನಿವೆಂಕಟಪ್ಪ ಮಾತನಾಡಿ, “ರಾಜ್ಯದಲ್ಲಿ ಸಿದ್ಧರಾಮಯ್ಯನವರು ಬಡವರ ಪರ ಸರ್ಕಾರವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಬಡವರಿಗೆ ಇರುವಂತಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿರುವುದು ಏಕೆ? ನೀವು ನಿಜವಾಗಿ ಬಡವರ ಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದು ಮತ್ತಷ್ಟು ಬಡವರಿಗೆ ಕಾರ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ನೀವು ಶ್ರೀಮಂತರ ಕಾರ್ಡ್ ರದ್ದು ಮಾಡುತ್ತಿರುವುದಾಗಿ ಉತ್ತರಿಸುತ್ತೀರಿ. ಹಾಗಾದರೆ ಬಡವರ ಕಾರ್ಡುಗಳನ್ನು ಶ್ರೀಮಂತರಿಗೆ ಏಕೆ ಕೊಟ್ಟಿದ್ದೀರಿ? ಇಂತಹ ಕೃತ್ಯವೆಸಗಿದವರ ವಿರುದ್ಧ ನಿಮ್ಮ ಕ್ರಮವೇನು” ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು.
ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ ಮಾತನಾಡಿ, “ಕೇಂದ್ರ ಸರ್ಕಾರವು ಬಡವರಿಗೆ ಅನುಕೂಲವಾದ ಸಾರ್ವಜನಿಕ ಉದ್ಯಮಗಳನ್ನು ಸಂಪೂರ್ಣ ಹದೋಗತಿಗೆ ತಂದು, ಬಂಡವಾಳಶಾಹಿ ಕಾರ್ಪೊರೇಟ್ ಕಂಪೆನಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಮೂಲಕ ಬಡವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ” ಎಂದು ಆಕ್ರೋಶ ಹೊರ ಹಾಕಿದರು.
“ಬಿಪಿಎಲ್ ಕಾರ್ಡ್ಗೆ 35 ಕೆಜಿ ಅಕ್ಕಿ ಮತ್ತು ಅಗತ್ಯವಿರುವ 14 ಆಹಾರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಬೇಕು. ಅರ್ಹ ಬಡವರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ಗೆ ಬದಲಿಸಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು.
ಈಗಾಗಲೇ ರದ್ದುಪಡಿಸಿರುವ ಅರ್ಹ ಬಿಪಿಎಲ್ ಕಾರ್ಡ್ಗಳನ್ನು ಕೂಡಲೇ ಬಡವರಿಗೆ ಹಂಚಿಕೆ ಮಾಡಬೇಕು. ಬಿಪಿಎಲ್ ಕಾರ್ಡ್ಗಳಿಗೆ ಹಾಕಿರುವ ಎಂಟು ಅವೈಜ್ಞಾನಿಕ ಮಾನದಂಡಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಪಸ್ ಪಡೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಗರ ಆಯ್ಕೆ
“ಇ-ಕೆವೈಸಿ, ಪಾನ್ ಕಾರ್ಡ್ ಜೋಡಣೆಯ ಹೆಸರಿನಲ್ಲಿ ಬಡವರಿಗೆ ಹಿಂಸೆ ನೀಡುವುದನ್ನು ತಡೆಯಬೇಕು. ಹಿರಿಯ ವಯಸ್ಸಿನ ಪಡಿತರ ಚೀಟಿದಾರರ ಬೆರಳಚ್ಚು ಕೆಲವೊಮ್ಮೆ ಆನ್ಲೈನ್ ತೆಗೆದುಕೊಳ್ಳದೇ ಇರುವುದರಿಂದ ಇವರಿಗೆ ಪಡಿತರಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಕೂಡಲೇ ಇವರಿಗೆ ಮೊಬೈಲ್ನ ಒಟಿಪಿ ಮೂಲಕ ಪಡಿತರಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಅಕ್ಕಿ ಹಣವನ್ನು ಬ್ಯಾಂಕ್ ಖಾತೆಗೆ ಕೂಡಲೇ ಬಿಡುಗಡೆ ಮಾಡಬೇಕು. ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣವನ್ನು ಕೂಡಲೇ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಬ್ಯಾಂಕ್ ಖಾತೆಗೆ ಹಣ ಹಾಕುವುದರ ಬದಲಿಗೆ ಪಡಿತರ ಚೀಟಿದಾರರಿಗೆ ನೇರವಾಗಿ ಅಕ್ಕಿಯನ್ನು ವಿತರಿಸಬೇಕು” ಎಂದರು.
ಈ ಸಂದರ್ಭದಲ್ಲಿ ನಾನಾ ಸಂಘಟನೆಗಳ ಮತ್ತು ಸಿಪಿಎಂ ಮುಖಂಡರಾದ ಬಿ ಸಾವಿತ್ರಮ್ಮ, ಎಂ ಎನ್ ರಘುರಾಮ ರೆಡ್ಡಿ, ಚನ್ನರಾಯಪ್ಪ, ವಾಲ್ಮೀಕಿ ಅಶ್ವಥಪ್ಪ, ಜಿ ಕೃಷ್ಣಪ್ಪ, ಮುನಿಯಪ್ಪ ಮುಸ್ತಫಾ, ಡಿ ಸಿ ಶ್ರೀನಿವಾಸ್, ಮಂಜುನಾಥ್, ಎಲ್ ವೆಂಕಟೇಶ್, ಜಹೀರ್ ಬೇಗ್, ಮುಸ್ತಾಫಾ, ಚಲಪತಿ ಸೇರಿದಂತೆ ಹಲವರು ಇದ್ದರು.
