ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರ ನೀಡಬೇಕೆಂದು ಆಗ್ರಹಿಸಿ ಮಂಡ್ಯ ಜಿಲ್ಲೆಯ ಹಲವಾರು ಸಂಘಟನೆಗಳು ನಾನಾ ರೀತಿಯಲ್ಲಿ ವಿಭಿನ್ನ ಪ್ರತಿಭಟನೆ ನಡೆಸುತ್ತಿವೆ. ಸಂಘಟನೆಗಳ ಹೋರಾಟ ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಆದರೆ, ಯಾವುದೇ ನಿರ್ಧಾರಕ್ಕೆ ಬಾರದ ಕಾರಣ ಬಾಡೂಟ ವಿಚಾರದ ಹಗ್ಗ-ಜಗ್ಗಾಟ ಮುಂದುವರೆದಿದೆ.
ಮಂಗಳವಾರ, ಮಂಡ್ಯದ ಖಾಸಗಿ ಹೋಟೆಲ್ನಲ್ಲಿ ಸಚಿವ ಚಲುವರಾಯಸ್ವಾಮಿ ಅವರು ಹೋರಾಟಗಾರರೊಂದಿಗೆ ಸಭೆ ನಡೆಸಿದ್ದಾರೆ. ಸಮ್ಮೇಳನದಲ್ಲಿ ಮಾಂಸಾಹಾರ ಇರಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಸಮ್ಮೇಳನವು ಮೂರು ದಿನಗಳ ಕಾಲ ನಡೆಯಲಿದೆ. ಈ ಪೈಕಿ ಒಂದು ಹೊತ್ತಿನ ಊಟದ ಸಮಯದಲ್ಲಾದರೂ ಕನಿಷ್ಠ ಪ್ರಮಾಣದ ಕೋಳಿ ಮಾಂಸ ಹಾಗೂ ಮೊಟ್ಟೆ ಆಹಾರವನ್ನು ಬಡಿಸಬೇಕು ಎಂದು ಹೋರಾಟಗಾರರು ಪಟ್ಟುಹಿಡಿದಿದ್ದಾರೆ.
ಹೋರಾಟಗಾರರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವರು, “ನಾವು ಮಾಂಸಾಹಾರವನ್ನು ಕೀಳೆಂದು ಪರಿಗಣಿಸಿಲ್ಲ. ಎಲ್ಲ ಆಹಾರದ ಬಗ್ಗೆಯೂ ಗೌರವವಿದೆ. ನಿಮ್ಮ ಹೋರಾಟ, ಉದ್ದೇಶದ ಬಗ್ಗೆ ಗೌರವವಿದೆ. ನಮ್ಮ ಮೇಲೆ ಭರವಸೆ ಇಡಿ” ಎಂದಷ್ಟೇ ಹೇಳಿದ್ದಾರೆ. ಸ್ಪಷ್ಟವಾಗಿ ಅವರ ನಿರ್ಧಾರವನ್ನು ತಿಳಿಸಿಲ್ಲ.
ಸಚಿವರೂ ಸೇರಿದಂತೆ ಸಮ್ಮೇಳನ ಆಯೋಜನೆಯಲ್ಲಿ ಮುಂಚೂಣಿಯಲ್ಲಿರುವವರು ಸ್ಪಷ್ಟವಾದ ನಿರ್ಧಾರ ಕೈಗೊಳ್ಳದ ಕಾರಣ, ಬಾಡೂಟಕ್ಕಾಗಿನ ಹೋರಾಟ ಮುಂದುವರೆದಿದೆ.
ಮಂಗಳವಾರ ನಡೆದ ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕರುನಾಡು ಸೇವಕರು ಸಂಘಟನೆಯ ಎಂ.ಬಿ ನಾಗಣ್ಣಗೌಡ, ಸಿಪಿಐಎಂ ಕೃಷ್ಣೇಗೌಡ, ಜಾಗೃತ ಕರ್ನಾಟಕದ ಸಂತೋಷ್, ಸಿಐಟಿಯು ಸಿ ಕುಮಾರಿ, ದಸಂಸ ಎಂ.ವಿ.ಕೃಷ್ಣ, ಕರ್ನಾಟಕ ಸಮ ಸಮಾಜ ಸಂಘಟನೆಯ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್ ನ ಗಂಗರಾಜು, ಪರಿವರ್ತನ ಸಂಸ್ಥೆಯ ಟಿ.ಡಿ.ನಾಗರಾಜು, ವಕೀಲರಾದ ಲಕ್ಷ್ಮಣ್ ಚೀರನಹಳ್ಳಿ, ಜೆ.ರಾಮಯ್ಯ ಸೇರಿದಂತೆ ಮತ್ತಿತರರತು ಉಪಸ್ಥಿತರಿದ್ದರು.