ಸಂಸತ್ತಿನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಅಂಬೇಡ್ಕರ್ ವೃತ್ತದ ಬಳಿ ವಿವಿಧ ಸಂಘಟನೆಗಳ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ, ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತ ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಒತ್ತಾಯಿಸಿದರು.
ಗುರುನಾಥ್ ಉಳ್ಳಿಕಾಶಿ ಅಂಬೇಡ್ಕರ್ ಅವರನ್ನು ಮಹಾ ಮಾನವತಾವಾದಿ ಎಂದು ಕರೆಯುತ್ತೇವೆ. ಹೀಗಾಗಿ ಅವರು ಭಾರತಕ್ಕೆ ಮಾತ್ರ ಸೀಮಿತವಲ್ಲ. ಇಡೀ ವಿಶ್ವಕ್ಕೆ ಸೇರಿದವರು. ಅಂತಹ ಮಹಾನ್ ಬಾಬಾಸಾಹೇಬರ ಕುರಿತು ಅಮಿತ್ ಷಾ ಅವರು ತಮ್ಮ ಮನಸ್ಸಿನ ಒಳಗಿನ ಮನುವಾದವನ್ನು ಹೊರಹಾಕಿದ್ದಾರೆ. ಅಂಬೇಡ್ಕರ್ ಹೆಸರು ಹೇಳುವವರು ನರಕದಲ್ಲಿದ್ದಾರೆ ಮತ್ತು ಅಂಬೇಡ್ಕರ್ ಬಿಟ್ಟು ಬಿಜೆಪಿ ಹಿಂದೆ ಬರಲು ಜನರಮ್ನು ಆಹ್ವಾನಿಸುವ ಒಳಮರ್ಮದಿಂದ ಹೇಳಿಕೆ ಕೊಟ್ಟಿದ್ದಾರೆ. ಇವತ್ತಿಗೂ ಸಮಾಜದಲ್ಲಿ ಮನುವಾದ ಆಚರಣೆಯಲ್ಲಿದೆ. ಮೋದಿ ಮತ್ತು ಅಮಿತ್ ಷಾ ಇವತ್ತು ಸಂವಿಧಾನ ಮತ್ತು ಅಂಬೇಡ್ಕರ್ ಇರದೇ ಹೋಗಿದ್ದರೆ; ಗಡಿಪಾರು ಗಿರಾಕಿ ಜೈಲಿನಲ್ಲಿ ಹಾಗೂ ಪ್ರಧಾನಿ ಚಹಾ ಮಾರುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಷಾ ದೇಶದ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು
ಅಮಿತ್ ಶಾ ಅವರಿಗೆ ವಾಕ್ ಸ್ವಾತಂತ್ರ್ಯ ಕೊಟ್ಟಿದ್ದೇ ಅಂಬೇಡ್ಕರ್ ಮತ್ತು ಅದಕ್ಕೂ ಪೂರ್ವ ನಾವೆಲ್ಲ ನರಕದಲ್ಲಿದ್ದೆವು. ಅಂಬೇಡ್ಕರ್ ಬಂದಮೇಲೆನೇ ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆಗೆ ಒಳಗಾಗಿದ್ದ ಶೋಷಿತರು ಸ್ವರ್ಗಕ್ಕೇ ಏರಿದರು. ಬಹುಶಃ ಅಮಿತ್ ಷಾ ಅವರಿಗೆ ಇತಿಹಾಸದ ಬಗ್ಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಈ ಕೂಡಲೇ ಅವರನ್ನು ಮನೆಗೆ ಕಳುಹಿಸುವ ಕೆಲಸವಾಗಬೇಕು ಎಂದು ಸಮತಾ ಸೈನಿಕ ದಳದ ಶಂಕರ್ ಅಜಮನೆ ಹೇಳಿದರು.

ಮಹಿಳಾ ಸಂಘಟನೆಯ ಇಂಧುಮತಿ ಶೇರಗಾವಿ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯಗಳು ಇಂದಿಗೂ ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುತ್ತಿವೆ. ನಾವೆಂದೂ ಹಿಂದೂವಲ್ಲ ಮತ್ತು ಅಂಬೇಡ್ಕರ್ ಅವರು ವೈದಿಕರಿಂದ ತುಳಿತಕ್ಕೊಳಗಾದ ದಲಿತರನ್ನು ಸ್ವರ್ಗಕ್ಕೇರಿಸಿದರು. ಅಂಬೇಡ್ಕರ್ ಅವರೇ ನಮಗೆ ನಿಜವಾದ ದೇವರಾಗಿದ್ದಾರೆ ಎಂದರು.
ದಸಂಸ ರಾಷ್ಟ್ರೀಯ ಅಧ್ಯಕ್ಷ ಸದಾನಂದ ತೇರದಾಳ ಮಾತನಾಡಿ, ಅಮಿತ್ ಶಾ ಪಾರ್ಲಿಮೆಂಟ್ ನಲ್ಲಿ ಅಂಬೇಡ್ಕರ, ಅಂಬೇಡ್ಕರ, ಅಂಬೇಡ್ಕರ ಅನ್ನುವ ಫ್ಯಾಶನ್ ಆಗಿದೆ. ಇಷ್ಟು ಸಾರಿ ದೇವರನ್ನು ನೆನಪಿಸಿದ್ದರೆ 7 ಸಾರಿ ಸ್ವರ್ಗ ಸಿಗುತ್ತಿತ್ತು ಸಾರ್ವಜನಿಕವಾಗಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಭೂಮಿಯ ಮೇಲೆ ಬದುಕಿರುವ ಯಾವ ಒಬ್ಬ ವ್ಯಕ್ತಿಯಾದರೂ ಸ್ವರ್ಗವನ್ನು ನೋಡಿದ್ದಾನೆಯೇ? ಮನುವಾದಿ ಬ್ರಾಹ್ಮಣರು ಮತ್ತು ಅಂಧ ಭಕ್ತರು ಬಳಸುವ ಪದಗಳು ಭಾರತ ದೇಶದ ಮುಗ್ಧ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಈ ಕೂಡಲೇ ಅಮಿತ್ ಶಾ ಅವರನ್ನು ಗೃಹ ಸಚಿವ ಸ್ಥಾನದಿಂದ ಹಾಗೂ ಸಂಸದ ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಸನ್ಮಾನ್ಯ ರಾಷ್ಟ್ರಪತಿಗಳಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.
ಈ ವರದಿ ಓದಿದ್ದೀರಾ? ಬೀದರ್ | ₹75 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂ ಮಾಪಕ
ಪ್ರತಿಭಟನೆಯಲ್ಲಿ ಸುದೀರ ಕ್ಷತ್ರಿಯ, ಪ್ರಕಾಶ ಉಂಜಾಳ, ರಾಜು ನಾಯ್ಕರ, ಮಾರುತಿ ಹುಟಗಿ, ಉಮೇಶ ಚಲವಾದಿ, ಸಮಿದ ಅಹ್ಮದ ಮುಲ್ಲಾ, ಅಬ್ದುಲ ಹಮೀದ ಬೆಂಗಾಲಿ, ದ್ರಾಕ್ಷಾಯಣಿ ಬಿದರಗಡ್ಡಿ, ಜ್ಯೋತಿ ದೊಡ್ಡಮನಿ, ಮೀನಾಕ್ಷಿ ಬನ್ನಿಗಿಡದ, ಈರಮ್ಮ, ಸತ್ಯವೇಣಿ, ಪ್ರಕಾಶ ಕಂಜರಬಾಟ, ಮಂಜುನಾಥ ಕಲಾಲ, ಚಿದಾನಂದ ಮುಂಡಗೋಡ, ಗೀತಾ ಜೋಡಂಗಿ, ರೋಜಿ ನವಲಗುಂದ ಮುಂತಾದವರು ಉಪಸ್ಥಿತರಿದ್ದರು.