ದೇಶ ಮತ್ತು ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗಿದ್ದು, ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಕೇವಲ ನಾವು ಭಾರತದ ಪ್ರಜೆ ಅಂದ ಮಾತ್ರಕ್ಕೆ ಕೆಲಸವಾಗದು ಎಂದು ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಚಂದ್ರ ಪೂಜಾರಿ ಧಾರವಾಡದ ನಿವೃತ್ತ ನೌಕರರ ಸಂಘದಲ್ಲಿ ‘ನಮ್ಮ ಕರ್ನಾಟಕ ನಡೆದ 50 ಹೆಜ್ಜೆ-ಮುಂದಿನ ದಿಕ್ಕು’ ಶೀರ್ಷಿಕೆ ಅಡಿಯಲ್ಲಿ ನಡೆದ ಈದಿನ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಎಲ್ಲ ಸಂಸ್ಥೆಗಳಲ್ಲೂ ಪಾಳೆಗಾರಿಕೆ ಎದ್ದು ಕಾಣುತ್ತಿದ್ದು, ಕಳೆದ 70 ವರ್ಷಗಳಲ್ಲಿ ಶಿಷ್ಟಾಚಾರವನ್ನು ಕಲಿಸಿದ್ದು ಕಂಡಿಲ್ಲ. ದೇಶದಲ್ಲಿ ಯಾರಿಗೆ ಅನ್ಯಾಯವಾದರೂ ಅದು ನನ್ನ ಅನ್ಯಾಯ ಎಂದು ಕನಿಷ್ಠ ಕನಿಕರ ಪಡುವ ಗುಣವಾದರೂ ನಮ್ಮಲ್ಲಿರಬೇಕು. ಆ ರೀತಿಯಲ್ಲಿ ರಾಜಕೀಯ, ಮಾಧ್ಯಮಗಳು, ಶಿಕ್ಷಣ ಸಂಸ್ಥೆಗಳು ಇದೆಯೇ? ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಜೀತದಾಳುಗಳಂತೆ ಬದುಕುವ ವಾತಾವರಣವನ್ನು ಬಲಾಡ್ಯರು ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಶೇಷ ಸಂಚಿಕೆ ಬಿಡುಗಡೆಯ ಜೊತೆಗೆ ಈದಿನ ನ್ಯೂಸ್ ಆ್ಯಪ್ ಬಿಡುಗಡೆಗೊಳಿಸಿದರು. ಮತ್ತು ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ನಡೆಸಿದರು. ಇದೇ ಸಂದರ್ಭದಲ್ಲಿ ಈದಿನ ಧಾರವಾಡ ಜಿಲ್ಲಾ ಹೆಲ್ಫಲೈನ್ ನಂಬರ್ 9035053803 ಅನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಲಗತ್ತಿ ಮಾತನಾಡಿ, ದೇಶಪ್ರೇಮದ ನೆಪದಲ್ಲಿ ಧರ್ಮದ ರಕ್ಷಣೆ ಮಾಡುತ್ತೇವೆ ಎನ್ನುವ ಯುವಕರಿಗೆ ತಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿಲ್ಲದಿರುವುದು ದುರಂತ. ಇಂತಹ ವಾತಾವರಣಗಳನ್ನು ನೋಡಿಕೊಂಡು ಬಹುತೇಕ ಪ್ರಗತಿಪರರು ಎನಿಸಿಕೊಂಡವರು ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ಯುವಕರನ್ನು ಸಾಮಾಜಿಕ ಚಿಂತನೆಯ ಕಡೆಗೆ ಎಳೆದು ತರುವುದಕ್ಕೆ ಜಾಗೃತ ಕಾರ್ಯಕ್ರಮಗಳ ಅವಶ್ಯವಿದೆ ಎಂದರು.

ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ಧಣ್ಣ ತೇಜಿ ಮಾತನಾಡಿ, ಹೆಣ್ಣು ಮಕ್ಕಳ ಪರ ಇರಬೇಕಿದ್ದ ಸರ್ಕಾರ ಸಣ್ಣ ಮಕ್ಕಳ ಮೇಲೆ ಅತ್ಯಾಚಾರವಾದರೂ ಮಾತನಾಡುವುದಿಲ್ಲ. ಈ ರೀತಿಯ ಪ್ರಕರಣಗಳು ಕಂಡು ಬಂದಾಗ ಚುಟುಕು ರೀತಿಯ ಸುದ್ದಿಗಳು ಬಂದು ಹೋಗುತ್ತವೆ. ಆ ಕುರಿತಾಗಿ ಮಾಧ್ಯಮ ಸಂಸ್ಥೆಗಳು ಕೂಡ ಹೆಚ್ಚು ಚರ್ಚೆ ಮಾಡುವುದಿಲ್ಲ. ಮಹಿಳೆಯರು ಅತ್ಯಾಚಾರಿಗಳ ವಿರೋಧ ಇರಬೇಕೆ ಹೊರತು ಅರೋಪಿ ಪರ ನಿಲ್ಲುವುದು ವಿಪರ್ಯಾಸ ಎಂದರು.
ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕನಗೌಡ ಪಾಟೀಲ್ ಮಾತನಾಡಿ, ಮನುಷ್ಯರಲ್ಲಿ ಒಡಕು ಉಂಟುಮಾಡುವ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಮತ್ತು ಬಡತನ ಮತ್ತು ಮನುವಾದ ಬಹಳ ಗಂಭೀರವಾದ ಶಬ್ಧಗಳು. ಅವುಗಳನ್ನು ಕಿತ್ತು ಹಾಕಬೇಕಿದೆ ಎಂದು ಕುವೆಂಪು ಹೇಳಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿರುವ ಈ ಸಂದರ್ಭದಲ್ಲಿ ಸಂವಿಧಾನಕ್ಕೆ ಕುತ್ತು ಬಂದಿದೆ. ಅತ್ಯಾಚಾರಿಗಳನ್ನು ಮಾಲೆ ಹಾಕಿ ಸ್ವಾಗತಿಸುವ ನೀಚ ವಾತಾವರಣ ಸೃಷ್ಠಿಯಾಗಿದೆ ಎಂದರು.
ಬಸವರಾಜ ಗೊರವರ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿರುವ ನಾವೆಲ್ಲರು ಒಗ್ಗಟ್ಟಾದರೆ ಕೋಮುವಾದಿ ಶಕ್ತಿಗಳನ್ನು ಎದುರಿಸುವುದು ಕಷ್ಟವೇನಲ್ಲ. ಪ್ರೇಮ ಕಾಶ್ಮೀರವು ಇವತ್ತು ಧ್ವೇಷ ಕಾಶ್ಮೀರವಾಗಿ ಪರಿವರ್ತನೆಯಾಗಿದೆ. ಕ್ರಿಯಾಶೀಲವಾಗಿ ಸಮಾಜವನ್ನು ಬದಲಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.
ಬಸವತತ್ವ ಪ್ರಚಾರಕ ಮಲ್ಲೇಶ್ ಹಳಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಈದಿನ ಜನರಿಂದ ಜನರಿಗಾಗಿ ಶುರುವಾದ ಮಾಧ್ಯಮವಾಗಿದೆ. ಕುವೆಂಪು ವಿಚಾರಕ್ಕೆ ಬಂದಾಗ ಅವರ ಬದುಕು ಮತ್ತು ಬರಹ ಒಂದೇ ಆಗಿತ್ತು. ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾವೆಲ್ಲ ಒಂದಾಗಿ ಬಾಳಬೇಕು ಎಂದರು.
ಈ ವರದಿ ಓದಿದ್ದೀರಾ? ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈದಿನ ವಿಶೇಷ ಸಂಚಿಕೆ, ನ್ಯೂಸ್ ಆ್ಯಪ್ ಬಿಡುಗಡೆ
ಗ್ರಾಮೀಣ ಕೂಲಿಕಾರರ ಸಂಘಟನೆಯ ಸಂಚಾಲಕಿ ನಿಂಗಮ್ಮ ಸವಣೂರ ಮಾತನಾಡಿ, ಮಾಧ್ಯಮಗಳು ಕೇವಲ ಹಣಕ್ಕಾಗಿ ಹಾತೋರಿಯುತ್ತಿವೆ. ಹೀಗಾಗಿ ಜನರ ಕಷ್ಟಗಳು ಬಹುತೇಕ ಮಾಧ್ಯಮಗಳಿಗೆ ಕಾಣುತ್ತಿಲ್ಲ. ಹೀಗಾಗಿ ಮಾಧ್ಯಮಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ? ಎಂಬುದು ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು..
ಪ್ರಾರಂಭದಲ್ಲಿ ಮಾರುತಿ ಗೊಲ್ಲರ್ ವಚನ ಪ್ರಾರ್ಥನೆ ಮಾಡಿದರು. ಅರುಣ್ ಮೂಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಇಂಡಿಪೆಂಡೆಂಟ್ ಸಂಗ್ರಾಮ್ ನ್ಯೂಸ್ ಸಂಪಾದಕ ಎಮ್ ಕೆ ನದಾಫ್, ಗ್ರಾಮೀಣ ಕೂಲಿಕಾರರ ಸಂಘಟನೆ ಸಂಚಾಲಕಿ ನಿಂಗಮ್ಮ ಸವಣೂರ, ಜಾಗೃತ ಕರ್ನಾಟಕ ಸಂಚಾಲಕ ಮುಸ್ತಾಕ್ಅಹ್ಮದ್ ಹಾವೇರಿಪೇಠ, ಜಾಗತಿಕ ಲಿಂಗಾಯತ ಮಹಾಸಭಾ ಸಂಚಾಲಕ ರವಿ ಬಾಗೋಡಿ, ಕೆ ರಾಮರೆಡ್ಡಿ ವೇದಿಕೆಮೇಲೆ ಉಪಸ್ಥಿತರಿದ್ದರು.