ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಲವು ಭಾಗಗಳಲ್ಲಿ ಸರ್ಕಾರ ಅಣುಸ್ಥಾವರ ನಿರ್ಮಾಣಕ್ಕೆ ಸರ್ವೇ ನಡೆಸುತ್ತಿರುವುದರಿಂದ ಸ್ಥಳೀಯರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗಾವತಿಯ ಚಿಕ್ಕಬೆಣಕಲ್-ಎಡೇಹಳ್ಳಿ ಬಳಿ ಕೇಂದ್ರ ಸರ್ಕಾರವು ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಮುಂದಾಗಿದ್ದು, ಸರ್ವೇ ಕಾರ್ಯ ನಡೆಸುತ್ತಿದೆ. ಹಾಗಾಗಿ ಸಾರ್ವಜನಿಕರು, ಇತಿಹಾಸಕಾರರು ಭಾರೀ ವಿರೋಧ ವ್ಯಕ್ತಪಡಿಸಿದ್ದು, “ಮೂರು ಸಾವಿರ ವರ್ಷಗಳ ಇತಿಹಾಸವಿರುವ ಶಿಲಾ ಶಾಸನಗಳಿರುವ ಸ್ಥಳಗಳಲ್ಲಿ ಅಣುಸ್ಥಾವರಕ್ಕೆ ಸರ್ವೇ ನಡೆಸಿರುವುದು ಖಂಡನೀಯ” ಎಂದಿದ್ದಾರೆ.
“ಕೊಪ್ಪಳ ಜಿಲ್ಲೆಯ ಅರಸಿನಕೇರಿ ಭಾಗದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಜಿಲ್ಲಾಡಳಿತ ಭೂಮಿ ಹುಡುಕಾಟ ನಡೆಸಿತ್ತು. ಆ ಭಾಗದಲ್ಲಿ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈಗ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್-ಎಡೇಹಳ್ಳಿ ಮಾರ್ಗದ ಬಳಿ 1,200 ಎಕರೆ ಭೂಮಿಯನ್ನು ಗುರುತಿಸಿದ್ದು, ಅಣುಸ್ಥಾವರಕ್ಕೆ ಮುಂದಾಗಿದೆ” ಎಂದು ಆರೋಪಿಸಿದರು.
“ಕೊಪ್ಪಳ ಜಿಲ್ಲಾಡಳಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತ್ವರಿತಗತಿಯಲ್ಲಿ ಪ್ರಕ್ರಿಯೆ ನಡೆಸಬೇಕೆಂಬ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆಯ ಅಧಿಕಾರಗಳು ಮೂರು ದಿನಗಳ ಕಾಲ ಸರ್ವೇ ನಡೆಸಿದ್ದಾರೆ. ಸರ್ವೇ ಮಾಡಿದ ದಾಖಲೆಗಳನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಚಿಕ್ಕಬೆಣಕಲ್-ಎಡೆಹಳ್ಳಿ ಮಾರ್ಗದ ಬಳಿ ತ್ವರಿತಗತಿಯಲ್ಲಿ ಸರ್ವೇ ಮಾಡಲಾಗಿದೆ. 1200 ಎಕರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದರೂ ಅವಶ್ಯಕತೆ ಬಿದ್ದರೆ ಮುಕ್ಕುಂಪ, ಎಡೆಹಳ್ಳಿ, ಚಿಕ್ಕಬೆಣಕಲ್, ಹಿರೇಬೆಣಕಲ್, ಲಿಂಗದಳ್ಳಿ, ಹೇಮಗುಡ್ಡ ಸೇರಿದಂತೆ 10 ಕಿಮೀ ವ್ಯಾಪ್ತಿಗೆ ಬರುವ ಗ್ರಾಮಗಳ ರೈತರ ಭೂಮಿಯನ್ನೂ ಅಣುಸ್ಥಾವರ ಸ್ಥಾಪನೆಗೆ ಪಡೆದುಕೊಳ್ಳಲು ಸರ್ಕಾರ ಮುಂದಾಗಿದೆ” ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ರಸ್ತೆಯಲ್ಲಿ ತಲೆಬುರಡೆ, ಎಲುಬುಗಳನ್ನಿಟ್ಟು ಮೌಢ್ಯಾಚರಣೆ; ಸಾರ್ವಜನಿಕರಲ್ಲಿ ಆತಂಕ
“ಐತಿಹಾಸಿಕ ಹಿನ್ನೆಲೆ ಇರುವ ಚಿಕ್ಕಬೆಣಕಲ್ನಲ್ಲಿ ಜಾಗ ಗುರುತು ಮಾಡಿ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್- ಎಡೇಹಳ್ಳಿ ಮಾರ್ಗದ ಸನಿಹದ ಅರಣ್ಯ ಇಲಾಖೆಗೆ ಸಂಬಂಧಿಸಿದ 1200 ಎಕರೆ ಭೂಮಿಯನ್ನು ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಸರ್ವೇ ಮಾಡಲಾಗಿದೆ. ಈ ಕುರಿತು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ದಾಖಲೆ ಸಲ್ಲಿಸಲಾಗಿದೆ” ಎಂದು ಗಂಗಾವತಿ ತಹಶೀಲ್ದಾರ್ ಯು ನಾಗರಾಜ್ ಮೌಖಿಕವಾಗಿ ತಿಳಿಸುತ್ತಿದ್ದಂತಯೇ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.