ಶನಿವಾರ ಮುಂಜಾನೆ ಹಿರಿಯ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಅವರ ಕೆಲಸಗಳನ್ನು ನೆನಪಿಸಿಕೊಂಡಿದ್ದಾರೆ. ಅಸ್ಸಾದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಎಂದಾದರೆ, ಆದಿವಾಸಿಗಳ ಕುರಿತು ಅಸ್ಸಾದಿ ಅವರು ಸಲ್ಲಿಸಿರುವ ವರದಿಯನ್ನು ಜಾರಿಗೊಳಿಸುವುದು ಎಂದು ಹಿರಿಯ ವಕೀಲ, ಚಿಂತಕ ಸಿ.ಎಸ್ ದ್ವಾರಕಾನಾಥ್ ಹೇಳಿದ್ದಾರೆ.
ಅಸ್ಸಾದಿ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಪ್ರಕಟಣೆ ನೀಡಿರುವ ದ್ವಾರಕಾನಾಥ್, “ಇಂದು ಬೆಳಗಿನಜಾವ ಎಚ್ಡಿ ಕೋಟೆ ಜೇನುಕುರುಬರ ಹಾಡಿಯಲ್ಲಿ ಮಲಗಿದ್ದ ಆದಿವಾಸಿ ಚಿಕ್ಕಣ್ಣನನ್ನು ಎಬ್ಬಿಸಿ ಮುಸ್ಸಾಫರ್ ಅಸ್ಸಾದಿಯವರ ಸಾವಿನ ಬಗ್ಗೆ ಹೇಳಿದೆ. ಒಂದು ಕ್ಷಣ ಗಾಬರಿಯಾದ ಚಿಕ್ಕಣ್ಣನ ಬಾಯಲ್ಲಿ ಮಾತುಗಳೇ ಹೊರಡಲಿಲ್ಲ! ಆತನಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದೇ ತೋಚಲಿಲ್ಲ! ‘ಯಾಕೆ ಹೀಗಾಯಿತು ಸರ್..’ ಅಂತ ಹೇಳಿ ಮೌನವಾದ. ಮುಸ್ಸಾಫರ್ ಅಸ್ಸಾದಿಯವರ ವರದಿಯನ್ನು ‘ಹೋಲಿ ಬೈಬಲ್’ ನಂತೆ ಅಪ್ಪಿಕೊಂಡು ನಮ್ಮ ‘ಅಲೆಮಾರಿ ಬುಡಕಟ್ಟು ಮಹಾಸಭಾ’ ವತಿಯಿಂದ ಸರ್ಕಾರಕ್ಕೇ ಓಡಾಡುತ್ತಿದ್ದವನೇ ಈ ಚಿಕ್ಕಣ್ಣ. ‘ನೀವು ಸರ್ಕಾರಕ್ಕೆ ಹತ್ತಿರವಿದ್ದೀರ.. ಹೇಗಾದರೂ ಮಾಡಿ ಮುಸ್ಸಾಫರ್ ಅಸ್ಸಾದಿಯವರ ವರದಿಯನ್ನು ಜಾರಿಗೆ ಮಾಡಿಸಿಬಿಡಿ ಸರ್’ ಎನ್ನುತಿದ್ದವನು, ಒಮ್ಮೆ ನಾನು ಜೇನುಕುರುಬರ ಹಾಡಿಯಲ್ಲಿದ್ದಾಗಲೇ ನನ್ನ ಮೇಲೆ influence ಮಾಡಿಸಲು ಅಸ್ಸಾದಿಯವರಿಂದಲೇ ಫೋನ್ ಮಾಡಿಸಿದ್ದ.! ‘ನೀವು ಮನಸ್ಸು ಮಾಡಿದರೆ ಸರ್ಕಾರದಲ್ಲಿ ಸಾದ್ಯವಾಗುತ್ತೆ ಸರ್..’ ಎಂದು ಅಸ್ಸಾದಿ ಹೇಳಿದ್ದರು. ನಾನು ಸರ್ಕಾರದ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೆ. ಪ್ರತಿ ಆದಿವಾಸಿಯ ಬಾಯಲ್ಲೂ ‘ಮುಸ್ಸಾಫರ್ ಆದಿವಾಸಿ ವರದಿ’ ಬಾಯಿಪಾಠವಾಗಿತ್ತು” ಎಂದು ನೆನಪಿಸಿಕೊಂಡಿದ್ದಾರೆ.
“ಮುಜಾಫಿರ್ ಅಸಾದಿ ನನಗೆ ಹತ್ತಿರವಾಗಿದ್ದೇ ಆದಿವಾಸಿ ಸಮುದಾಯಗಳ ಹಕ್ಕುಗಳ ವಿಷಯದಲ್ಲಿ. 1970ರಲ್ಲಿ ನಾಗರಹೊಳೆ ಅರಣ್ಯದಿಂದ ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದನ್ನು ಪ್ರಶ್ನಿಸಿ DEED ಎಂಬ ಸಂಸ್ಥೆ ಹೈಕೋರ್ಟಿಗೆ ಹೋದಾಗ ಹೈಕೋರ್ಟಿನ ಆದೇಶದ ಮೇಲೆ ಮುಸ್ಸಾಫರ್ ಅಸ್ಸಾದಿ ಅವರ ನೇತೃತ್ವದಲ್ಲಿ ಮೂರು ಜನರ ತಂಡವನ್ನು ನೇಮಿಸಿ ‘ಆದಿವಾಸಿಗಳ ಎತ್ತಂಗಡಿ ಮತ್ತು ಅದಕ್ಕೆ ಪರಿಹಾರಗಳ ಕುರಿತು ವರದಿ ನೀಡುವಂತೆ’ ಆದೇಶಿಸಿತ್ತು. ಅಸ್ಸಾದಿ ನೇತೃತ್ವದ ತಂಡ ಇಡೀ ಅರಣ್ಯವಾಸಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ 2014ರಲ್ಲಿ ವಿಸ್ತೃತವಾದ ಒಂದು ವರದಿಯನ್ನು ನೀಡಿತು, ನಾಗರಹೊಳೆ ಅರಣ್ಯದಿಂದ 3418 ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದನ್ನು ಸ್ಪಷ್ಟವಾಗಿ ಗುರುತಿಸಿದ ಅಸಾದಿಯವರು ಸದರಿ ಆದಿವಾಸಿಗಳಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು, ಕೃಷಿಯೋಗ್ಯ ಭೂಮಿ ನೀಡಬೇಕು ಮತ್ತು ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ನೀಡಬೇಕೆಂದು ವಿವರವಾದ ವರದಿ ನೀಡಿದ್ದರು” ಎಂದು ತಿಳಿಸಿದ್ದಾರೆ.
“ವರದಿಯ ಬಗ್ಗೆ ನಾನು ಮತ್ತು ಅಸ್ಸಾದಿಯವರು ಅನೇಕಸಲ ಮಾತನಾಡಿದ್ದೆವು ಮತ್ತು ಸರ್ಕಾರದ ಗಮನಕ್ಕೆ ತರುತ್ತಲೇ ಇದ್ದೆವು. ದುರಂತವೆಂದರೆ ಯಾವುದೇ ಸರ್ಕಾರ ಈ ವರದಿ ಬಗ್ಗೆ ಕಣ್ಣೆತ್ತಿಯೂ ನೋಡಿರಲಿಲ್ಲ..!? ನಂತರ ನನ್ನೊಂದಿಗೆ ‘ಲಿಂಗಾಯತ ಧರ್ಮ’ದ ಸಮಿತಿಯಲ್ಲಿದ್ದ ಅಸ್ಸಾದಿಯವರು ವರದಿ ರಚಿಸುವಾಗ ಅನೇಕ input ಗಳನ್ನು ನೀಡುತ್ತಿದ್ದರು. ಈ ಬಗ್ಗೆ ಸುದೀರ್ಘವಾಗಿ ಚರ್ಚಿಸುತಿದ್ದರು. ಆಗಲೂ ತಮ್ಮ ಆದಿವಾಸಿ ಕುರಿತ ವರದಿಯ ಬಗ್ಗೆ ಮಾತಾನಾಡುತ್ತಲೇ ಇದ್ದರು” ಎಂದು ನೆನಪಿಸಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ನುಡಿ ನಮನ | ಅಗಲಿದ ಗೆಳೆಯ ಅಸ್ಸಾದಿ ಕುರಿತು ರಹಮತ್ ತರೀಕೆರೆ ಮಾತುಗಳು
“ತಳಸಮುದಾಯಗಳ ಬಗ್ಗೆ ಅಪಾರ ಕಾಳಜಿ ಮತ್ತು ಪಾಂಡಿತ್ಯವಿದ್ದ ಅಸ್ಸಾದಿಯವರು ಈ ನಾಡು ಕಂಡ ಅತ್ಯಂತ ದಕ್ಷ ‘ಅಕಾಡೆಮಿಷಿಯನ್’.. ಇಂತವರು ಮಂಗಳೂರು ವಿ.ವಿ. ಅಥವಾ ಕುವೆಂಪು ವಿ.ವಿ.ಗೆ ವೈಸ್ ಚಾನ್ಸಲರ್ ಆಗುತ್ತಾರೆಂದು ನಾವೆಲ್ಲ ನಂಬಿದ್ದೆವು ಮತ್ತು ಆಶಿಸಿದ್ದೆವು ಕೂಡ. ಸರ್ಕಾರ ಎರಡೂ ಪ್ಯಾನೆಲ್ ಗಳಲ್ಲಿ ರಾಜ್ಯಪಾಲರಿಗೆ ಅಸ್ಸಾದಿ ಅವರ ಹೆಸರು ಕಳಿಸಿತ್ತು ಆದರೆ ರಾಜ್ಯಪಾಲರು ಒಬ್ಬ ಸೆಕುಲರ್ ಬುದ್ದಿಜೀವಿಯನ್ನು ಮಾಡಲು ಮನಸ್ಸು ಮಾಡಲಿಲ್ಲ..!? ಈ ಬಗ್ಗೆ ಅಸ್ಸಾದಿ ಅವರು ಕೊಂಚ ಬೇಸರಪಟ್ಟುಕೊಂಡಿದ್ದರು. ಇದೀಗ ಮುಖ್ಯಮಂತ್ರಿಗಳು ಅಸ್ಸಾದಿ ಅವರ ಸಾವಿಗೆ ವಿಷಾಧ ವ್ಯಕ್ತಪಡಿಸಬಹುದು. ಈ ಸಂಧರ್ಭದಲ್ಲಾದರೂ ‘ಮುಸ್ಸಾಫರ್ ಅಸಾದಿ ಅವರ ವರದಿಯನ್ನು ಅನುಷ್ಠಾನಕ್ಕೆ ತರುತ್ತೇನೆಂದು’ ಹೇಳಿ, ಅದನ್ನು ಆದಷ್ಟೂ ಬೇಗ ಜಾರಿಗೊಳಿಸಿದರೆ ಅಸ್ಸಾದಿಯವರ ಆತ್ಮಕ್ಕೆ ಶಾಂತಿ ಸಿಗಬಹುದೇನೋ” ಎಂದು ಹೇಳಿದ್ದಾರೆ.