“ಇತ್ತೀಚೆಗೆ ಬಹಳಷ್ಟು ಮಾಧ್ಯಮಗಳು ಉದ್ದಿಮೆಯಾಗಿ ಬದಲಾಗಿಬಿಟ್ಟಿವೆ. ಬಂಡವಾಳ ಶಾಹಿಗಳು ದುಡ್ಡು ಹಾಕಿ ತಮಗೆ ಬೇಕಾದಂತೆ ಸುದ್ದಿ ಪ್ರಕಟಿಸುತ್ತಿದ್ದಾರೆ. ಇದರಿಂದ ಇಡೀ ವ್ಯವಸ್ಥೆಯ ನಿಯಂತ್ರಣ ಈ ಬಂಡವಾಳಶಾಹಿ ಮಾಧ್ಯಮಗಳ ನಿಯಂತ್ರಣಕ್ಕೊಳಪಟ್ಟಿದೆ” ಎಂದು ಶಾಸಕ ಬಿ ಆರ್ ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಕಲಬುರಗಿಯ ಕನ್ನಡ ಭವನದಲ್ಲಿ ‘ನಮ್ಮ ಕರ್ನಾಟಕ ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆ ಹಾಗೂ ‘ಈದಿನ ನ್ಯೂಸ್ ಆ್ಯಪ್ ಬಿಡುಗಡೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ತಪ್ಪುಗಳನ್ನು ಎತ್ತಿ ತೋರಿಸುವ ಕರ್ತವ್ಯ ಮಾಡಬೇಕು. ಆದರೆ ಹಲವಾರು ಡಿಜಿಟಲ್ ಮಾಧ್ಯಮಗಳು ಮೌಢ್ಯ ಬಿತ್ತುವ ಕೆಲಸ ಮಾಡುತ್ತಿವೆ. ಆದರೆ ಈದಿನ ಡಾಟ್ ಕಾಮ್ ಅಂಥವೆಲ್ಲ ಮೌಢ್ಯಗಳನ್ನು ಕಿತ್ತುಹಾಕುವ ಕೆಲಸ ಮಾಡುತ್ತಿದೆ. ಬಂಡವಾಳಶಾಹಿ ಮಾಧ್ಯಮಗಳ ಅಬ್ಬರದ ನಡುವೆಯೂ ಈದಿನ ಸಂಸ್ಥೆಯು ಗಟ್ಟಿಯಾದ ಮತ್ತು ಸದೃಢವಾದ ಹೆಜ್ಜೆ ಇಟ್ಟಿದೆ. ಇದನ್ನು ಹೀಗೆ ಮುಂದುವರೆಸಬೇಕಿದೆ. ಸಮಾಜಕ್ಕೆ ಇದರ ಅವಶ್ಯಕತೆ ತುಂಬಾ ಇದೆ” ಎಂದರು.
“1983ರಲ್ಲಿ ಸರ್ಕಾರ ಬದಲಾವಣೆ ಆಗುವುದರಲ್ಲಿ ಪಿ. ಲಂಕೇಶರ ʼಲಂಕೇಶ್ ಪತ್ರಿಕೆʼ ಮಹತ್ವದ ಪಾತ್ರ ವಹಿಸಿತ್ತು. ಅಂದಿನ ದಿನಗಳಲ್ಲಿ ಲಂಕೇಶ್ ಪತ್ರಿಕೆಯನ್ನು ಜನ ಬಹಳ ಕಾತರದಿಂದ ಓದಿರುವುದನ್ನು ನಾವು ಗಮನಿಸಿದ್ದೇವೆ. ಈದಿನ ಕೂಡ ಅದೇ ಸಾಲಿಗೆ ಸೇರಿದ ಮಾಧ್ಯಮ. ಬೆಂಗಳೂರು ಟೌನ್ ಹಾಲ್ ನಲ್ಲಿ ನಡೆದ ಈದಿನ.ಕಾಮ್ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈದಿನ ಮಾಧ್ಯಮದ ಕಾರ್ಯಗಳನ್ನು ಶ್ಲಾಘಿಸಿ ಕೆಲವು ಸಲಹೆಗಳನ್ನೂ ನೀಡಿದರು” ಎಂದು ನೆನಪಿಸಿಕೊಂಡರು.

ವಿಶೇಷ ಸಂಚಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದ ಬಂಡಾಯ ಸಾಹಿತಿಗಳಾದ ಅಶ್ವಿನಿ ಮದನಕರ್ ಮಾತನಾಡಿ, “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಹುಯಿಲಗೋಳ ನಾರಾಯಣರಾಯರ ಮಾತು, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಮಾತು, ಒಂದೇ ಒಂದೇ ಕರ್ನಾಟಕ ಒಂದೇ ಎಂಬ ದ.ರಾ ಬೇಂದ್ರೆ ಅವರ ಮಾತು, ಹೊತ್ತಿತೊ ಹೊತ್ತಿತು ಕನ್ನಡದ ದೀಪ ಎನ್ನುವ ಸಿದ್ದಯ್ಯ ಪುರಾಣಿಕ ಅವರ ಮಾತು, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಚನ್ನವೀರ ಕಣವಿ ಅವರ ಮಾತು ಮತ್ತು ಎಲ್ಲರನ್ನು ಹುರಿದುಂಬಿಸುವ ಅತ್ಯಂತ ಜನಪ್ರಿಯ ಚಿತ್ರಗೀತೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಇಂತಹ ಸಾಹಿತ್ಯಗಳು ನಮ್ಮಲ್ಲಿ ಕನ್ನಡದ ಸ್ವಾಭಿಮಾನವನ್ನು ಚಿಮ್ಮಿಸುತ್ತಲೆ ಇರುತ್ತವೆ” ಎಂದರು.
“50 ವರ್ಷಗಳ ಇತಿಹಾಸ ನೋಡಿದಾಗ ಕೈಗಾರಿಕೆ, ತಂತ್ರಜ್ಞಾನ, ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆಯಾಗಿದೆ. ಆ ಬದಲಾವಣೆಯ ಬೆನ್ನತ್ತಿ ಹೊರಟ ನಾವು ಪ್ರಜ್ಞಾಪೂರ್ವಕವಾಗಿಯೊ, ಅಪ್ರಜ್ಞಾಪೂರ್ವಕವಾಗಿಯೊ ಕನಸು ಕಟ್ಟುತ್ತಾ ಸರಿತಪ್ಪು ತಿದ್ದುತ್ತ ಹೊರಟಿದ್ದೇವೆ. ಹೆಸರು ಬದಲಾದರೆ ಬದುಕು ಬದಲಾದೀತೇ? ರಾಜ್ಯದ ಹೆಸರು ಬದಲಾಗುವುದರೊಂದಿಗೆ ಏನು ಅಭಿವೃದ್ಧಿಯಾಗಬೇಕೆಂದರೆ ಜನರ ಬದುಕು, ಆಶಯ, ಕನಸು ಘನತೆಗಳು ಬದಲಾಗಬೇಕು. ಕರ್ನಾಟಕದ 50ರ ಸಂಭ್ರಮ ಕೇವಲ ಆಚರಣೆಯಾಗದೆ ಸಮಾನತೆಯ ಸ್ವಾತಂತ್ರ್ಯ ಮತ್ತು ಸಹೋದರತೆಯ ಪ್ರತೀಕವಾಗಬೇಕು” ಎಂದು ಅಭಿಪ್ರಾಯಿಸಿದರು.

ಕಲಬುರ್ಗಿಗೆ ಟಾರ್ಗೆಟ್ ಮಾಡಲು ಇನ್ನೊಂದು ಪ್ರಮುಖ ಕಾರಣ ಏನಂದ್ರೆ, ಅಲ್ಲಿ ನಡೆಯುತ್ತಿರುವ ದಲಿತ ರಾಜಕಾರಣದ ಕಣ್ಣು ದೆಹಲಿಯ ಕಣ್ಣು ಕುಕ್ಕುತ್ತಿದೆ. ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಮುಗಿಸಲು, ದಲಿತ ಮುಖ್ಯಮಂತ್ರಿಯ ಕೂಗು ಅಡಗಿಸಲು, ಇಲ್ಲಿ ಭಾರತೀಯ ಸಂಸ್ಕೃತಿ ಅನ್ನೋ ಉತ್ಸವ ಮಾಡಲು ಹೊರಟಿದ್ದಾರೆ. ಇಂತಹ ಕೋಮು
ಶಕ್ತಿಗಳನ್ನು ತಡೆದು ಇಂದು ಬಹು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಹಾಗೂ ಕರ್ನಾಟಕವನ್ನು ಉಳಿಸುತ್ತಿರುವುದು ಜೀವಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಹತ್ತಾರು ಸಂಘಟನೆಗಳ ಮೂಲಕ ರಾಜ್ಯವನ್ನು ಸೌಹಾರ್ದ ಕರ್ನಾಟಕವನ್ನಾಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.
ಈದಿನ ಡಾಟ್ ಕಾಮ್ ಕಲಬುರಗಿ, ಯಾದಗಿರಿ ಜಿಲ್ಲಾ ಸಂಯೋಜಕರಾದ ಗೀತಾ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, “ಒಂದು ಡಿಜಿಟಲ್ ಮಾಧ್ಯಮ ಏನೆಲ್ಲಾ ಮಾಡಬಹುದು ಎಂದು ಈದಿನ.ಕಾಮ್ ಮಾಡಿ ತೋರಿಸಿದೆ. 40% ಸರ್ಕಾರ, ಸೌಜನ್ಯ ಪ್ರಕರಣ, ಪ್ರಜ್ವಲ್ ರೇವಣ್ಣ ಪ್ರಕರಣ, ಉರಿಗೌಡ-ನಂಜೇಗೌಡ ಸೇರಿದಂತೆ ಹಲವಾರು ಸುದ್ದಿ ವಿಶ್ಲೇಷಣೆ ಮಾಡಿದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಕುರಿತು ನಿಖರ ಮಾಹಿತಿ ನೀಡುವುದರ ಮೂಲಕ ಇಡೀ ರಾಜ್ಯದ ಗಮನ ಸೆಳೆದಿತ್ತು. ಈ ವಿಶೇಷ ಸಂಚಿಕೆಯು 60ಕ್ಕೂ ಹೆಚ್ಚು ಸಾಹಿತಿಗಳ ಲೇಖನಗಳನ್ನು ಹೊಂದಿದೆ” ಎಂದು ತಿಳಿಸಿದರು.

ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮಗ ಅಭಿಷೇಕ ಪಾಟೀಲ್, ಪ್ರೊ. ಆರ್ ಕೆ ಹುಡಗಿ ಸಾಹಿತಿಗಳು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘನೆಯ ಅಬ್ದುಲ್ ಖಾದರ್, ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಅಧ್ಯಕ್ಷೆ ರೇಷ್ಮಾ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರಮೇಶ್ ರಾಗಿ, ಸಾಹಿತಿಗಳಾದ ಆರ್ ಕೆ ಹುಡಗಿ ಉಪಸ್ಥಿತರಿದ್ದರು.
