ರಾಜ್ಯದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿರುವ ಸ್ಪ್ರಿಂಕ್ಲರ್ ಪೈಪ್ಗಳು ಕಳಪೆಯಾಗಿವೆಯೆಂದು ಸಿಪೆಟ್ನಿಂದ ವರದಿ ಬಂದಿದ್ದು, ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಪೈಪ್ ಕಂಪೆನಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಸ್ಪ್ರಿಂಕ್ಲರ್ ಪೈಪ್ಗಳನ್ನು ವಿತರಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಮಾಡಿ ಸರ್ಕಾರಕ್ಕೆ ಹಾಗೂ ರಾಜ್ಯದ ರೈತರಿಗೆ ಕಳಪೆ ಗುಣಮಟ್ಟದ ಪೈಪ್ ಪೂರೈಕೆ ಮಾಡಲಾಗಿದೆ. ನಾವು ಕಳೆದ 2 ವರ್ಷಗಳಿಂದಲೂ ಇದರ ಬಗ್ಗೆ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಇದರ ಕುರಿತ ತೀವ್ರ ಹೋರಾಟ ಮಾಡಿ ಕೃಷಿ ಇಲಾಖೆ ಆಯುಕ್ತರಿಗೂ ಮನವಿಗಳನ್ನು ಸಲ್ಲಿಸಿದ್ದೆವು. ಆಯುಕ್ತರು ಪೈಪ್ಗಳನ್ನು ಸಿಪೆಟ್ಗೆ ಕಳುಹಿಸಿ ಗುಣಮಟ್ಟ ಪರಿಶೀಲನೆ ನಡೆಸಲು ಸೂಚಿಸಿದ್ದರು” ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ಸಿಪೇಟ್ ವರದಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಮೇಲಾಧಿಕಾರಿಗಳಿಗೆ ಕಳುಹಿಸಿದ ನಂತರ ಅವರ ಅನುಮತಿ ಪಡೆದು ತಮಗೆ ಸಿಪೆಟ್ ವರದಿ ಕೊಡಲಾಗುವುದೆಂದು ಸಬೂಬು ಹೇಳುತ್ತಿದ್ದಾರೆ. ಇವರ ವಿಳಂಬ ನೀತಿ ಗಮನಿಸಿದರೆ ಉದ್ದೇಶ ಪೂರ್ವಕವಾಗಿ ಸತ್ಯಾಂಶವನ್ನು ಹೊರಗೆ ಹಾಕಬಾರದೆಂಬ ಹುನ್ನಾರ ನಡೆಸಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ತಪಾಸಣೆಗಾಗಿ ಸಿಪೆಟ್ಗೆ ವಿತರಿಸಿದ ಪೈಪುಗಳನ್ನು ಸಿಪೆಟ್ಗೆ ಕಳಿಸದೇ ಗುಣಮಟ್ಟದ ಪೈಪುಗಳನ್ನು ಕಳಿಸುವ ಹುನ್ನಾರವಿದೆ. ಇದರಲ್ಲಿ ಅಧಿಕಾರಿಗಳ ಹುನ್ನಾರವಿದೆ. ಸಹಸ್ರಾರು ಕೋಟಿ ರೂ.ಗಳ ದುರುಪಯೋಗವಾಗಿದೆ. ಒಮ್ಮೆ ಸ್ಪ್ರಿಂಕ್ಲರ್ ಪೈಪ್ಗಳನ್ನು ವಿತರಣೆ ಮಾಡಿದರೆ ಸಾಮಾನ್ಯ ರೈತರಿಗೆ ಜೀವನ ಪರ್ಯಂತ ಸ್ಪ್ರಿಂಕ್ಲರ್ ಪೈಪ್ಗಳನ್ನು ವಿತರಿಸುವುದಿಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ. ಇಡೀ ರಾಜ್ಯಾದ್ಯಂತ ಎಲ್ಲ ಕಂಪನಿಗಳೂ ಕೂಡಾ ಕಳಪೆ ಸ್ಪ್ರಿಂಕ್ಲರ್ ಪೈಪ್ಗಳನ್ನು ತಯಾರಿಸಿ ರೈತರಿಗೆ ಮೋಸ ಮಾಡಿ ಕಂಪನಿಯವರು ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಕಂಪನಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು. ಮತ್ತೆ ಅಂತಹವರ ಕಂಪನಿಯ ಹೆಸರಿಟ್ಟು ಬೇರೆ ಪೈಪ್ ತಯಾರಿಸಲು ಅನುಮತಿ ನೀಡಬಾರದು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಎಸ್ಸಿ, ಎಸ್ಟಿ ಕಾಲೋನಿಗಳಿಗೆ ಸರಳ ಖಾತಾ ಆಂದೋಲನ ಸಭೆ : ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಭೆ ಬಹಿಷ್ಕಾರ
ಈ ಸಂದರ್ಭದಲ್ಲಿ ಪ್ರಹ್ಲಾದ ನಾಗರಾಳ, ರಾಮನಗೌಡ ಪಾಟೀಲ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ರಾಜೇಸಾ ನದಾಫ, ಸಂಗಪ್ಪ ಟಕ್ಕೆ, ಜಯಸಿಂಗ ರಜಪೂರ, ಆತ್ಮಾನಂದ ಭೈರೊಡಗಿ, ಸೋಮು ಬಿರಾದಾರ, ಬಸವರಾಜ ನ್ಯಾಮಗೊಂಡ, ಜಕರಾಯ ಪೂಜಾರಿ ಸೇರಿದಂತೆ ಇತರರು ಇದ್ದರು.