2025-2026ರ ಬಜೆಟ್ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಿಸಿಯೂಟ ತಯಾರಕರ ಫೆಡರೇಶನ್ ದಾವಣಗೆರೆ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿದ್ದು, ಉಪವಿಭಾಗಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದ ರಸ್ತೆಯಲ್ಲಿ ಬಿಸಿಯೂಟ ತಯಾರಕರು ಮಾನವ ಸರಪಳಿ ನಿರ್ಮಿಸಿ ನಂತರ ಎಸಿ ಕಚೇರಿಗೆ ತೆರಳಿ ಪ್ರಸ್ತುತ ಬಜೆಟ್ನಲ್ಲಿ ವೇತನ ಹೆಚ್ಚಿಸಬೇಕು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, “ಕಳೆದ 23 ವರ್ಷಗಳಿಂದ ಶಾಲೆಗಳಲ್ಲಿ ಬಿಸಿಯೂಟ ನೌಕರರಿಂದ ಕೇವಲ ₹3,600 ಮತ್ತು ₹3,700ಕ್ಕೆ ದುಡಿಸಿಕೊಳ್ಳುತ್ತಿದ್ದು, ಇದು ಮಹಿಳೆಯರಿಗೆ ಮಾಡುತ್ತಿರುವ ವಂಚನೆಯಾಗಿದೆ. ಅವರನ್ನು ಕನಿಷ್ಠ ವೇತನ ಮತ್ತು ಇತರ ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಮಳಲ್ಕೆರೆ ಜಯಮ್ಮ ಮಾತನಾಡಿ, “ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಹಾಲಿ ಸಂಸತ್ ಸದಸ್ಯರಾಗಿರುವ ಪ್ರಿಯಾಂಕ ಗಾಂಧಿಯವರು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ₹6,000ಕ್ಕೆ ವೇತನ ಜಾರಿ, ವಯಸ್ಸಾಗಿ ನಿವೃತ್ತರಾದ ಬಿಸಿಯೂಟ ತಯಾರಕರಿಗೆ ₹2 ಲಕ್ಷ ಇಡಿಗಂಟು, ಅಡುಗೆ ತಯಾರಿಸುವಾಗ ಆಗುವ ಅವಘಡಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಪರಿಹಾರ, 1972ರ ಕಾರ್ಮಿಕ ಕಾಯ್ದೆಯಂತೆ ನಿವೃತ್ತಿ ಹೊಂದುವ ಎಲ್ಲ ಬಿಸಿಯೂಟ ತಯಾರಕರಿಗೂ ಉಪಧನ( (ಗ್ರಾಚುಯಿಟಿ) ಜಾರಿಗೊಳಿಸಬೇಕು. ವಿಳಂಬ ಮಾಡದೆ 3 ಅಥವಾ 4 ನೇ ತಾರೀಖು ಸಕಾಲದಲ್ಲಿ ವೇತನ ಪಾವತಿ ಮಾಡಬೇಕು. ಬರಗಾಲದ ಕಾರ್ಯಕ್ರಮ ವೇತನ ಪಾವತಿ ಹಾಗೂ ಅನಗತ್ಯವಾಗಿ ಕಿರುಕುಳ ತಪ್ಪಿಸಬೇವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬ್ಯಾಂಕ್ಗಳಲ್ಲಿ ಸಿಸಿಟಿವಿ, ಅಲಾರ್ಮ್ ಅಳವಡಿಸಬೇಕು: ಎಸ್ಪಿ ಪುಟ್ಟಮಾದಯ್ಯ
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಜ್ಯೋತಿ ಲಕ್ಷ್ಮಿ, ಖಜಾಂಚಿ ಪದ್ಮಾವತಿ, ಜಿಲ್ಲಾ ಉಪಾಧ್ಯಕ್ಷೆ ಸರೋಜಾ, ಜಿಲ್ಲಾ ಸಂಚಾಲಕ ಗದಿಗೇಶ ಪಾಳೇದ, ಮುಖಂಡರುಗಳಾದ ಕಲ್ಪನಾ, ಪುಷ್ಪ, ಶಿವಗಂಗಮ್ಮ, ಆಲೂರು ನೀಲಮ್ಮ, ಮಂಜುಳಾ, ಹೊನ್ನೀ ಬಾಯಿ, ರತ್ನಮ್ಮ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.