ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕು ಕಚೇರಿ ಆವರಣದಲ್ಲಿ ಅಲೆಮಾರಿ ಕೊರಚ ಸಮುದಾಯದ ಸುಮಾರು 40 ಕುಟುಂಬಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.
ದಸಂಸ ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್ ಈದಿನ ಡಾಟ್ ಕಾಮ್ ಜೊತೆ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಸಚಿವರ ಸ್ವಕ್ಷೇತ್ರದಲ್ಲಿ ಸುಮಾರು ಐದು ದಶಕಗಳಿಂದ ವಾಸವಾಗಿರುವ ದಾವಣಗೆರೆ ಮೂಲದ ಬಡ ಕುಟುಂಬಗಳಿಗೆ ನಿವೇಶನ ಸಿಕ್ಕಿಲ್ಲ. ಇದ್ದ ಜಾಗವನ್ನು ಕಬಿನಿ ಮೇಲ್ಸೇತುವೆ ನಿರ್ಮಾಣ ಸಮಯದಲ್ಲಿ ಯೋಜನಾ ವ್ಯಾಪ್ತಿಗೆ ಸೇರಿಸಿಕೊಂಡಾಗ ಈ ಜನಗಳ ಬದುಕು ಅತಂತ್ರವಾಗಿ ನೆಲಬಾಡಿಗೆ ಕಟ್ಟಿ ಗುಡಿಸಿಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಹಲವು ವರ್ಷಗಳಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಡನೆ ಪತ್ರ ವ್ಯವಹಾರ ನಡೆಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಅಲ್ಲಿಂದ ಫಲಾನುಭವಿಗಳ ಪಟ್ಟಿ ಸಹ ಬಿಡುಗಡೆ ಆಗಿದೆ. ಭೂಮಿ ಮಂಜೂರು ಮಾಡಿ ಹಸ್ತಾಂತರ ಕೂಡ ಈ ಹಿಂದೆಯೇ ಮಾಡಲಾಗಿದೆ. ಆದರೆ ಅನುಷ್ಠಾನ ಮಾತ್ರ ಆಗಲೇ ಇಲ್ಲ, ಇದುವರೆಗೆ ಈ ಬಡ ಕುಟುಂಬಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರಚ ಸಮುದಾಯದ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವವರೆಗೂ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಯಲಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ದಸಂಸ ಮುಖಂಡ ಶಿವಬುದ್ಧಿ ಮಾತನಾಡಿ, ಈ ಕುಟುಂಬಗಳಲ್ಲಿ ವಯಸ್ಸಾದವರು, ಪುಟ್ಟ ಮಕ್ಕಳು ಇದ್ದಾರೆ. ಅವರಿಗೆ ಇರಲು ಸ್ಥಳ ಇಲ್ಲ. ಅಧಿಕಾರಿಗಳು ಈ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ನೆಲ ಬಾಡಿಗೆ ಕಟ್ಟಿ ಗುಡಿಸಿಲು ಹಾಕಿ ಜೀವನ ಮಾಡುತ್ತಿದ್ದಾರೆ. ಇದುವರೆಗೆ ಸರ್ಕಾರದ ಯಾವ ಸವಲತ್ತು ಈ ಕುಟುಂಬಗಳಿಗೆ ದೊರೆತಿಲ್ಲ. ಮಕ್ಕಳಿಗೆ ಸರಿಯಾದ ಶಿಕ್ಷಣ, ಬಾಣಂತಿಯರಿಗೆ ಸರಿಯಾದ ಆರೈಕೆ ಯಾವುದೂ ಸಿಕ್ಕಿಲ್ಲ. ಸರ್ಕಾರ ಈ ಕೂಡಲೇ ಇತ್ತ ಗಮನಹರಿಸಿ ಸೂರಿಲ್ಲದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕುಕ್ಕೂರು ರಾಜು ಮಾತನಾಡಿ, ಅಧಿಕಾರಿಗಳು ತೀರ ಅಸಡ್ಡೆಯಿಂದ ವರ್ತಿಸುತ್ತಾರೆ. ಇಲ್ಲಿ ನೂರಾರು ಜನ ಪ್ರತಿಭಟನೆ ಮಾಡುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಕಚೇರಿ ಬಾಗಿಲು ಹಾಕಿ ಹೊರ ಹೋಗಿದ್ದಾರೆ. ಇದುವರೆಗೆ ಒಮ್ಮೆಯು ಸಹ ಈ ಜನಗಳ ಭೇಟಿ ಮಾಡಿಲ್ಲ. ಇದು ಹೀಗೆ ಮುಂದೆವರೆದರೆ ಹೋರಾಟ ತೀವ್ರಗೊಳ್ಳಲಿದೆ ಎಂದರು.
ಈ ಸುದ್ದಿ ಓದಿದ್ದೀರಾ?: ಮೈಸೂರು | ಹಾಡಹಗಲೇ ಕಾರು ಅಡ್ಡಗಟ್ಟಿ ದರೋಡೆ; ಕಾರು ಸಹಿತ ದುಷ್ಕರ್ಮಿಗಳು ಪರಾರಿ
ಪುರಸಭೆ ಮುಖ್ಯಾಧಿಕಾರಿ ಮಮತ ಅವರನ್ನು ಅಮಾನತು ಮಾಡಬೇಕು. ಪುರಸಭೆ ವ್ಯಾಪ್ತಿಯಲ್ಲಿ ವಾಸ ಮಾಡುವ ಕುಟುಂಬಗಳಿಗೆ ನಿವೇಶನ ನೀಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ತಾತ್ಸಾರದ ಮಾತುಗಳನ್ನಾಡುವುದಲ್ಲದೆ, ದಾಖಲೆ ಇಲ್ಲ ಎನ್ನುವ ಸಬೂಬು ಹೇಳುತ್ತಾರೆ. ಇಂತಹ ಅಧಿಕಾರಿ ಸೌಜನ್ಯಕ್ಕಾದರೂ ಬಡ ಜನರ ಕಡೆ ಓಮ್ಮೆಯೂ ತಿರುಗಿ ನೋಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಅಲಗೂಡು ನಾಗರಾಜ್ ಮೂರ್ತಿ, ಬನ್ನಹಳ್ಳಿ ಹುಂಡಿ ಉಮೇಶ್, ಕೊಡಗಹಳ್ಳಿ ರವಿಕುಮಾರ್, ಯಾಚೇನಹಳ್ಳಿ ಸೋಮಶೇಖರ್, ಕಿರಗಸೂರು ರಜನಿ, ಮಾದಿಗಹಳ್ಳಿ ರಾಮು, ಕುಕ್ಕೂರು ಪ್ರಭು, ಮಹ ದೇವ, ಕೊರಚ ಸಮುದಾಯದ ಮುಖಂಡರಾದ ರಾಜು, ವೆಂಕಟೇಶ್, ಭಾಸ್ಕರ್, ಮೂಗಪ್ಪ, ರಮೇಶ್, ಪರಶುರಾಮ, ಶಾಂತರಾಜು ಸೇರಿದಂತೆ ಹಲವರು ಇದ್ದರು.
