ಕಳೆದೆರೆಡು ತಿಂಗಳಿನಿಂದ ವೃದ್ಧಾಪ್ಯ ಪಿಂಚಣಿ ಬಾರದೆ ವೃದ್ಧ ದಂಪತಿ ಅನ್ನ ಆಹಾರಕ್ಕೂ ಪರದಾಡುವಂತಾಗಿದ್ದು, ತಮ್ಮನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಗೋಗೆರೆದ ಪ್ರಸಂಗ ನಡೆದಿದೆ.
ಪಡುಬಿದ್ರೆ ಹೆಜಮಾಡಿಯ ಪಡುಕರೆಯ ನಿವಾಸಿಗಳಾದ ಜನಾರ್ದನ ಆಚಾರ್ ಹಾಗೂ ಲೀಲಾವತಿ ವೃದ್ಧ ದಂಪತಿ ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದು, ಜೀವನ ನಿರ್ವಹಣೆಗಾಗಿ ಸರಕಾರ ನೀಡುವ ವೃದ್ಧಾಪ್ಯ ವೇತನವನ್ನೇ ಅವಲಂಬಿಸಿದ್ದಾರೆ. ಆದರೆ ಕಳೆದೆರಡು ತಿಂಗಳಿನಿಂದ ಪಿಂಚಣಿ ಬಾರದೆ ದಂಪತಿ ಕಂಗಲಾಗಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರಲ್ಲಿ ತಮ್ಮನ್ನು ಯಾವುದಾದರೂ ಅನಾಥಾಶ್ರಮವನ್ನು ಸೇರಿಸುವಂತೆ ಗೋಗರೆದಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಲೀಲಾವತಿ ಹಳೆದ ಹಲವಾರು ವರ್ಷಗಳಿಂದ ನಾವಿಬ್ಬರೂ ಅನಾರೋಗ್ಯ ಪೀಡಿತರಾಗಿದ್ದೇವೆ ನಮ್ಮನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಅಡಿಗೆ ಮಾಡಲು ಮನೆಯಲ್ಲಿ ಯಾವುದೇ ಪದಾರ್ಥಗಳಿಲ್ಲ. ಕೈಗೆ ಸಿಕ್ಕ ವೃದ್ದಾಫ್ಯ ವೇತನ ಆಸ್ಪತ್ರೆ ಖರ್ಚುಗೆ ಸಾಕಾಗುತ್ತಿಲ್ಲ ನಾವು ಬದುಕಿದ್ದು ಸತ್ತ ಹಾಗೆ ಇದ್ದೇವೆ. ನಮ್ಮ ಮನೆಯಲ್ಲಿ ಆಹಾರ ತಯಾರಿಸಲು ಬೇಕಾದ ವ್ಯವಸ್ಥೆಯಿಲ್ಲ. ಕಟ್ಟಿಗೆ ಮೂಲಕ ಅಡುಗೆ ಮಾಡಿದರೆ ಗಂಡನಿಗೆ ಅಸ್ತಮಾ ಕಾಯಿಲೆಯಿದ್ದು, ಹೊಗೆ ಸೇವನೆ ಮಾಡಿದರೆ ದಮ್ಮುಉಂಟಾಗುತ್ತಿದೆ. ಹೀಗಾಗಿ ಸರಕಾರ ನೀಡುವ ಉಚಿತ ಅಡುಗೆ ಅನಿಲ ಸೌಲಭ್ಯ ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ನಾನು ಕೂಡಾ ವೃದ್ಧಾಪ್ಯದಿಂದಾಗಿ ಅನಾರೋಗ್ಯ ಪೀಡಿತಳಾಗಿದ್ದು, ಅಂಗವಿಕಲತೆ ಕೂಡಾ ಹೊಂದಿದ್ದೇನೆ. ಹೀಗಾಗಿ ಔಷಧವಿಲ್ಲದೆ ದಿನದೂಡಲು ಸಾಧ್ಯವಿಲ್ಲ. ಅರೆಹೊಟ್ಟೆಯಲ್ಲಿಯೇ ದಿನ ಕಳೆಯುತ್ತಿದ್ದೇವೆ. ನಮಗೆ ಅನಾಥಾಶ್ರಮ ಸೇರಲು ಮನಸ್ಸಿಲ್ಲ. ಆದರೆ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಜೀವನ ನಡೆಸುವುದಾದರೂ ಹೇಗೆ ? ಸಮಾಜ, ಹಾಗೂ ಸಂಬಂಧಪಟ್ಟ ಇಲಾಖೆಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಲೀಲಾವತಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಈ ವೃದ್ಧ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಸಂಧ್ಯಾಕಾಲದಲ್ಲಿ ಅವರನ್ನು ನೋಡಿಕೊಳ್ಳುವವರಿಲ್ಲ. ವೃದ್ಧಾಪ್ಯದ ಸಹಜ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ದಂಪತಿ ಹೈರಣಾಗಿದ್ದಾರೆ. ಇವರಿಗೆ ಸರಕಾರದ ಸೌಲಭ್ಯಗಳು ದೊರೆಯುವಂತೆ ಕಾಪು ತಹಶೀಲ್ದಾರ್ ಅವರು ತುರ್ತು ಕ್ರಮಕೈಗೊಳ್ಳಬೇಕು. ಅಲ್ಲದೆ ಸಂಬಂಧಪಟ್ಟ ಇಲಾಖೆಗಳು, ಹಿರಿಯ ನಾಗರಿಕ ಸಹಾಯವಾಣಿ ಕೂಡಾ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.
ವೃದ್ಧ ದಂಪತಿಗೆ ಸಹಾಯ ಮಾಡಲು ಇಚ್ಚಿಸುವವರು ನೆರವಾಗಬಹುದು.
LEELAVATHI
Account No: 01572200033165
IFSC Code: CNRB0010157
