ಸಂವಿಧಾನ ರಕ್ಷಣೆಗೆ ಒಗ್ಗಟ್ಟು ಅಗತ್ಯ. ಹಾಗಾಗಿ ಪ್ರಜಾಪ್ರಭುತ್ವ, ಜಾತ್ಯಾತಿತತೆ ಹಾಗೂ ಗಣತಂತ್ರ ವ್ಯವಸ್ಥೆ ಉಳಿಯುವ ಎಲ್ಲರೂ ಒಂದಾಗಬೇಕು. ಈ ಹಿನ್ನೆಲೆಯಲ್ಲಿ ಜನವರಿ 30ರಂದು ಫ್ಯಾಸಿಸ್ಟ್ ವಿರೋಧಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮನುವಾದಿ-ಫ್ಯಾಸಿಸ್ಟ್ ವಿರೋಧಿ ಜನತಾ ರಂಗದ ಸಹ ಸಂಚಾಲಕ ಆರ್ ಮಾನಸಯ್ಯ ತಿಳಿಸಿದರು.
ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, “ನಾಗರಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನುವಾದಿ-ಫ್ಯಾಸಿಸ್ಟ್ ವಿರೋದಿ ಜನತಾ ರಂಗದಿಂದ ಜನವರಿ 30ರಂದು ಲಿಂಗಸೂಗೂರಿನ ಆಯ್ದಕ್ಕಿ ಲಕ್ಕಮ ಮೈದಾನದ ಜಗದ್ಗುರು ತಿಂಥಿಣಿ ಮೌನೇಶ್ವರ ಗುರು ಖಾದರಿಪೀರ ವೇದಿಕೆಯಲ್ಲಿ ಸಮಾವೇಶ ಅಯೋಜಿಸಲಾಗಿದೆ” ಎಂಸು ತಿಳಿಸಿದರು.
ಲಿಂಸೂಗೂರು ಬಿಜೆಪಿ ಬೆಂಬಲಿತ ಆರ್ಎಎಸ್ಎಸ್ ಸಂಘಟನೆಯ 100 ವರ್ಷ ಪೂರ್ಣಗೊಳ್ಳುವ ಭಾಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ” ಎಂದು ಹೇಳಿದರು.
“ಆರ್ಎಸ್ಎಸ್ ನಾಯಕರು ಸಂವಿಧಾನವನ್ನು ಸ್ಮಾರಕ ಭವನದಲ್ಲಿಟ್ಟು ಪೂಜಿಸುವುದಕ್ಕಷ್ಟೇ ಸೀಮಿತಗೊಳಿಸಲಿದ್ದಾರೆ. ಸಂವಿಧಾನರದ್ದು ಮಾಡಿ ಅದರ ಜಾಗದಲ್ಲಿ ಬ್ರಾಹ್ಮಣವಾದಿ ಧರ್ಮಶಾಸ್ತ್ರವಾದ ಮನುಸೃತಿಯನ್ನು ಜಾರಿಗೆ ತರಲು ಹೊರಟಿದೆ. ಭಾರತವನ್ನು ಹಿಂದೂರಾಷ್ಟ್ರ(ವೈದಿಕ ಧರ್ಮದೇಶ)ವೆಂದು ಘೋಷಿಸಲು ಸಜ್ಜಾಗಿದೆ” ಎಂದರು.
“ಉತ್ತರ ಪ್ರದೇಶ, ಮಧ್ಯಪ್ರದೇಶ, ಮಣಿಪುರ ಹಾಗೂ ಛತ್ತೀಸ್ಗಡ ರಾಜ್ಯದಲ್ಲಿ ಈಗಾಗಲೇ ಹಿಂದೂರಾಷ್ಟ್ರ ತಾಲೀಮು ಶುರುವಾಗಿದ್ದು, ಈ ವರ್ಷದುದ್ದಕ್ಕೂ ಆರ್ಎಸ್ಎಸ್ ಶತ ಜಯಂತಿ ಆಚರಿಸಲು ಮುಂದಾಗಿದೆ. ಇದು ಕೇವಲ ಸಂಘದ ಆಚರಣೆಯಾಗಿ ಇರುವುದಿಲ್ಲ, ಇಡೀ ಸರ್ಕಾರವೇ ಈ ಆಚರಣೆಗೆ ಮುಂದಾಗಿದೆ” ಎಂದು ಹೇಳಿದರು.
“ನರೇಂದ್ರ ಮೋದಿ-3 ಮತ್ತು ಬಿಜೆಪಿಯನ್ನು ಮುಂದಿಟ್ಟಿಕೊಂಡು ಆರ್ಎಸ್ಎಸ್ ಸಂಘ ಪರಿವಾರವೇ ಕೇಂದ್ರ ಸರ್ಕಾರವನ್ನು ಮುನ್ನೆಡೆಸುತ್ತಿದೆ. ಸನಾತನ ಸಂಸ್ಕೃತಿ-ಧರ್ಮವು ದೇಶದ ಧರ್ಮವಾದರೆ, ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ ಮೀಸಲಾತಿ ಹಾಗೂ ಆಸ್ತಿ ಅಧಿಕಾರ ಮತ್ತು ಸಾಮಾಜಿಕ ಸಮಾನತೆ ನಿಷೇಧಿಸಲ್ಪಡುತ್ತವೆ. ಮಹಿಳೆಯರನ್ನು ಅಡುಗೆಮನೆ ಬಂಧಿಖಾನೆಗೆ ತಳ್ಳಲಾಗುತ್ತದೆ. ಈ ಫ್ಯಾಸಿಸ್ಟ್ ದಾಳಿಯನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಸೋಲಿಸಲು-ನಿರ್ಮೂಲನೆಗೊಳಿಸಲು ನಾವು ಎದ್ದು ನಿಲ್ಲಬೇಕಾಗಿದೆ. ಈ ಮಹತ್ವದ ಉದ್ದೇಶದಿಂದ 20ಕ್ಕೂ ಅಧಿಕ ಸಂಘಟನೆಗಳು ಒಗ್ಗೂಡಿ ಮನುವಾದಿ-ಫ್ಯಾಸಿಸ್ಟ್ ವಿರೋಧಿ ಜನತಾ ರಂಗವನ್ನು ಕಟ್ಟಿಕೊಂಡು ಸಮಾವೇಶ ನಡೆಸಲಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಬಾಣಂತಿ, ಹಸುಗೂಸನ್ನು ಹೊರ ಹಾಕಿ ಮನೆ ಜಪ್ತಿ ಮಾಡಿದ ಫೈನಾನ್ಸ್ ಕಂಪನಿ!
“ಆರ್ಎಸ್ಎಸ್ ದಾಳಿಗೆ ಪ್ರಾಣ ಬಲಿಕೊಟ್ಟ ಎಂ ಎಂ ಕಲಬುರ್ಗಿ, ಗೌರಿಲಂಕೇಶ್, ದಾಬೋಲ್ಕರ, ಪನ್ಸಾರೆ ಹಾಗೂ ಗುಜರಾತ, ದೆಹಲಿ ಮಣಿಪುರದಲ್ಲಿ ಕಗ್ಗೊಲೆಗೀಡಾದ ಸಾವಿರಾರು ಜನರ ಶೋಕ ದಿನವೆಂದು ನಾವು ಆಚರರಿಸಲ್ಲಿದ್ದೇವೆ. ಜತೆಗೆ ದಲಿತ, ಹಿಂದುಳಿದ, ಆದಿವಾಸಿ ಯುವಕರು, ಬುದ್ದಿ ಜೀವಿಗಳು, ಜಾತಿವಾದಿ-ಜನಾಂಗ ದ್ವೇಷಿ ಭಯೋತ್ಪಾದಕ ಆರ್ಎಸ್ಎಸ್ ತೊರೆದು ಬುದ್ಧ, ಬಸವ ಬಾಬಾಸಾಹೇಬ ಹಾಗೂ ಭಗತ್ಸಿಂಗರ ಭಾರತ ಕಟ್ಟಲು ಮುಂದೆ ಬರಬೇಕೆಂದು ಶಪತಮಾಡಲಿದ್ದೇವೆ. ಸಮಾವೇಶದಲ್ಲಿ ನಾಡಿನ ಹೆಸರಾಂತ ಚಳವಳಿಗಾರರು, ಧಾರ್ಮಿಕ ಮುಖಂಡರು, ವಿವಿಧ ಮಠಗಳ ಧರ್ಮ ಗುರುಗಳು ಭಾಗವಹಿಸಲಿದ್ದು, ಬಹುಜನರು ಬಹುಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾವೇಶದ ಸಂಯೋಜಕ ಸಿ ದಾನಪ್ಪ ಮಸ್ಕಿ, ಸಮಾವೇಶದ ಸಂಯೋಜಕ ಎಂ ಗಂಗಾಧರ, ಎಂ ಡಿ ಅಮೀರ್ ಅಲಿ, ವಿಜಯರಾಣ ಸಿರವಾರ, ಆದೇಶ ನಗನೂರು, ಎಂ ನಿಸರ್ಗ, ಬಸವರಾಜ ಬಡಿಗೇರ, ಗಂಗಾಧರ ನಾಯಕ, ಖಾಲಿದ್ ಚಾವುಸ್, ಗುಡದಪ್ಪ ಭಂಡಾರಿ ಸೇರಿದಂತೆ ಇತರರು ಇದ್ದರು.
