ತುಮುಲ್ ಅಧ್ಯಕ್ಷ ಸ್ಥಾನ ಪತ್ನಿಗೆ ಕೈ ತಪ್ಪಿದ್ದರಿಂದ ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್, ಸಹಕಾರ ಸಚಿವ ಕೆ. ಎನ್. ರಾಜಣ್ಣ, ಗೃಹ ಸಚಿವ ಪರಮೇಶ್ವರ್ ವಿರುದ್ಧ ಅಸಮಾಧಾನ ಹೋರ ಹಾಕಿದ್ದಾರೆ.
ತುಮಕೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಅವರು, ಗೃಹ ಸಚಿವ ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ. ಎನ್. ರಾಜಣ್ಣ ತುಮಕೂರು ಜಿಲ್ಲೆಯಲ್ಲಿ ತೊಘಲಕ್ ಆಡಳಿತ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಏನ್ ನಡಿತಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಇಬ್ಬರು ಮಂತ್ರಿಗಳು ಸೇರಿಕೊಂಡು ಏನ್ ಮಾಡ್ಬೇಕು ಅದನ್ನ ಮಾಡುತ್ತಿದ್ದಾರೆ. ನಮ್ಮನ್ನು ಮೀಟಿಂಗ್ ಗೂ ಸಹ ಕರಿತಿಲ್ಲ. ಏನ್ ಮಾಡಿತ್ತೀವಿ ಅಂತ ನಮ್ಮನ್ನ ಕೇಳುತ್ತಿಲ್ಲ ಎಂದು ಆರೋಪಿಸಿದರು.
ಇಬ್ಬರು ಸಚಿವರು ಸಾಮಾಜಿಕ ನ್ಯಾಯ ಕೊಡೋ ಹರಿಕಾರರು. ಅದರೆ ಎಡಗೈ (ಮಾದಿಗ) ಸಮುದಾಯಕ್ಕೆ ಅನ್ಯಾಯ ಮಾಡಿ ಇಡೀ ಜಿಲ್ಲೆಯಲ್ಲಿ ಎಸ್ಟಿ, ಭೋವಿಗಳನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.
ಬಲಗೈ (ಪರಮೇಶ್ವರ್ ) ಸಮುದಾಯದವರು ಸಚಿವರು ಇದ್ದಾರೆ. ಲಿಂಗಾಯತರು, ಒಕ್ಕಲಿಗರು ಎಂಎಲ್ ಗಳು ಇದ್ದಾರೆ. ಅನ್ಯಾಯ ಆಗಿರೋದು ಹಿಂದುಳಿದ ವರ್ಗ ಎಡಗೈ (ಮಾದಿಗ) ಸಮುದಾಯಕ್ಕೆ. ಮುಂದೆ ಡಿಸಿಸಿ ಬ್ಯಾಂಕ್ ಚುನಾವಣೆ ಬರುತ್ತೆ. ಯಾರಾದರು ಒಬ್ಬ ಎಡಗೈ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಇವರು ಸಾಮಾಜಿಕ ನ್ಯಾಯದ ಹರಿಕಾರರು ಅಂತ ನಾನು ಅಂದುಕೊಳ್ಳುತ್ತೀನಿ, ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಎರಡು ಮೀಸಲು ಕ್ಷೇತ್ರ ಇದೆ. ಆ ಮೀಸಲು ಕ್ಷೇತ್ರದಲ್ಲಿ ಒಬ್ಬರು ಭೋವಿ ಜನಾಂಗ. ಮತ್ತೊಬ್ಬರು ಬಲಗೈ ಜನಾಂಗದವರು ಗೆದ್ದಿದ್ದಾರೆ. ಎಡಗೈ ನವರು ಇನ್ನು ಶೋಷಿತರಾಗಿಯೇ ಇದ್ದಾರೆ. ಈ ಸಮುದಾಯಕ್ಕೆ ನ್ಯಾಯ ಸಿಗಬೇಕು ಅಂದ್ರೆ ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಗೆ ನಾಮಿನಿ ಮಾಡಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ್ದು ಇದರಲ್ಲಿ ಏನು ಪಾತ್ರ ಇಲ್ಲ. ಇಬ್ಬರು ಸಚಿವರ ವರ್ತನೆ ಬಗ್ಗೆ ನಾನು ಸಿಎಂ ಗಮನಕ್ಕೆ ತಂದಿದ್ದೇನೆ. ಸಹಕಾರ ಸಚಿವ ಹಾಗೂ ಗೃಹ ಸಚಿವರಿಗೆ ಹೇಳುತ್ತೀನಿ ಅಂತ ಹೇಳಿದ್ದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಿಲ್ಕ್ ಯುನಿಯನ್ ಗೆ ನಾಮಿನಿ ಸದಸ್ಯರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವರು ಮಾತು ಎತ್ತಿದ್ದರೆ ಶೋಷಿತ ವರ್ಗಕ್ಕೆ ನ್ಯಾಯ ಕೊಡ್ತೀವಿ ಅನ್ನುತ್ತಾರೆ. ನೋಡಿದ್ರೆ ಶೋಷಿತರನ್ನು ಇವರು ನಿಕೃಷ್ಟವಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದರು.