ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಒಲುಮೆಯ ಕೂಟ
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?
ಬೇಟದ ಮರುಳಿಂಗೆ ಲಜ್ಜೆ ಮುನ್ನುಂಟೆ?
ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ ದಂದುಗವೇಕೆ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?
ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ?
ಪದಾರ್ಥ:
ಒಲುಮೆಯ = ಪ್ರೀತಿಯ
ಕೂಟ = ಮಿಲನ, ಸಮಾಗಮ
ಹಾಸಿನ = ಹಾಸಿಗೆಯ
ಬೇಟದ ಮರುಳಿ = ಕಾಮೋನ್ಮತ್ತಳು
ದಂದುಗ = ಗೋಜು, ಗೊಡವೆ
ಮಿಸುನಿಯ = ಮಿನುಗುವ
ವಚನಾರ್ಥ:
ಗುಹೇಶ್ವರಾ, ನಿನ್ನನ್ನು ಅರಿತು ನಿನ್ನಲ್ಲಿ ಒಂದಾಗಿ ಹೋದ ಶರಣನಿಗೆ ಮತ್ತೆ ನಿನ್ನನ್ನು ಪೂಜಿಸಿ ಪ್ರಾರ್ಥಿಸಿ ವಂದಿಸಿ ಒಲಿಸಿಕೊಳ್ಳುವ ಸಾಂಪ್ರದಾಯಕ ವಿಧಿ ವಿಧಾನಗಳ ದರ್ದು ಇಲ್ಲ ಬಾಹ್ಯದ ಯಾವ ಹಂಗುಗಳೂ ಇಲ್ಲ ಎಂದು ಪ್ರತಿಪಾದಿಸುವ ಅಲ್ಲಮ ತನ್ನ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳಲು ನೀಡುವ ಮೂರು ಉದಾಹರಣೆಗಳು ವಚನದ ಆಕರ್ಷಕ ಅಂಶಗಳು. ಗಂಡು ಮತ್ತು ಹೆಣ್ಣು ಒಬ್ಬರನ್ನೊಬ್ಬರು ಪ್ರೀತಿಸಿ ಮಿಲನಗೊಳ್ಳುವಾಗ ಅಲ್ಲಿ ಹಾಸಿಗೆ ಹೊದಿಕೆಯ ಬಗ್ಗೆ ಗಮನವಿರುವುದಿಲ್ಲ. ಒಲುಮೆಯ ಕೂಟವೊಂದೇ ಗುರಿ. ಹಾಗೆಯೇ ಕಾಮೋದ್ರೇಕದಿಂದ ಹುಚ್ಚರಾದವರಿಗೆ ನಾಚಿಕೆ ಎಂಬ ಸೌಜನ್ಯದ ತಡೆಗೋಡೆ ಇರುವುದಿಲ್ಲ. ಮೂರನೇ ಉದಾಹರಣೆ ಚಿನ್ನದ್ದು. ಚಿನಿವಾರನ ಕೈಲಿ ಸಿಕ್ಕು ಹೊಳಪುಗೊಂಡ ಚಿನ್ನಕ್ಕೆ ಮತ್ತೆ ಒರೆಗಲ್ಲು ಹಚ್ಚಿ ಉಜ್ಜಿ ಪರೀಕ್ಷೆ ಮಾಡುವ ಅಗತ್ಯವಿಲ್ಲ.
ಪದಪ್ರಯೋಗಾರ್ಥ:
ಒಲುಮೆಯ ಕೂಟ ಎಂಬ ಪದವೇ ಅತ್ಯಂತ ರೋಮಾಂಚನಕಾರಿಯಾದುದು. ರಸಭರಿತವಾದುದು. ಪ್ರೀತಿ ಪ್ರೇಮದಿಂದ ಒಂದಾದ ಪ್ರಣಯಿಗಳು ಬಯಸುವುದೇ ಪ್ರೇಮ ಸಮಾಗಮ. ಆ ಸಮಾಗಮದಲ್ಲಿ ಯಾವುದೇ ಪರಿಕರ ಅಥವಾ ವ್ಯವಸ್ಥೆಯ ಅಗತ್ಯವಿಲ್ಲ. ಮೆತ್ತನೆ ಹಾಸಿಗೆಯ ಸುಪ್ಪತ್ತಿಗೆ ಬೇಕಿಲ್ಲ. ಏಸಿ ಕೋಣೆಯಂತ ಅಂತಪುರವೇ ಆಗಬೇಕೆಂದಿಲ್ಲ. ಮಿಲನವೊಂದೇ ಗುರಿ. ಅದೇ ಐಸಿರಿ. ಅದುವೇ ಮೈಸಿರಿ. ದೈವದ ಸಂಗವ ಬಯಸಿ ಬರುವ ಶರಣನಿಗೆ ಮತ್ತು ಶರಣಾದವನೊಂದಿಗೆ ಲಿಂಗಾಂಗ ಸಾಮರಸ್ಯ ಸಾಧಿಸಲು ಹವಣಿಸುವ ದೈವಕ್ಕೆ ಮಧ್ಯದಲ್ಲಿ ಯಾವುದೇ ಕುರುಹು ಅಥವಾ ಶರತ್ತುಗಳಿರುವುದಿಲ್ಲ ಎಂಬುದನ್ನು ಒಂದು ಜ್ವಲಂತ ಉದಾಹರಣೆಯ ಮೂಲಕ ರೂಪಿಸಲು ಅಲ್ಲಮ ಬಳಸಿರುವ “ಒಲುಮೆಯ ಕೂಟ”ದ ರೂಪಕ ಅತ್ಯಂತ ಚೇತೋಹಾರಿಯಾದದ್ದು. ಈ ಹಿನ್ನಲೆಯಲ್ಲಿ “ಒಲುಮೆ ಪೂಜೆಗೆಂದೆ ಕರೆಯ ಕೇಳಿ ಬಂದೆ ರಾಗ ತಾನss ಪ್ರೇಮ ಗಾನss ಸಂಜೀವನss ಸಂಜೀವನಾsss” ಎಂಬ ಅತ್ಯಂತ ಸುಶ್ರಾವ್ಯವಾದ ಅನುಪಮ ಕನ್ನಡ ಚಲನಚಿತ್ರ ಗೀತೆ ನೆನಪಿಸಿಕೊಳ್ಳುವಂತಹುದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.