ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗದೇ ಅರ್ಹರಿಗೆ ಮತ ಚಲಾಯಿಸಬೇಕು. ಮತದಾನ ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಚಿತ್ರದುರ್ಗದ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.
ಗಂಗಾವತಿ ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯದ ಶ್ರೀರಾಮಭಟ್ ಜೋಷಿ ಸ್ಮಾರಕದ ರಜತ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಮತದಾರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ದೇಶದ ಏಳ್ಗೆಗೆ ಯುವ ಸಮುದಾಯದ ಪಾತ್ರ ಬಹುಮುಖ್ಯವಾಗಿದ್ದು, ಚುನಾವಣೆಗಳಲ್ಲಿ ಅಭಿವೃದ್ಧಿಗೆ ನೆರವಾಗುವ ಜನಪ್ರತಿನಿಧಿಗೆ ಯೋಚಿಸಿ ಮತ ಹಾಕಬೇಕು. ಯೋಗ್ಯರನ್ನು ಆಯ್ಕೆ ಮಾಡಿದಾಗ ಮಾತ್ರ ದೇಶ ಪ್ರಗತಿ ದಿಕ್ಕಿನಲ್ಲಿ ಸಾಗಲು ಅನುಕೂಲ ಆಗುತ್ತದೆ” ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಮಾತನಾಡಿ, “ಚುನಾವಣೆ ಎಂಬುದು ಹಬ್ಬ ಇದ್ದಂತೆ, ಪ್ರತಿಯೊಬ್ಬರೂ ಖುಷಿಯಿಂದ ಪಾಲ್ಗೊಳ್ಳಬೇಕು. ಹಣ, ಹೆಂಡಕ್ಕೆ ಮತ ಮಾರಿಕೊಳ್ಳದೇ ದೇಶದ ಅಭಿವೃದ್ಧಿಗೆ ಹಿತ ಬಯಸುವ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು” ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಮಾತನಾಡಿ, “ಮತದಾನ ಹೆಚ್ಚಳಕ್ಕೆ ಹಲವಾರು ಜಾಗೃತಿ ಕಾರ್ಯಕ್ರಮ ಮಾಡಿದರೂ ಮತದಾನ ಪ್ರಮಾಣ ನಿರೀಕ್ಷೆಯಂತೆ ಹೆಚ್ಚಳ ಆಗುತ್ತಿಲ್ಲ. ಮತದಾನದ ಬಗ್ಗೆ ಯಾರೂ ನಿಷ್ಕಾಳಜಿ ತೋರದೇ ಕಡ್ಡಾಯಾಗಿ ಹಕ್ಕು ಚಲಾಯಿಸಬೇಕು” ಎಂದು ತಿಳಿಸಿದರು. ನಂತರ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಹುಳು ತುಂಬಿರುವ ಪಡಿತರ ಅಕ್ಕಿ, ಜೋಳ ವಿತರಣೆ; ಬಡವರ ಆರೋಗ್ಯದ ಜತೆಗೆ ಆಹಾರ ಇಲಾಖೆ ಚೆಲ್ಲಾಟ
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡರ್, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ಸಿಡಿಪಿಓ ಜಯಶ್ರೀ, ಗಂಗಾವತಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಬವರಾಜ ಎಂ ಎಚ್, ಶಿಕ್ಷಣ ಇಲಾಖೆ ಟಿಪಿಓ ಉಮಾದೇವಿ ಪಾಟೀಲ್, ತಹಸೀಲ್ದಾರ್ ಮಹಾಂತಗೌಡ್ರು, ಶಿರಸ್ತೇದಾರ್ ರವಿಕುಮರ್ ನಾಯಕವಾಡಿ, ಕಂದಾಯ ಇಲಾಖೆ, ನಗರಸಭೆ, ತಾಪಂ ಸಿಬ್ಬಂದಿಗಳು, ಬೂತ್ ಮಟ್ಟದ ಅಧಿಕಾರಿಗಳು, ಕಾಲೇಜು ಆಫ್ ಸಿರಿಗೇರಿ ಡೊ.ವೆಂಕೋಬ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಇದ್ದರು.
