ದೇಶವು 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದುಕೊಳ್ಳುವ ಮೂಲಕ ದಾಸ್ಯದ ಸಂಕೋಲೆ ಕಳಚಿಕೊಂಡಿತು. ಬಳಿಕ, ಈ ದೇಶದ ರಾಷ್ಟ್ರೀಯ ಗ್ರಂಥ ಹಾಗೂ ಪ್ರಜಾಪ್ರಭುತ್ವದ ಆತ್ಮವಾದ ಸಂವಿಧಾನದ ಜಾರಿಯಾದ ದಿನ 1950 ಜನವರಿ 26 ಭಾರತೀಯರಿಗೆ ಮಹತ್ವದ ದಿನ ಎಂದು ಸಾರಿಗೆ, ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ರಾಮನಗರ ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಂತರ ಪೊಲೀಸರು, ಗೃಹರಕ್ಷಕ ದಳ ಹಾಗೂ ವಿದ್ಯಾರ್ಥಿ ಕೆಡೆಟ್ ಗಳಿಂದ ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.
“ದೇಶದ ಇತಿಹಾಸವನ್ನು ಅವಲೋಕಿಸಿದಾಗ ಸಾಂಸ್ಕೃತಿಕವಾಗಿ ನಮ್ಮ ದೇಶವನ್ನು ಒಂದುಗೂಡಿಸಿದ್ದು, ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ. ರಾಮಾಯಣವು ಉತ್ತರದ ಆಯೋಧ್ಯದಿಂದ ದಕ್ಷಿಣದ ಶ್ರೀಲಂಕದವರೆಗೂ, ಮಹಾಭಾರತವು ಈಗಿನ ಅಫ್ಘಾನಿಸ್ಥಾನದಿಂದ ಹಸ್ತಿನಾಪುರ ಅಂದರೆ ದೆಹಲಿ ಮೂಲಕ ಉತ್ತರ-ಪೂರ್ವದ ಮಣಿಪುರದವರೆವಿಗೂ ಬೆಸೆದಿರುವುದು ಕಂಡುಬರುತ್ತದೆ” ಎಂದು ಹೇಳಿದರು.
“ಸ್ವಾತಂತ್ರ್ಯ ಬಂದಾಗ ಭಾರತ ದೇಶವು 562ಕ್ಕೂ ಹೆಚ್ಚಿನ ಸಂಸ್ಥಾನಗಳಾಗಿ ಹರಿದು ಹಂಚಿಹೋಗಿತ್ತು. ದೇಶವನ್ನು ಒಂದುಗೂಡಿಸಿ ಏಕತೆ ಮತ್ತು ಅಖಂಡತೆಯನ್ನು ಸ್ಥಾಪಿಸುವಲ್ಲಿ ಮಹಾತ್ಮ ಗಾಂಧಿ ನಿರ್ಣಾಯಕ ಪಾತ್ರ ವಹಿಸಿದರು. ಸುಮಾರು 33 ವರ್ಷ 1915 ರಿಂದ 1948ರವರೆಗೆ ದೇಶದ ಉದ್ದಗಲಕ್ಕೂ ಓಡಾಡಿದರು. ಅಹಿಂಸೆ ಮೂಲಕ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು” ಎಂದರು.
“ಡಾ. ಬಿ ಆರ್ ಅಂಬೇಡ್ಕರ್ ಅವರ ಅಧ್ಯಕ್ಷತೆಯ ಸಂವಿಧಾನ ರಚನಾ ಸಮಿತಿಯ 2 ವರ್ಷ 11 ತಿಂಗಳು 18 ದಿನ ಶ್ರಮವಹಿಸಿ ವಿಶ್ವ ಶ್ರೇಷ್ಠ ಸಂವಿಧಾನವನ್ನು ರಚಿಸಿತು. 1949ರ ನವೆಂಬರ್ 26ರಂದು ಸಂಸತ್ತಿನಲ್ಲಿ ಅಂಗೀಕೃತಗೊಂಡು, 1950 ಜನವರಿ 26ರಿಂದ ಸಂವಿಧಾನ ಜಾರಿಗೆ ಬಂದಿತು. 144 ಕೋಟಿ ಜನಸಂಖ್ಯೆಯ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಈ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬರಲು ನಮ್ಮ ಸಂವಿಧಾನವೇ ಕಾರಣ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣರಾಜ್ಯೋತ್ಸವದಲ್ಲಿ ಜೈಶ್ರೀರಾಮ್ ಘೋಷಣೆ; ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರ ಇಡದೆ ಅವಮಾನ
“ಸ್ವಾತಂತ್ರ್ಯ ಬಂದಾಗ ಶೇ.12ರಷ್ಟಿದ್ದ ಶಿಕ್ಷಣ ಈಗ ಶೇ.80ಕ್ಕೆ ಏರಿಕೆಯಾಗಿದೆ. ಅದಕ್ಕೆ ನಮ್ಮ ಸಂವಿಧಾನವೇ ಕಾರಣ. ಅದರ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಸಮಸಮಾಜ ನಿರ್ಮಾಣದ ದಾರಿಗಳನ್ನು ಬಲಪಡಿಸಲು ನಾವೆಲ್ಲರೂ ಕಟಿಬದ್ದರಾಗಬೇಕು” ಎಂದು ಕರೆ ನೀಡಿದರು.