ಆರ್ಥಿಕತೆ ವೃದ್ಧಿಯಾಗಲು, ಪ್ರಗತಿ ಸಾಧಿಸಲು, ಆರ್ಥಿಕ ವಹಿವಾಟು ಆರೋಗ್ಯಕರವಾಗಿರಲು ಶಾಂತಿ ಮತ್ತು ಸುವ್ಯವಸ್ಥೆ ಅತೀ ಮುಖ್ಯ. ನಾವು ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ನ ಕಾನ್ಸುಲೇಟ್ ಜನರಲ್ ಎವೊಟ್ ಡಿ ವಿಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
“ನೆದರ್ಲ್ಯಾಂಡ್ ದೇಶವು ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದು, ಒಟ್ಟಾರೆ ಹೂಡಿಕೆಯ ಶೇ.9 ರಷ್ಟಿದೆ. ಸುಸ್ಥಿರ ಇಂಧನ, ಇಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮೊದಲಾದ ಉದ್ಯಮಗಳಲ್ಲಿ ವಿಶೇಷವಾಗಿ ನಾವೀನ್ಯತಾ ವಲಯದಲ್ಲಿ ನೆದರ್ಲ್ಯಾಂಡ್ ವಿಶೇಷ ಆಸಕ್ತಿ ಹೊಂದಿದೆ” ಎಂದು ಎವೋಟ್ ಡಿ ವಿಟ್ ವಿವರಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕರ್ನಾಟಕವು ಕೈಗಾರಿಕೋದ್ಯಮದಲ್ಲಿ ಮುಂಚೂಣಿಯ ರಾಜ್ಯವಾಗಿದೆ. ವಿಶೇಷವಾಗಿ ಐಟಿ, ಬಿಟಿ ವಲಯದಲ್ಲಿ ನಂ. 1 ಸ್ಥಾನದಲ್ಲಿದೆ. ಶಾಂತಿಯುತ ರಾಜ್ಯ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲ ಲಭ್ಯವಿರುವುದರಿಂದ ಹೂಡಿಕೆಗೆ ಅತ್ಯುತ್ತಮ ತಾಣವಾಗಿದೆ. ರಾಜ್ಯದಲ್ಲಿ ನೆದರ್ಲ್ಯಾಂಡ್ ಕಂಪೆನಿಗಳ ನೆಲೆಯನ್ನು ಉತ್ತೇಜಿಸಲು ಎಲ್ಲ ಸಹಕಾರ ನೀಡಲಾಗುವುದು” ಎಂದು ತಿಳಿಸಿದರು.
“ಸೆಪ್ಟೆಂಬರ್ನಲ್ಲಿ ನೆದರ್ಲ್ಯಾಂಡ್ ಪ್ರಧಾನಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಬೆಂಗಳೂರಿಗೂ ಆಗಮಿಸಲಿದ್ದಾರೆ” ಎಂದು ಎವೋಟ್ ಡಿ ವಿಟ್ ತಿಳಿಸಿದೆ.