ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನೇ ಬದಲಿಸಬೇಕು ಎಂದು ಬಹಿರಂಗವಾಗಿ ಹೇಳಿಕೆ ಕೊಡುವ ಮನುವಾದಿಗಳ ವಿರುದ್ಧ ನಾವು ಹೋರಾಟ ಮಾಡುವುದು ಪ್ರಸ್ತುತ ಅತ್ಯಗತ್ಯವಾಗಿದೆ ಎಂದು ಹಿರಿಯ ಹೋರಾಟಗಾರ ಕಾಮ್ರೆಡ್ ಭಾರದ್ವಾಜ್ ಅಭಿಪ್ರಾಯಪಟ್ಟರು.
ಗಂಗಾವತಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಅಂಬೇಡ್ಕರ್ ಸರ್ಕಲ್ನಲ್ಲಿ ಎದ್ದೇಳು ಕರ್ನಾಟಕ ಹಾಗೂ ಸಂವಿಧಾನ ಸಂರಕ್ಷಣಾ ಪಡೆ ವತಿಯಿಂದ ನಡೆದ ʼಸಂವಿಧಾನ ಯಾನʼಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಈ ದೇಶಕ್ಕೆ ಸಂವಿಧಾನ ಬರುವ ಪೂರ್ವದಲ್ಲಿ ದಲಿತ, ಶೋಷಿತ ಸಮುದಾಯಗಳ ಧ್ವನಿಯನ್ನು, ಸಮಾನತೆಯನ್ನ ಹಾಗೂ ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳಲಾಗಿತ್ತು. ಇವತ್ತು ಸಂವಿಧಾನ ನಮಗೆ ಸಮಾನತೆಯ ಜೊತೆಗೆ ಸಾಮಾಜಿಕವಾಗಿ, ನ್ಯಾಯಕ್ಕಾಗಿ ಹೋರಾಡುವ ಹಕ್ಕನ್ನು ಕೊಟ್ಟಿದೆ. ಸಂವಿಧಾನ ಬದಲಿಸಲು ಸಂಚು ನಡೆದಿರುವುದು ಇಂದು ನಿನ್ನೆಯದಲ್ಲ. ಜಾರಿ ಬಂದ ದಿನದಿಂದಲೇ ನಡೆದಿದೆ. ಇಂತಹ ಕುತಂತ್ರಗಳ ವಿರುದ್ಧ ಒಗ್ಗಾಟಾಗಿ ಹೋರಾಟ ಮಾಡಬೇಕು” ಎಂದು ಕರೆ ನೀಡಿದರು.
ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಸಿರಾಜ್ ಅಹ್ಮದ್ ಮಾತನಾಡಿ, “ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಸಂವಿಧಾನ, ರೈತ, ಸೈನಿಕ, ದೇಶದ ಸುರಕ್ಷತೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರದ ಸಚಿವರು, ಪಕ್ಷದ ನಾಯಕರು ಬಹಿರಂಗವಾಗಿ ಸಂವಿಧಾನ ಬದಲಿಸುವುದಕ್ಕೆ ನಾವು ಬಂದಿರುವುದು ಎಂದು ಹೇಳಿಕೆ ಕೊಡುತ್ತಿವೆ. ಇವರ ಮನುವಾದ ಕಾನೂನು ಜಾರಿಗೆ ತಂದು ಈ ದೇಶದ ಮೂಲ ನಿವಾಸಿಗಳನ್ನ ಗುಲಾಮರನ್ನಾಗಿ ಮಾಡುವುದು ಅವರ ಸ್ಪಷ್ಟ ಉದ್ದೇಶವಾಗಿದೆ. ಹಾಗಾಗಿ ನಾವು ಇಂದಿನ ಸಂವಿಧಾನ ವಿರೋಧಿಗಳ ವಿರುದ್ಧ ಬೀದಿಗೆ ಬಂದು ಹೋರಾಡಲು ಸಿದ್ಧವಾಗಬೇಕು” ಎಂದು ತಿಳಿಸಿದರು.
ರೈತ ಮುಖಂಡ ಶಂಕರ್ ಪಾಟೀಲ್ ಮಾತನಾಡಿ, “ಸಂವಿಧಾನ ನಮಗೆ ಶಿಕ್ಷಣದ ಹಕ್ಕು, ಸಂಘಟಿಸುವ ಹಕ್ಕು, ಹೋರಾಟದ ಹಕ್ಕೂ ಕೊಟ್ಟಿದೆ. ಅದು ಅಂಬೇಡ್ಕರ್ ಅವರ ಶ್ರಮದ ಫಲ. ನಮ್ಮ ಹಕ್ಕಿಗಾಗಿ ಹೋರಾಡುವ ರೈತರನ್ನ ದೇಶದ್ರೋಹಿಗಳು, ಖಲಿಸ್ತಾನಿಗಳು ಎಂದು ಕರೆದು ಅನ್ನದಾತನಿಗೆ ಕೇಂದ್ರ ದ್ರೋಹ ಬಗೆಯುತ್ತಿದೆ. ಅವೈಜ್ಞಾನಿಕ ಕಾನೂನು ಜಾರಿಗೆ ತರುವುದರ ಮೂಲಕ ಸಂವಿಧಾನಕ್ಕೆ ಅನ್ಯಾಯ ಮಾಡಿದೆ. ನಿರಂತರ ಸಂವಿಧಾನ ಒಪ್ಪಿಗೆ ಇಲ್ಲ ಅಂತ ಹೇಳುವ ಮೂಲಕ ಸಮಾನತೆ ಕೊಟ್ಟ ಸಂವಿಧಾನದ ಪ್ರತಿ ಸುಡುತ್ತಿದ್ದಾರೆ. ಎಲ್ಲರೂ ಎಚ್ವರಗೊಳ್ಳುವ ಕಾಲ ಇದು” ಎಂದರು.

ಜಮಾ ಅತೆಯ ಎಮ್ ಆರ್ ರಾಜಾ ಸಾಬ್ ಮಾತನಾಡಿ, “ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಯಾವುದೇ ಒಂದು ಸಮುದಾಯ, ಜಾತಿ, ಧರ್ಮದ ಉದ್ಧಾರಕ್ಕೆ ರಚನೆ ಮಾಡಲಿಲ್ಲ. ಎಲ್ಲರನ್ನೊಳಗೊಂಡು ಸಮಾನ ಹಕ್ಕು ಕೊಟ್ಟರು. ಅಂಬೇಡ್ಕರ್ ಸಂವಿಧಾನ ‘ಸತ್ತವರ ಚರಿತ್ರೆಯಲ್ಲ, ಬದುಕಿದವರ ಬದುಕು’ ಎಂದರು. ಮೂಲ ನಿವಾಸಿಗಳ ಬದುಕನ್ನೇ ತುಳಿಯುವ ಮತಾಂಧರಿಂದ ಸಂವಿಧಾನ ರಕ್ಷಿಸಬೇಕಿದೆ. ಸಂವಿಧಾನದಲ್ಲಿ ಕೇವಲ ಅಕ್ಷರಗಳಿಲ್ಲ, ಭಾಷೆಯಿಲ್ಲ ಭಾರತದ ಮೂಲ ನಿವಾಸಿಗಳ ಬದುಕು, ಉಸಿರು ಇದೆ” ಎಂದು ಹೇಳಿದರು.
ಜನಶಕ್ತಿ ರಾಜ್ಯ ಸಂಚಾಲಕ ರಾಜನಾಯ್ಕ್ ಕುಷ್ಟಗಿ ಮಾತನಾಡಿ, “ಸಂವಿಧಾನದ ಮೂಲ ಆಶಯ, ಉದ್ದೇಶವನ್ನು ಎದ್ದೇಳು ಕರ್ನಾಟಕದ ಮೂಲಕ ಹಳ್ಳಿಯ ಮುಗ್ದ ಜನರವರೆಗೂ ತಲುಪಿಸಬೇಕು. ಸಂವಿಧಾನ ಸಂರಕ್ಷಣೆ ಮಾಡಿಕೊಳ್ಳುವಲ್ಲಿ ಯುವಕರನ್ನ ಸಂಘಟಿಸಿ ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡುವ ಅಗತ್ಯ ಇದೆ. ಸಂವಿಧಾನ ಮೂಲ ಆಶಯ ಕಿತ್ತೊಗೆದರೆ ಭಾರತ ಸಂಪೂರ್ಣ ಸಂಕಷ್ಟದಲ್ಲಿ ಸಿಲುಕಲಿದೆ ಎಂಬುದನ್ನು ಮನದಟ್ಟು ಮಾಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಶಾದಿ ಮಹಲ್ ಬಾಡಿಗೆ ಕಡಿಮೆ ಮಾಡಿ; ಸಚಿವ ಜಮೀರ್ ಅಹ್ಮದ್ಗೆ ಮನವಿ
ಈ ವೇಳೆ ದುರ್ಗೇಶ ಬರಗೂರು, ಯುಮನೂರು ಇಳೆಗನೂರು, ಲಕ್ಷ್ಮೀ ಹೊಸಕೇರಿ, ಯಮುನಾ ಚೇಳೂರು, ಚೈತ್ರ ಗಬ್ಬೂರ, ಮಾರುತಿ, ಸುನೀಲ್, ಶೋಭಾ ರಾಂಪೂರ, ಜಾಂಭವಿ ರಾಂಪೂರ, ಕಾ ವಿಜಯ, ಅನುಪಮ್, ಶರಣು, ಶ್ರೀದೇವಿ ಬರಗೂರು, ಮುಂತಾದವರು ಇದ್ದರು.
