ಸಮಾಜದೊಳಗಿನ ಬಡತನ, ಅನ್ಯಾಯ ಹಾಗೂ ಶೋಷಣೆ ಹೋಗಲಾಡಿಸಲು ಕ್ರಾಂತಿಯಿಂದಲೇ ಸಾಧ್ಯ ಎಂದು ಯುವಕರ ತಲೆಯಲ್ಲಿ ತುಂಬಿ, ಅವರ ಕೈಗೆ ಬಂದೂಕು ಕೊಟ್ಟು ನಕ್ಸಲರು ಹಾದಿ ತಪ್ಪಿಸಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಕಲಬುರಗಿ ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಶುಕ್ರವಾರ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, “ನಕ್ಸಲರ ಮಾತು ನಂಬಿ ಅದೆಷ್ಟೋ ಯುವಕರು ಈಗ ಜೈಲಿನಲ್ಲಿ ಕೊಳೆಯುವಂತಾಗಿದೆ” ಎಂದರು.
ಬಂದೂಕು ಹಿಡಿದ ಯುವಕರ ಬಗ್ಗೆ ನಾವು ಯೋಚಿಸಬೇಕು. ಬಂದೂಕು ಹಿಡಿದಾಗ ತಾನು ಆತ್ಮಾಹುತಿ ಮಾಡಿಕೊಂಡಾದರೂ ಸರಿ ಸಮಾಜದಲ್ಲಿ ಬದಲಾವಣೆ ತರಬೇಕು ಎಂಬ ಹುಚ್ಚು ಇರುತ್ತದೆ. ಅದನ್ನೇ ಯೌವನದ ಬಿಸಿರಕ್ತ ಎನ್ನಬಹುದು. ಆದರೆ, ದೇಶದ ಮುಕ್ತಿಗೆ ಏಳಿಗೆಗೆ ಸರಿಯಾದ ದಾರಿ ಯಾವುದೆಂದು ತೋರಿಸುವ ಹೊಣೆಗಾರಿಕೆ ತಂದೆ, ತಾಯಿಗಳದ್ದು ಹಾಗೂ ಸಮಾಜಿಕ ಸಂಸ್ಥೆಗಳದ್ದು” ಎಂದು ತಿಳಿಸಿದರು.
“ಬಂದೂಕಿನ ನಳಿಕೆಯ ಮೂಲಕವೇ ಇದಕ್ಕೆ ಪರಿಹಾರ ಎಂದು ಯುವಕರನ್ನು ನಕ್ಸಲ್ ನಾಯಕರು ನಂಬಿಸಿದ್ದರು. ಆದರೆ, ಸಮಾಜದಲ್ಲಿ ಪರಿವರ್ತನೆ ತರಬೇಕು ಎಂದು ಬಯಸಿರುವ ಹಲವು ಯುವಕರಿಗೆ ಹಿಂಸೆ ಮಾಡದೆಯೂ ಏನಾದರೂ ಸಾಧಿಸಬಹುದು ಎಂಬುದನ್ನು ಹೇಳಿಕೊಡಬೇಕಿದೆ” ಎಂದರು.
“ಕೃತಕ ಬುದ್ಧಿಮತ್ತೆಯಂತಹ ತಾಂತ್ರಿಕ ಆವಿಷ್ಕಾರ, ಸಾಮಾಜಿಕ ಮಾಧ್ಯಮಗಳು ಬೆಳವಣಿಗೆ ತಡೆಯಲಾಗುವುದಿಲ್ಲ. ಭಾರತೀಯು ಯುವಕರು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಅವರನ್ನು ಇಲ್ಲಿಯೇ ಹಿಡಿದಿಟ್ಟುಕೊಂಡು ದೇಶದ ಒಳಿತಿಗಾಗಿ ಸಂಶೋಧನೆಗಳನ್ನು ನಡೆಸುವಂತೆ ಮನವೊಲಿಸಬೇಕಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ
“ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅನಿವಾರ್ಯತೆ ಈಗ ನಮ್ಮ ಮುಂದಿಲ್ಲ. ಆದರೆ, ನಮ್ಮಲ್ಲಿನ ಹೇಡಿತನವನ್ನು ಮರೆತು ಸಮಸ್ಯೆಗಳನ್ನು ಮೆಟ್ಟಿ ಮುನ್ನುಗ್ಗುವ ಛಾತಿ ಯುವಕರಲ್ಲಿ ಬರಬೇಕಿದೆ. ಆಧುನಿಕತೆಯ ಭರಾಟೆಯಲ್ಲಿ ಮನುಷ್ಯ ಸಂಬಂಧಗಳನ್ನು ಮರೆಯುತ್ತಿದ್ದೇವೆ. ತಂದೆ-ತಾಯಿಗಳಿಗೆ ವೃದ್ದಾಶ್ರಮ ಹುಡುಕುವ ಪರಿಸ್ಥಿತಿ ಬಂದಿದೆ. ಇದನ್ನು ತಪ್ಪಿಸಲು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಕೆಲಸ ಆಗಬೇಕು” ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿವಿಮಾತು ಹೇಳಿದರು.
“1ನೇ ತರಗತಿಯಿಂದ ಪಿಯುಸಿವರೆಗೆ ದೇಶದಲ್ಲಿ 39 ಕೋಟಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ದೇಶದ 1500ಕ್ಕೂ ಅಧಿಕ ವಿಶ್ವವಿದ್ಯಾಲಯ, 50 ಸಾವಿರ ಕಾಲೇಜುಗಳಲ್ಲಿ 11.68 ಕೋಟಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 51 ಕೋಟಿ ಯುವಕರು 25 ವಯಸ್ಸಿನ ಒಳಗಿದ್ದಾರೆ. ಈ ಅಂಕಿ ಅಂಶ ಗಮನಿಸಿದರೆ ಭಾರತವು ಬೃಹತ್ ಯುವಪಡೆಯನ್ನು ಹೊಂದಿದೆ. ಇದರ ಮೇಲೆ ಪಾಶ್ಚಾತ್ಯ ದೇಶಗಳ ಕಣ್ಣು ನೆಟ್ಟಿದೆ. ಭಾರತದ ಯುವಕರು ವಿದೇಶಕ್ಕೆ ರಫ್ತಾಗದಂತೆ ತಡೆಯಬೇಕು” ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ ಅಭಿಪ್ರಾಯಪಟ್ಟರು.
RSS, plus allies train innocent youths by giving weapon Training…is it justifiable under Indian law ?