ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಬೇಕು, ಬ್ರಹ್ಮರ ಕೂಟ್ಲು ಟೋಲ್ ಗೇಟ್ ತೆರವುಗೊಳಿಸಬೇಕು, ಹೊಸ ಟೋಲ್ಗೇಟ್ಗಳನ್ನು ಅಳವಡಿಸುವ ಸಂದರ್ಭ ಅಂತರದ ನಿಯಮಗಳನ್ನು ಪಾಲಿಸಬೇಕು, ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಫೆಬ್ರವರಿ 5ರ ಬುಧವಾರದಂದು ಬೆಳಗ್ಗೆ 10 ಗಂಟೆಗೆ ನಂತೂರು ಜಂಕ್ಷನ್ ಸಮೀಪ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಸಾಮೂಹಿಕ ಧರಣಿ ಹಮ್ಮಿಕೊಂಡಿದೆ ಎಂದು ಹೋರಾಟ ಸಮಿತಿಯ ಸಂಚಾಲಯ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಮೇಲ್ದರ್ಜೆಗೆ ಏರುತ್ತಿರುವ ಬಿ ಸಿ ರೋಡ್ – ಗುಂಡ್ಯ, ಪೂಂಜಾಲಕಟ್ಟೆ – ಚಾರ್ಮಾಡಿ, ನಂತೂರು – ಮೂಡಬಿದ್ರೆ – ಕಾರ್ಕಳ ಹೆದ್ದಾರಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು, ಪೂರ್ತಿ ಹದಗೆಟ್ಟಿರುವ ಸುರತ್ಕಲ್ – ನಂತೂರು ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಗಿತಗೊಂಡಿರುವ ನಂತೂರು ಮೇಲ್ಸೇತುವೆ, ಕೂಳೂರು ನೂತನ ಸೇತುವೆ ಕಾಮಗಾರಿಗಳನ್ನು ಆದ್ಯತೆಯಲ್ಲಿ ನಡೆಸಿ ಕಾಲಮಿತಿಯ ಒಳಗಡೆ ಪೂರ್ಣಗೊಳಿಸಬೇಕು ಮುಂತಾದ ಅತ್ಯಂತ ಪ್ರಮುಖ ಬೇಡಿಕೆಗಳ ಮೇಲೆ ಸಾಮೂಹಿಕ ಧರಣಿ ನಡೆಯುತ್ತಿದ್ದು, ಸಮಸ್ಯೆಗಳು ಬಗೆ ಹರಿಯುವವರೆಗೆ ಹಲವು ಹಂತಗಳಲ್ಲಿ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಇದನ್ನು ಓದಿದ್ದೀರಾ? ಯಮುನಾ ನದಿಯ ನೀರನ್ನು ಕುಡಿದು ತೋರಿಸಿ: ಅರವಿಂದ್ ಕೇಜ್ರಿವಾಲ್ಗೆ ಸವಾಲೆಸೆದ ರಾಹುಲ್ ಗಾಂಧಿ
ಜಿಲ್ಲೆಯ ಮಾಜಿ ಸಚಿವರು, ಶಾಸಕರುಗಳು, ವಿವಿಧ ಜನಪರ ಸಂಘಟನೆಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರುಗಳು ಧರಣಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
