ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ರ್ಯಾಂಕ್(ಹೆಚ್ಚು ಅಂಕ) ಗಳಿಸುವ ಮೂಲಕ ವಿದ್ಯಾಕಾಶಿಗೆ ಮೆರಗು ತರಲು ಮುಂದಾಗುವಂತೆ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಕೆ ಇ ಬೋರ್ಡ್ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ ಹಲವು ತಾಲೂಕುಗಳ ಪ್ರತಿಭಾವಂತ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ʼನಮ್ಮ ಗುರಿ ನೂರರತ್ತ-ಪ್ರೇರಣಾʼ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಓದು-ಬರಹ ಸುಧಾರಣೆ, ಎಸ್ಎಸ್ಎಲ್ಸಿ ಅನುತ್ತೀರ್ಣ ಪ್ರಮಾಣ ಕಡಿಮೆ ಮಾಡುವ ಉದ್ದೇಶವನ್ನು ಮಿಶನ್ ವಿದ್ಯಾಕಾಶಿ ಹೊಂದಿದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯಿಂದ ಸುಮಾರು 29 ಸಾವಿರ ಮಂದಿ ಮಕ್ಕಳು ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣ ಆಗುವಂತೆ ಅವರ ಕಲಿಕಾ ಗುಣಮಟ್ಟಕ್ಕೆ ಅನುಗುಣವಾಗಿ ಶಿಕ್ಷಕರಿಂದ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಓದು ಬರಹ ಕಲಿಸಲಾಗುತ್ತಿದೆ” ಎಂದರು.
“ಜಿಲ್ಲೆಗೆ ಈ ಬಾರಿ ಹೆಚ್ಚು ರ್ಯಾಂಕ್ ತರಬೇಕೆಂಬ ಹಿನ್ನೆಲೆಯಲ್ಲಿ ಚಾಣಾಕ್ಷ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆ ಮೂಲಕ ಪ್ರತಿ ತಾಲೂಕಿನಲ್ಲಿ ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರತಿ ತಾಲೂಕಿನಿಂದ ವಿಶೇಷವಾಗಿ 20 ಮಂದಿ ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆ, ಪರೀಕ್ಷಾ ಗುಣಮಟ್ಟ ಗಮನಿಸಿ, ನಮ್ಮ ಗುರಿ ನೂರರತ್ತ ಪ್ರೇರಣಾ ಕಾರ್ಯಾಗಾರದಲ್ಲಿ ತರಬೇತಿಗೆ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದರು.

“ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳು ಶ್ರಮ ಪಟ್ಟು ಓದುವ, ನಿರಂತರ ಅಧ್ಯಯನ ಮೂಲಕ ಸಾಮಾನ್ಯರ ಗುಂಪಿನಿಂದ ಸಾಧಕರ ಗುಂಪಿಗೆ ಸೇರಬೇಕು. ಜೀವನದಲ್ಲಿನ ಎಲ್ಲ ಸಾಧನೆಗಳಿಗೆ ಶ್ರದ್ಧೆ ಮತ್ತು ಶಿಸ್ತುಬದ್ಧತೆ ಮುಖ್ಯವಾಗಿದೆ. ಗೆಲವು, ಸಾಧನೆಗಳಿಗೆ ಶಿಸ್ತು ಮೂಲ ಕಾರಣ. ವಿದ್ಯಾರ್ಥಿಗಳು ಓದಿನಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಸತತ ಅಧ್ಯಯನದಿಂದ ಸಾಧನೆ ಸಾಧ್ಯವಾಗುತ್ತದೆ ಎಂದರು.
“ನಮ್ಮ ಸ್ಪರ್ಧೆ ಇತರರೊಂದಿಗೆ ಮಾಡದೆ ನಮ್ಮೊಳಗೆ ನಾವೇ ಸ್ಪರ್ಧೆ ಮಾಡಿಕೊಳ್ಳಬೇಕು. ಅಂದಾಗ ಆರೋಗ್ಯಕರ ಸ್ಪರ್ಧೆ ಮೂಡುತ್ತದೆ” ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, “ಪರೀಕ್ಷೆಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ, ಏಕಾಗ್ರತೆ ಮತ್ತು ಯೋಜನಾಬದ್ಧವಾಗಿ ತಯ್ಯಾರಿ ಮಾಡಿಕೊಳ್ಳಬೇಕು. ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆಗೆ ಇದು ಮುಖ್ಯ ಕಾಲವಾಗಿದ್ದು, ಪ್ರತಿದಿನ ವಿಷಯವಾರು ಪುನರ್ ಮನನ ಮಾಡಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಮುಖ್ಯವಾಗಿದೆ. ಸರಿಯಾದ ಆಹಾರ ಪದ್ದತಿ ರೂಢಿಸಿಕೊಳ್ಳಬೇಕು. ಓದುವ ಹಾಗೂ ಬರೆಯುವ ವಿಷಯಗಳ ಬದಲಾವಣೆಯೂ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಟಾವಿಗೆ ಬಂದ ಜೋಳದ ಬೆಳೆಗೆ ಬೆಂಕಿ; ₹2 ಲಕ್ಷ ಮೌಲ್ಯ ಬೆಳೆನಾಶ
ಕೆ ಇ ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಡಿ ಎಸ್ ರಾಜಪೂರೋಹಿತ ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್ಸಿ ಎಂಬುದು ಶೈಕ್ಷಣಿಕ ಬದುಕಿನ ಮೊದಲ ಮೆಟ್ಟಿಲು. ಭಕ್ತಿ, ಶ್ರದ್ದೆ ಮತ್ತು ಹೃದಯದಿಂದ ಓದಬೇಕು. ಆಗ ಮಾತ್ರ ಶಿಕ್ಷಣ ಒಲಿಯುತ್ತದೆ. ಓದುಬರಹವನ್ನು ಪ್ರೀತಿಸಿ, ಮೆಚ್ಚಿ ಮುನ್ನಡೆಯಿರಿ” ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್ ಎಸ್ ಕೆಳದಿಮಠ, ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಉಪಯೋಜನಾಧಿಕಾರಿ ಎಸ್ ಎಂ ಹುಡೇದಮನಿ, ಡಯಟ್ ಹಿರಿಯ ಉಪನ್ಯಾಸಕ ಎ ಎ ಖಾಜಿ, ಶಿಕ್ಷಣ ಅಧಿಕಾರಿ ನಾಫೀಸಾಬಾನು ದಾವಲಸಾಬನವರ ಕೆ ಇ ಬೋರ್ಡ್ ಸಂಸ್ಥೆಯ ಪಿಯು ಕಾಲೇಜ್ ಪ್ರಾಚಾರ್ಯ ಎನ್ ಎಸ್ ಗೋವಿಂದರಡ್ಡಿ ಸೇರಿದಂತೆ ಇತರರು ಇದ್ದರು.