ವಿಮಾನದಲ್ಲಿ ನಮಗೆ ಕೈಗೆ ಬೇಡಿ ತೊಡಿಸಿ, ಕಾಲುಗಳನ್ನು ಸರಪಣಿಯಿಂದ ಕಟ್ಟಲಾಗಿತ್ತು ಎಂದು ಅಮೆರಿಕದಿಂದ ಗಡಿಪಾರುಗೊಂಡ ಪಂಜಾಬ್ನ ಜಸ್ಪಾಲ್ ಸಿಂಗ್ ನೋವು ತೋಡಿಕೊಂಡಿದ್ದಾರೆ.
ಹುಟ್ಟೂರು ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಮೃತಸರ ವಿಮಾನ ನಿಲ್ದಾಣದಲ್ಲಿ ಇದನ್ನು ಬಿಡಿಸಲಾಯಿತು. 11 ದಿನಗಳ ಕಾಲ ನಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎನ್ನುವ ಅರಿವು ನಮಗೆ ಇರಲಿಲ್ಲ. ನಮ್ಮನ್ನು ಬೇರೆ ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ನಾವು ಭಾವಿಸಿದ್ದೆವು. ಬಳಿಕ ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಈ ವೇಳೆ ನಮಗೆ ಬೇಡಿ ತೊಡಿಸಿ ಕಾಲುಗಳನ್ನು ಸರಪಣಿಯಿಂದ ಕಟ್ಟಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ಬಿಡಿಸಲಾಯಿತು” ಎಂದು ವಿವರಿಸಿದರು.
“ಅಮೆರಿಕಕ್ಕೆ ಕಾನೂನುಬದ್ಧ ಪ್ರವೇಶ ನೀಡುವುದಾಗಿ ಭರವಸೆ ನೀಡಿರುವ ಟ್ರಾವೆಲ್ ಏಜೆಂಟ್ನಿಂದ ನಾನು ವಂಚನೆಗೆ ಒಳಗಾಗಿದ್ದೇನೆ. ಅಮೆರಿಕದ ವಿಸಾ ಬಂದ ಬಳಿಕ ನನ್ನನ್ನು ಕಳುಹಿಸುವಂತೆ ಕೇಳಿಕೊಂಡಿದ್ದೆ. ಆದರೆ ಆತ ನನಗೆ ವಂಚಿಸಿದ. 30 ಲಕ್ಷ ರೂಪಾಯಿಗೆ ವ್ಯವಹಾರ ನಡೆದಿತ್ತು” ಎಂದು ಹೇಳಿದರು.
ಕಳೆದ ವರ್ಷದ ಜುಲೈನಲ್ಲಿ ವಿಮಾನ ಮೂಲಕ ಬ್ರೆಜಿಲ್ ತಲುಪಿದ್ದೆ. ಮುಂದಿನ ಹಂತದಲ್ಲಿ ಅಮೆರಿಕಕ್ಕೆ ಕೂಡಾ ವಿಮಾನದಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಆದರೆ ಟ್ರಾವೆಲ್ ಏಜೆಂಟ್ ನಮ್ಮನ್ನು ವಂಚಿಸಿದರು. ಅಕ್ರಮವಾಗಿ ಗಡಿ ದಾಟುವಂತೆ ಬಲವಂತಪಡಿಸಿದರು ಎಂದು ಅಳಲು ತೋಡಿಕೊಂಡರು.
ದೊಡ್ಡ ಮೊತ್ತದ ಸಾಲ ಮಾಡಿ ನಾವು ಅಮೆರಿಕಾಗೆ ಬಂದಿದ್ದೆವು. ಬುಧವಾರ ವಿಮಾನದಲ್ಲಿ ಬಂದಾಗಲೇ ನಾವು ಭಾರತಕ್ಕೆ ಬಂದಿದ್ದೇವೆಂದು ಮಾಧ್ಯಮಗಳ ಮೂಲಕ ತಿಳಿದುಕೊಂಡೆವು ಎಂದು ಜಸ್ಪಾಲ್ ಸಿಂಗ್ ಸಂಬಂಧಿಕರೊಬ್ಬರು ತಿಳಿಸಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಅಕ್ರಮ ವಲಸೆಗಾರರ ವಿರುದ್ಧ ಸಮರ ಸಾರಿದ್ದು, 104 ಮಂದಿ ಅಕ್ರಮ ವಲಸಿಗರನ್ನು ಕರೆತಂದ ಅಮೆರಿಕದ ಸೇನಾ ವಿಮಾನ ಬುಧವಾರ ಸಂಜೆ ಅಮೃತಸರದಲ್ಲಿ ಬಂದಿಳಿದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿದ್ರಿಸುವ ಸಚಿವರು, ಪ್ರಶ್ನಿಸದ ಸಂಸದರು- ಕರ್ನಾಟಕದ ಹಿತ ಕಾಪಾಡುವವರು ಯಾರು?
ಮಂಗಳವಾರ(ಫೆ.04) ಮಧ್ಯಾಹ್ನ ಟೆಕ್ಸಾಸ್ನ ಸ್ಯಾನ್ ಆಂಟೋನಿಯೊದಿಂದ ಹೊರಟ ಈ ವಿಮಾನದಲ್ಲಿ 11 ಸಿಬ್ಬಂದಿ ಮತ್ತು 45 ಅಮೆರಿಕದ ಅಧಿಕಾರಿಗಳು ಇದ್ದರು. ವರದಿಗಳ ಪ್ರಕಾರ ಗುಜರಾತ್ ಮತ್ತು ಹರಿಯಾಣ ಮೂಲದವರು ತಲಾ 33 ಜನರಿದ್ದಾರೆ. 30 ಜನರು ಪಂಜಾಬ್, ತಲಾ ಇಬ್ಬರು ಪ್ರಯಾಣಿಕರು ಉತ್ತರ ಪ್ರದೇಶ ಮತ್ತು ಚಂಡೀಗಢದವರು, ಮೂವರು ಮಹಾರಾಷ್ಟ್ರ ಮೂಲದವರು ಎಂದು ತಿಳಿದು ಬಂದಿದೆ.
ಇದರಲ್ಲಿ 25 ಮಹಿಳೆಯರು ಮತ್ತು 12 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. 48 ಮಂದಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎನ್ನಲಾಗಿದೆ. ಪಂಜಾಬ್ನ 30 ಜನರಲ್ಲಿ ಹೆಚ್ಚಿನವರು ಗುರುದಾಸ್ಪುರ, ಅಮೃತಸರ ಮತ್ತು ತರಣ್ ಸೇರಿದಂತೆ ಗಾಜಾ ಪಟ್ಟಿಯಿಂದ ಬಂದವರು, ಇತರರು ಜಲಂಧರ್, ನವನ್ಶಹರ್, ಪಟಿಯಾಲ, ಮೊಹಾಲಿ ಮತ್ತು ಸಂಗ್ರೂರ್ನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
