ಕರ್ನಾಟಕದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಇಂದಿಗೂ ಪ್ರಚಲಿತದಲ್ಲಿರುವ ಕಲೆ ಎಂದರೆ ಅದು ನಾಟಕ. ಲಲಿತ ಕಲೆಗಳಲ್ಲಿ ಜನ ಸಾಮಾನ್ಯರಿಗೆ ಹತ್ತಿರದ ಕಲೆಯಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು.
ವಿಜಯನಗರದ ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗ ಹಾಗೂ ಸಂಗೀತ ಮತ್ತು ನ್ಯತ್ಯ ವಿಭಾಗದಿಂದ ಫೆಬ್ರವರಿ 6ರಂದು ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ನಡೆದ ನಾಟಕ ರಚನೆ, ನಟನೆ ಹಾಗೂ ನಿರ್ದೇಶನದ ಹತ್ತು ದಿನದ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ನಾಟಕ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಗಾಧವಾದುದು. ಈ ಭಾಗದ ಬಹುತೇಜಕ ನಾಟಕ ಕಲಾವಿದರು ತಮ್ಮ ಇಡೀ ಜೀವನವನ್ನು ನಾಟಕ ರಂಗಕ್ಕೇ ಮುಡಿಪಾಗಿಟ್ಟಿದ್ದಾರೆ. ಇಂದಿಗೂ ಹಳ್ಳಿಗಳಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಪ್ರತಿ ವರ್ಷವೂ ತಮ್ಮ ಊರುಗಳಲ್ಲಿ ನಾಟಕ ಪ್ರದರ್ಶನಗಳು ನಡೆಯುತ್ತಿವೆ. ನಟನೆಗೆ ಪೂರ್ವ ಸಿದ್ಧತೆ ಅವಶ್ಯಕತೆಯಿದೆ. ಅದಕ್ಕೆ ಬೇಕಾದ ಕಲೆಗಳನ್ನೆಲ್ಲಾ ಶಿಬಿರದಲ್ಲಿ ಕಲಿಯಿರಿ” ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಹೊಸಪೇಟೆಯ ಟಿ ಬಿ ಡ್ಯಾಮ್ ಕನ್ನಡ ಕಲಾ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಎಸ್ ಎಸ್ ಅತಥಿ ಭಾಷಣ ಮಾಡಿ, “ನಾಟಕ, ನಟನೆ, ನಿರ್ದೇಶನಗಳು ತ್ರಿವೇಣಿ ಸಂಗಮ ಎಂಬಂತೆ ಮೂರು ಕಲೆಗಳನ್ನು ಒಂದೇ ಶಿಬಿರದಲ್ಲಿ ಆಯೋಜನೆಗೊಂಡಿದೆ. ಕನ್ನಡ ಕಲಾ ಸಂಘ ಸತತ 6 ದಶಕಗಳಿಂದ ರಂಗಭೂಮಿಯ ಸೇವೆ ಮಾಡುತ್ತಿದೆ. ಕನ್ನಡ ವಿಶ್ವವಿದ್ಯಾಲಯ ನಮ್ಮನ್ನು ಗುರುತಿಸಿರುವುದು ಸಂತೋಷ ತಂದಿದೆ. ಕರ್ನಾಟಕದಲ್ಲಿ ನಾಟಕ, ರಚನೆ, ನಿರ್ದೇಶನ ರಂಗಗಳಿಗೆ ಹಲವಾರು ಸಾಧಕರು ಸೇವೆ ಮಾಡಿದ್ದಾರೆ. ಪ್ರಸ್ತುತ ಕಾಲದಲ್ಲಿ ನೃತ್ಯ, ಸಂಗೀತ, ನಾಟಕ ಅಗತ್ಯವಿದೆ. ಅದಕ್ಕಾಗಿ ರಂಗಭೂಮಿ ಉಳಿಯುವುದು ಅತಿಮುಖ್ಯವಾಗಿದೆ” ಎಂದರು.
ಶಿಬಿರದ ನಿರ್ದೇಶಕ, ನೀನಾಸಂ ರಂಗಕರ್ಮಿ ಶ್ರೀಕಾಂತ ನವಿಲುಗರಿ ಮಾತನಾಡಿ, “ಕರ್ನಾಟಕದ ಪ್ರಸಿದ್ಧ ರಂಗಭೂಮಿಗಳಾದ ನೀನಾಸಂ, ರಂಗಾಯಣಗಳಂತೆ ಕನ್ನಡ ವಿಶ್ವವಿದ್ಯಾಲಯ ಕೂಡಾ ಪಾರ್ಟಿಯಾಗಬೇಕು ಎಂಬುದು ನನ್ನ ಆಸೆ” ಎಂದರು.
ಶಿಬಿರದ ಇನ್ನೋರ್ವ ನಿರ್ದೇಶಕ ಬಾಗಲಕೋಟೆ ರಂಗಕರ್ಮಿ ಶ್ರೀಹರಿ ಧೂಪದ ಮಾತನಾಡಿ, “ಡಾ ಚಂದ್ರಶೇಖರ್ ಕಂಬಾರರ ಕನಸು ಕೇವಲ ಸಂಶೋಧನೆ, ವಿಮರ್ಶೆಯಷ್ಟೇ ಅಲ್ಲದೆ ಸಾಂಸ್ಕೃತಿಕ ಕಲೆಗಳನ್ನು ಬೆಳೆಸುವುದೂ ಆಗಿದೆ” ಎಂದು ಹೇಳಿದ ಅವರು, ಈ ಹಿಂದೆ ವಿಶ್ವವಿದ್ಯಾಲಯದಲ್ಲಿ ʼಹೊನ್ನ ಶೂಲಕ್ಕೆʼ ಎಂಬ ನಾಟಕವನ್ನು ಪ್ರದರ್ಶನ ನೀಡಿದ್ದನ್ನು ನೆನೆದರು.
ಈ ಸುದ್ದಿ ಓದಿದ್ದೀರಾ? ಬೀದರ್ | ದಲಿತ ಯುವತಿಯ ಅತ್ಯಾಚಾರ, ಕೊಲೆ : ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ
ನಾಟಕ ವಿಭಾಗ, ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದ್ದು, “ಕನ್ನಡ ವಿಶ್ವವಿದ್ಯಾಲಯ ಎಲ್ಲ ಲಲಿತ ಕಲೆಗಳ ಕೇಂದ್ರವಾಗಬೇಕು ಎಂಬುದು ಡಾ. ಚಂದ್ರಶೇಖರ ಕಂಬಾರರ ಕನಸಾಗಿದೆ. ಆ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆ ಪ್ರತಿಭೆಗಳನ್ನು ಗುರುತಿಸಿ ಮುನ್ನಡೆಸುವವರು ಬೇಕು. ಆ ಕಾರ್ಯವನ್ನು ಶಿಬಿರದಲ್ಲಿ ಮಾಡಲಾಗುವುದು” ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.