ಹಾಲಿನ ದರ ಹೆಚ್ಚಳ, ಪ್ರೋತ್ಸಾಹಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೆ.10ರಂದು ಬೆಂಗಳೂರಿನ ಕೆಎಂಎಫ್ ಕಚೇರಿ ಮುಂಭಾಗ ರೈತ ಸಂಘದ ವತಿಯಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಎನ್ ಗೋಪಾಲ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿರುವ ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ 1ಲೀ. ನೀರಿನ ಬಾಟಲನ್ನು 20 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ರೈತರು ಕಷ್ಟಪಟ್ಟು ಉತ್ಪಾದಿಸುವ ಹಾಲಿಗೆ 31 ರೂ. ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಇತ್ತೀಚಿಗೆ 33 ರೂಗಳಿದ್ದ 1ಲೀ. ಹಾಲಿನ ಧರವನ್ನು ರಾಜ್ಯ ಸರ್ಕಾರ 2 ರೂ.ಗಳನ್ನು ಕಡಿತಗೊಳಿಸಿ, ಗ್ರಾಹಕರಿಗೆ 3 ರೂ.ಗಳನ್ನು ಹೆಚ್ಚಿಸಿದೆ. ಪಶು ಆಹಾರದ ಬೆಲೆಗಳನ್ನೂ ಹೆಚ್ಚಿಸಿ ರೈತರನ್ನು ಹೈನುಗಾರಿಕೆಯಿಂದ ಒಕ್ಕಲೆಬ್ಬಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿರುವ 16 ಹಾಲು ಒಕ್ಕೂಟಗಳಲ್ಲಿ 15 ಸಾವಿರ ಡೇರಿಗಳು ಕಾರ್ಯನಿರ್ವಸುತ್ತಿದ್ದು, ನಿತ್ಯ 80 ಲಕ್ಷ ಲೀ. ಹಾಲು ಉತ್ಪಾದನೆ ಆಗುತ್ತಿದೆ. ಬರೊಬ್ಬರಿ 25 ಲಕ್ಷ ಕುಟುಂಬಗಳು ಹೈನುಗಾರಿಕೆಯನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿವೆ. ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಲೀಟರ್ ಹಾಲು ಉತ್ಪಾದಿಸಲು ಕನಿಷ್ಟ 60ರೂ ವೆಚ್ಚವಾಗುತ್ತಿದೆ. ಇದರ ಜೊತೆಗೆ ರೋಗಗಳಿಂದ ರಾಸುಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಇಂತಹ ಸ್ಥಿತಿಯಲ್ಲಿಯೂ ಸರ್ಕಾರ ಅವೈಜ್ಞಾನಿಕವಾಗಿ 31ರೂ.ಗಳನ್ನು ನಿಗದಿಪಡಿಸಿರುವುದರಿಂದ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ರೈತರು ಸರಬರಾಜು ಮಾಡುವ ಲೀಟರ್ ಹಾಲಿಗೆ ಕನಿಷ್ಟ 50 ರೂ ನಿಗದಿಪಡಿಸುವುದು, ಪಶು ಆಹಾರ ಬೆಲೆ ಕಡಿಮೆಗೊಳಿಸಿ ಹೆಚ್ಚಿನ ಪ್ರೋತ್ಸಾಹ ನೀಡುವುದು, ಸ್ಥಳೀಯವಾಗಿ ಹಾಲು ಮಾರಾಟವನ್ನು ನಿಗದಿಪಡಿಸಿ ವಿಧಿಸಿರುವ ಆದೇಶ ರದ್ದುಪಡಿಸುವುದು, ಪ್ರೋತ್ಸಾಹಧನವನ್ನು 5 ರೂಗಳಿಂದ 10 ರೂಗಳಿಗೆ ಹೆಚ್ಚಿಸುವುದು, ಒಕ್ಕೂಟ-ಡೇರಿ ನೇಮಕಾತಿಯಲ್ಲಿ ಸ್ಥಳೀಯ ಹಾಲು ಉತ್ಪಾದಕರ ಮಕ್ಕಳಿಗೆ ಆದ್ಯತೆ ನೀಡುವುದು, ಬಾಕಿಯಿರುವ 620 ಕೋಟಿ ರೂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚಿನ ರೈತರು ಭಾಗಿಯಾಗಲಿದ್ದು, ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ರಾಜ್ಯ ಸರ್ಕಾರವು ಹಾಲು ಉತ್ಪಾದಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷಿಸಿದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬುದ್ದಿ ಕಲಿಸಿದಂತೆ ಮುಂಬರುವ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೂ ತಕ್ಕಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೈಕ್ರೋ ಫೈನಾನ್ಸ್; ಜನಪರ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರ ನಡೆ ಸರ್ವಥಾ ಸರಿಯಲ್ಲ
ಸುದ್ದಿಗೋಷ್ಠಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ, ಗೊಂದಹಳ್ಳಿ ವೆಂಕಟೇಶಪ್ಪ, ಕುಪ್ಪಹಳ್ಳಿ ಶ್ರೀನಿವಾಸ್, ತಾಂಡ್ರಮರದಹಳ್ಳಿ ಮಹೇಶ್, ಜಾತವಾರ ಜೆ.ಎನ್.ಮುನಿರಾಜು, ಕೊಳವನಹಳ್ಳಿ ಕೆ.ಆರ್.ಅಶ್ವತ್ಥಪ್ಪ, ಜಾತವಾರ ಹೊಸಹಳ್ಳಿ ಜೆ.ವಿ.ನಾಗರಾಜ್ ಇದ್ದರು.