ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ , ನವನಗರ ಕ್ಯಾನ್ಸರ್ ಥೆರೆಪಿ & ರಿಸರ್ಚ್ ಇನ್ಸ್ಟಿಟ್ಯೂಟ್, ಹಾಗೂ ಧಾರವಾಡದ ಅಸೋಶಿಯೇಶನ್ ಆಪ್ ಸರ್ಜನ್ಸ್ ಆಪ್ ಇಂಡಿಯಾ ಇವರ ಸಹಯೋಗದಲ್ಲಿ ಫೆ. 7ರಂದು ಬೆಳಿಗ್ಗೆ 10 ಗಂಟೆಗೆ ಗೋಕುಲ ರಸ್ತೆಯ ನಾನಕಿ ಕನ್ವೆನ್ಷನ್ ಹಾಲ್’ನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿಗಳಿಗೆ ಕ್ಯಾನ್ಸರ್ ಖಾಯಿಲೆಯ ತಿಳುವಳಿಕೆ ಹಾಗೂ ಬೃಹತ್ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ವೇಳೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಭಾ.ಆ.ಸೇ ಮಾತನಾಡಿ, ಮಹಿಳಾ ದಿನಾಚರಣೆಯನ್ನು ಒಂದು ದಿನ ಆಚರಿಸಿ ಸಂಭ್ರಮಿಸುವದಕ್ಕಿಂತ, ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಂಸ್ಥೆಯ ಎಲ್ಲ ಮಹಿಳಾ ಸಿಬ್ಬಂದಿಗಳಿಗೆ ಕ್ಯಾನ್ಸರ್ ಖಾಯಿಲೆ ಬಗ್ಗೆ ತಿಳುವಳಿಕೆ ಹಾಗೂ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಈ ತಪಾಸಣೆಗೆ ಒಳಾಗಬೇಕು. ಮಹಿಳಾ ಸಿಬ್ಬಂದಿಗಳು ತಮ್ಮ ಕರ್ತವ್ಯದ ಜೊತೆಗೆ ಆರೋಗ್ಯದ ಕಡೆಗೂ ಗಮನ ಕೊಡಬೇಕು. ನೀವು ಆರೋಗ್ಯದಿಂದ ಇದ್ದಾಗ ಮಾತ್ರ ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ಹಾಗೂ ಆರೋಗ್ಯಪೂರ್ಣವಾದ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಸ್.ಎಫ್.ಕಮ್ಮಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬಹಳಷ್ಟು ಮಂದಿಗೆ ಕ್ಯಾನ್ಸರ್ ಎಂದರೆ ಭಯವಿದೆ. ಕ್ಯಾನ್ಸರ್ ಇತರ ಸಾಮಾನ್ಯ ಕಾಯಿಲೆಗಳಂತೆಯೆ ಒಂದು. ಆರಂಭಿಕ ಹಂತದಲ್ಲಿಯೇ ತಪಾಸಣೆಗೆ ಒಳಗಾದರೆ ಗುಣಪಡಿಸಬಹುದು. ಹೀಗಾಗಿ ಈ ಶಿಬಿರದಲ್ಲಿ ಎಲ್ಲರೂ ತಪಾಸಣೆ ಮಾಡಿಸಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ವಾ.ಕ.ರ.ಸಾ.ಸಂಸ್ಥಯು ಇಂತಹ ಒಂದು ಬೃಹತ್ ಶಿಬಿರವನ್ನು ಹಮ್ಮಿಕೊಂಡಿದ್ದು ಅತ್ಯಂತ ಶ್ಲಾಘನೀಯ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ನವನಗರ ಕ್ಯಾನ್ಸರ್ ಥೆರೆಫಿ & ರಿಸರ್ಚ್ ಇನ್ಸ್ಟಿಟ್ಯೂಟ್’ನ ಅಧ್ಯಕ್ಷ ಡಾ.ಬಿ.ಆರ್.ಪಾಟೀಲ ಮಾತನಾಡಿ, ಕ್ಯಾನ್ಸರ್ ಎಂದರೇನು? ಮಹಿಳೆಯರಿಗೆ ಬರಬಹುದಾದ ಕ್ಯಾನ್ಸರ್ ಪ್ರಕಾರಗಳು ಯಾವುವು? ಮಹಿಳೆಯರ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಕುರಿತು ವಿಡಿಯೋ ಪ್ರದರ್ಶನ ಮೂಲಕ ತಿಳಿಸಿದರು. ಮಹಿಳೆಯರು ಸ್ವತಃ ತಪಾಸಣೆಯನ್ನು ಹೇಗೆ ಮಾಡಿಕೊಳ್ಳಬೇಕು ಮತ್ತು ಯಾವ ಸಮಯದಲ್ಲಿ ವೈದ್ಯರ ತಪಾಸಣೆಗೆ ಒಳಗಾಗಬೇಕು ಎಂಬುದರ ಕುರಿತು ವಿವರಿಸಿದರು. ಕ್ಯಾನ್ಸರ್ ಇದ್ದರೆ ಭಯ ಪಡಬೇಡಿ, ಆರಂಭಿಕ ಹಂತದಲ್ಲಿಯೇ ತಪಾಸಣೆಗೆ ಒಳಗಾದಲ್ಲಿ ಆಧುನಿಕ ತಂತ್ರಜ್ಞಾನಗಳ ಮೂಲಕ ಗುಣಪಡಿಸಬಹುದು ಎಂದು ಗರ್ಭಕೋಶದ ಕ್ಯಾನ್ಸರ್ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ವಾಹಕ ಸಿಬ್ಬಂದಿಯೊರ್ವರು ಮಾತನಾಡಿ, ತಮಗೆ ಬಂದಿದ್ದ ಕ್ಯಾನ್ಸರ್ ಕಾಯಿಲೆ ಬಗ್ಗೆ ಸ್ವಂತ ಅನುಭವಗಳನ್ನು ಹಂಚಿಕೊಂಡು ಕ್ಯಾನ್ಸರ್ ಗುಣವಾಗಲು ಆರ್ಥಿಕವಾಗಿ/ನೈತಿಕವಾಗಿ ಸಹಕರಿಸಿದ ಸಂಸ್ಥೆಗೆ, ಸಹೊದ್ಯೋಗಿಗಳಿಗೆ ಧನ್ಯವಾದ ತಿಳಿಸಿದರು. ಎಎಸ್ಐ ಅಧ್ಯಕ್ಷೆ ಡಾ.ಶಿಲ್ಪಾ ಹುಚ್ಚಣ್ಣವರ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಸಿಬ್ಬಂದಿಗಳ ಬಗೆಗೆ ಇರುವ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಇಲಾಖಾ ಮುಖ್ಯಸ್ಥ ವಿವೇಕಾನಂದ ವಿಶ್ವಜ್ಞ, ಪಿ.ವೈ.ನಾಯಕ, ಬಿ.ಬೋರಯ್ಯ, ಜಗದಂಬಾ ಕೋಪರ್ಡೆ, ಜಿ.ಶ್ರೀನಾಥ, ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ್, ಅಧಿಕಾರಿ ರವಿ ಅಂಚಗಾವಿ, ಪಿ.ಆರ್.ಕಿರಣಗಿ, ತಸ್ವಿನಾಭಾನು ಪಟವೇಗಾರ ಹಾಗೂ ಡಾ. ಉಮೇಶ ಹಳ್ಳಿಕೇರಿ, ಎಮ್.ಡಿ.ಪಾಥೋಲಾಜಿಸ್ಟ್, ಹುಬ್ಬಳ್ಳಿ ಕೆನರಾ ಬ್ಯಾಂಕಿನ ಅಧಿಕಾರಿ/ಸಿಬ್ಬಂದಿಗಳು, ಸಂಸ್ಥೆಯ ವೈದ್ಯಾಧಿಕಾರಿ ಡಾ.ರಾಯಜಿ, ಕಾರ್ಮಿಕ ಮುಖಂಡ ಆರ್.ಎಫ್.ಕವಳಿಕಾಯಿ ಹಾಗೂ ಸಂಸ್ಥೆಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪಿ.ವೈ.ನಾಯಕ ಸ್ವಾಗತಿಸಿದರು. ಸುನೀಲ ಪತ್ರಿ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ನವೀನಕುಮಾರ ತಿಪ್ಪಾ ವಂದಿಸಿದರು. ಕೆನರಾ ಬ್ಯಾಂಕಿನವರು ಎಲ್ಲರಿಗೂ ಸಿಹಿ ಹಂಚಿದರು. ಶಿಬಿರದಲ್ಲಿ ತಪಾಸಣೆಗೆ ಒಳಗಾದ ಸಿಬ್ಬಂದಿಗಳಿಗೆ ಹುಬ್ಬಳ್ಳಿ ರೋಟರಿ ಕ್ಲಬ್ ಎಲೈಟ್’ರವರು ಜ್ಯೂಸ್ ವಿತರಿಸಿದರು.