ಪದವಿಯ ಗುಣಮಟ್ಟ ಕೆಳಮುಖವಾಗುತ್ತಾ ಹೋಗುತ್ತಿದೆ ಉನ್ನತ ಶಿಕ್ಷಣದಲ್ಲಿ ಸಂಶೋದನೆಯಲ್ಲಿ ರಾಜಕಾರಣಿಗಳು ಮಾತ್ರವಲ್ಲ, ಜಾತಿ ಮನಸ್ಥಿತಿಯವರು, ಸಂಶೋಧಕರಿಗೇ ಹೆಜ್ಜೆ ಹೆಜ್ಜೆಗೂ ದೌರ್ಜನ್ಯ, ಹಿಂಸೆಯನ್ನು ನೀಡುತ್ತಿದ್ದಾರೆ ಅದನ್ನೆಲ್ಲ ಹಿಮ್ಮೆಟ್ಟಿ ಪಿಎಚ್ ಡಿ ಪಡೆಯುವುದು ಬಹಳ ಕಷ್ಟಕರ ಹಿಂದುಳಿದ ಸಮುದಾಯ ದಲಿತ ಸಮುದಾಯದ ಒಬ್ಬ ವ್ಯಕ್ತಿ ಪಿಹೆಚ್ ಡಿ ಪಡೆದರೆ ನೊಬಲ್ ಪ್ರಶಸ್ತಿಗೆ ಸಮ ಎಂದು ಖ್ಯಾತ ಚಿಂತಕ ಪ್ರೊ ಪಣಿರಾಜ್ ಹೇಳಿದರು.

ಅವರು ಬ್ರಹ್ಮಾವರದ ಅಂಬೇಡ್ಕರ್ ಯುವಕ ಮಂಡಲ ಮತ್ತು ಅಂಕದಮನೆ ಜಾನಪದ ತಂಡದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡ ಡಾ ಶಶಿರಜ್ ರವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
2023ನೇ ಇಸವಿಯ ಸಮೀಕ್ಷೆ ಪ್ರಕಾರ ಶೇ 100 ರಲ್ಲಿ ಶೇ 22ರಷ್ಟು ಮಂದಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಇದರಲ್ಲಿ ಶೇ 19 ರಷ್ಟು ಮೇಲ್ವರ್ಗಕ್ಕೆ ಸೇರಿದ ಸಮುದಾಯವರು ಇದ್ದರೆ ಶೇ 3 ರಷ್ಟು ಮಾತ್ರ ಹಿಂದುಳಿದ ದಲಿತ ವರ್ಗದ ಜನರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಅದರಲ್ಲೂ ಪಿಎಚ್ ಡಿ ಮಾಡುವುದು 0.05% ಇನ್ನೂರು ಜನರಲ್ಲಿ ಒಬ್ಬರು ಮಾತ್ರ ಎಂದು ಬೇಸರ ವ್ಯಕ್ತಪಡಿಸಿದರು.
ಇಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್ ಡಿ ಮಾಡಿ ಹೊರ ಬರುವುದೆ ಕಷ್ಟಕರವಾಗಿದೆ, ಭಾರತದ ಕಳೆದ ಅಂಕಿಅಂಶಗಳನ್ನು ತೆಗೆದು ನೋಡಿದರೆ ಪಿಎಚ್ ಡಿ ಪದವಿ ಪಡೆಯಲು ಹೊರಟ ಎಂಟು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗದ ಜನರಿಗೆ ಸ್ಥಾನಮಾನ ಸಿಗುವುದು ಬೇಡ ಎಂಬುದು ಮೇಲ್ವರ್ಗದವರ ತೀರ್ಮಾನ, ವಿದ್ಯೆಯನ್ನು ಕಲಿತು ಉನ್ನತ ಸ್ಥಾನಕ್ಕೆ ಹೋಗದಂತೆ ತಡೆಯಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ, ಅದನ್ನು ಮೆಟ್ಟುನಿಂತು ಛಲಬಿಡದೆ ಮುಂದೆ ಸಾಗಬೇಕು ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್ರಾಜ್ ಬಿರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಕುವೆಂಪು ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ಶಶಿರಾಜ್ ಯು. ಇವರು ಪಿಹೆಚ್.ಡಿ. ಪದವಿಯನ್ನು ಪಡೆದುಕೊಂಡಿರುವುದು ಬಹಳಷ್ಟು ಸಂತಸ ತಂದಿದೆ ಹಾಗಾಗಿ ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಡಾ ಶಶಿರಾಜ್ ರವರು “ಇಂಪ್ಯಾಕ್ಟ್ ಆಫ್ ಮಾರ್ಕೆಟ್ ಸೆಗ್ಡೆಂಟೇಷನ್, ಟಾರ್ಗೆಟಿಂಗ್ ಆಂಡ್ ಪೊಸಿಷನಿಂಗ್ ಆನ್ ಮೆಡಿಕಲ್ ಟೂರಿಸಂ ಎ ಸ್ಟಡಿ ಇನ್ ಕರ್ನಾಟಕ” ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು. ಡಾ. ಬಿನೋಯ್ ಟಿ. ಎ., ಸಹ ಪ್ರಾದ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡು, ಕೇರಳ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ, ಪ್ರವಾಸೊದ್ಯಮ ಆಡಳಿತ ವಿಭಾಗದ ಮುಖ್ಯಸ್ಥರಾಗಿ ಹಾಗೂ ಕಾಲೇಜಿನ ಎನ್.ಸಿ.ಸಿ. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಶಿರಾಜ್ ರವರನ್ನು ಪರಿಚಯಿಸಿದರು.

ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ್ ಗಿಳಿಯಾರ್ ಮಾತನಾಡಿ ಭಾರತದಲ್ಲಿ ಸಂವಿಧಾನ ಅಂಗೀಕಾರವಾದ ನಂತರ ನಮಗೆ ವಿದ್ಯೆಯನ್ನು ಪಡೆಯುವ ಹಕ್ಕು ಸಿಕ್ಕಿತು, ನಮ್ಮವರೇ ಉನ್ನತ ಪಟ್ಟದ ಪದವಿಯನ್ನು ಪಡೆಯುವಾಗ ಆಗುವ ಸಂತೋಷ ಅಷ್ಟಿಷ್ಟಲ್ಲ, ನಮ್ಮ ಬಿರ್ತಿಯ ಶಶಿರಾಜ್ ಗೆ ಪಿ ಎಚ್ ಡಿ ಪದವಿ ಸಿಕ್ಕಿದರೂ ನಾವೇ ಆ ಪದವಿಯನ್ನು ಪಡೆದ ಅನುಭವವಾಗುತ್ತಿದೆ. ಡಾ ಶಶಿರಾಜ್ ಬರವಣಿಗೆ ಮುಂದಿನ ಎಲ್ಲಾ ಕಾಲದಲ್ಲೂ ಜನ ಮಾಸದಲ್ಲಿ ಇರುತ್ತದೆ ಅವರ ಸಂಶೋಧನೆ ಜನೋಪಯೋಗಿ ಆಗಬೇಕು ದೇಶದ ಅಭಿವೃದ್ಧಿಯಲ್ಲಿ ಅವರ ಸಂಶೋಧನೆ ಬಹಳ ಪ್ರಾಮುಖ್ಯತೆ ಪಡೆಯಲಿದೆ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಬಿರ್ತಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಎಸ್. ನಾರಾಯಣ್, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್, ದಸಂಸ (ಅಂಬೇಡ್ಕವಾದ) ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ಟರ್ ಮಾತನಾಡಿದರು. ನಾಗವೇಣಿ ಪಂಡರಿನಾಥ್, ದೇವಾನಂದ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಗಣೇಶ್ ಬಿರ್ತಿ ಕಾರ್ಯಕ್ರಮ ನಿರೂಪಿಸಿದರು.

