ಕಥೊಲಿಕ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷರಾದ ಅತೀ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ 75 ವರ್ಷಗಳ ಹುಟ್ಟುಹಬ್ಬ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ತೆರೆದ ಮೈದಾನದಲ್ಲಿ ಅದ್ದೂರಿಯಾಗಿ ಜರುಗಿತು.
ಆರಂಭದಲ್ಲಿ ಅತೀ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಎಲ್ಲಾ ಧರ್ಮಾಧ್ಯಕ್ಷರು, ಧರ್ಮಗುರುಗಳು ಹಾಗೂ ಭಕ್ತಾದಿಗಳೊಂದಿಗೆ ಕೃತಜ್ಞಾತಾ ಬಲಿಪೂಜೆ ನೆರವೇರಿಸಿದರು.
ಶಿವಮೊಗ್ಗ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಪ್ರಾನ್ಸಿಸ್ ಸೆರಾವೊ ತಮ್ಮ ಪ್ರವಚನದಲ್ಲಿ ಮಾತನಾಡಿ ಬಿಷಪ್ ಜೆರಾಲ್ಡ್ ಅವರು ತಮ್ಮ ಸೇವೆಯಲ್ಲಿ ಯೇಸುಕ್ರಿಸ್ತರಂತೆ ಒಳ್ಳೆಯ ಕುರುಬರಾಗಿ ತನ್ನ ಅಧೀನದಲ್ಲಿರುವ ಪ್ರಜೆಗಳಿಗೆ ನಾಯಕತ್ವ ನೀಡುವುದರೊಂದಿಗೆ ತನ್ನನ್ನೇ ಅರ್ಪಿಸಿಕೊಂಡಿದ್ದಾರೆ. ಯೇಸು ಸ್ವಾಮಿ ತೋರಿದ ದಾರಿಯಲ್ಲಿ ತಾನು ಸಾಗುವುದರೊಂದಿಗೆ ತನ್ನ ಧರ್ಮಪ್ರಾಂತ್ಯವನ್ನು ಮುನ್ನಡೆಸಿದ್ದಾರೆ. 25 ವರ್ಷಗಳ ಸುಧೀರ್ಘ ಧರ್ಮಾಧ್ಯಕ್ಷರಾಗಿ ಮಾತ್ರ ಉಳಿಯದೆ ಒರ್ವ ಒಳ್ಳೆಯ ಗುರುವಾಗಿ ತನ್ನ ಸೇವೆಯನ್ನು ಧರ್ಮಪ್ರಾಂತ್ಯದಲ್ಲಿ ನೀಡುವುದರೊಂದಿಗೆ ಸರ್ವರಿಗೂ ಮಾದರಿಯಾಗಿದ್ದಾರೆ ಎಂದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಭಾರತ ಮತ್ತು ನೇಪಾಳದ ರಾಯಭಾರಿ ಅತೀ ವಂ|ಡಾ|ಲಿಯೊಪೊಲ್ಡೊ ಗಿರೆಲ್ಲಿ ತಮ್ಮ ಆಶೀರ್ವಚನ ಸಂದೇಶದಲ್ಲಿ ಬಿಷಪ್ ಜೆರಾಲ್ಡ್ ಅವರ ಜೀವನ ಇಡೀ ಸಮಾಜಕ್ಕೆ ಒಂದು ಮಾದರಿಯಾಗಿದ್ದು ಅವರ ಆಧ್ಯಾತ್ಮಿಕ ಜೀವನದ ಮೂಲಕ ತನ್ನ ಪ್ರಜೆಗಳಿಗೆ ಯೇಸು ಕ್ರಿಸ್ತರ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದ್ದಾರೆ. ಅವರ ಸೇವಾ ಮನೋಭಾವದ ಕಾರ್ಯವೈಖರಿಯಿಂದಾಗಿ ಧರ್ಮಪ್ರಾಂತ್ಯದಲ್ಲಿ ಪಾಲನಾ ಯೋಜನೆಯನ್ನು ಜಾರಿಗೆಗೊಳಿಸಿರುವುದು ದೇಶದ ಇತರ ಧರ್ಮಪ್ರಾಂತ್ಯಗಳಿಗೂ ಮಾದರಿಯಾಗಿದೆ. ಇವರ ಸೇವೆ ಇನ್ನಷ್ಟು ಮುಂದುವರೆಯಲಿ ಎಂದರು.
ಕನ್ನಡದಲ್ಲಿ ನಮಸ್ತೆ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಆರಂಭಿಸಿದ ಗಿರೆಲ್ಲಿ ಅವರು ಉಡುಪಿ ಜಿಲ್ಲೆ ಮೀನುಗಾರಿಕೆಗೆ ಹೆಸರುವಾಸಿಯಾಗಿದ್ದು ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದಾಗ ಇಲ್ಲಿನ ವಾತಾವರಣ ನನಗೆ ಅತೀವ ಸಂತಸ ತಂದಿತು. ಉಡುಪಿಯ ಧರ್ಮಪ್ರಾಂತ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಸೇವೆಯ ಮೂಲಕ ಎಲ್ಲಾ ಸಮುದಾಯದ ಜನರನ್ನು ಆಕರ್ಷಿಸುವ ಕೆಲಸ ಮಾಡಿರುವುದು ಅಭಿನಂದಾನರ್ಹ ಸಂಗತಿಯಾಗಿದೆ. ಜುಬಿಲಿ ವರ್ಷದಲ್ಲಿ ಕ್ರೈಸ್ತ ಬಾಂಧವರಿದ್ದು ಪ್ರತಿಯೊಬ್ಬರು ಭರವಸೆಯ ಯಾತ್ರಿಕರಾಗಿ ಯೇಸುವಿನ ನೈಜ ಶಿಷ್ಯರಾಗಿ ಬದುಕೋಣ ಎನ್ನುವರೊಂದಿಗೆ ಕೊಂಕಣಿಯಲ್ಲಿ ದೇವ್ ಬೊರೆಂ ಕರುಂ ಎನ್ನುವ ಮೂಲಕ ಕೊನೆಗೊಳಿಸಿದರು.
ತಮ್ಮ ಅಭಿನಂದನಾ ಸಂದೇಶ ನೀಡಿದ ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್ ಬಿಷಪ್ ಅತಿ ವಂ|ಡಾ| ಪೀಟರ್ ಮಚಾದೊ ಮಾತನಾಡಿ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಿಷಪ್ ಜೆರಾಲ್ಡ್ ಅವರು ಒರ್ವ ಜನ ಸ್ನೇಹಿ ಧರ್ಮಗುರುವಾಗಿದ್ದು ಜನರ ಅಗತ್ಯತೆಗಳನ್ನು ತಿಳಿದು ಅದನ್ನು ಜಾರಿಗೆ ಮಾಡುವ ಉನ್ನತ ಗುಣವನ್ನು ಹೊಂದಿದ್ದಾರೆ. ಜೆರಾಲ್ಡ್ ಅವರು ಸಂಘಟನಾ ಚತುರರಾಗಿದ್ದು ಯಾವುದೇ ಕಾರ್ಯಕ್ರಮವನ್ನು ಮಾಡುವುದಿದ್ದರೆ ಅದನ್ನು ಶಿಸ್ತುಬದ್ಧವಾಗಿ ಮಾಡುವ ಉನ್ನತ ಕಲೆಯುನ್ನು ಹೊಂದಿರುವುದು ಅವರ ವಿಶೇಷಗುಣವಾಗಿದೆ. ಅವರ ಸಂಘಟನಾತ್ಮಕ ಹಾಗೂ ಶಿಸ್ತು ಬದ್ದ ಕಾರ್ಯವೈಖರಿಯನ್ನು ಇತರ ಧರ್ಮಪ್ರಾಂತ್ಯಗಳು ಕೂಡ ಕೊಂಡಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಅತೀ ವಂ|ಡಾ|ಲಿಯೊಪೊಲ್ಡೊ ಗಿರೆಲ್ಲಿ ಅವರನ್ನು ಧರ್ಮಾಧ್ಯಕ್ಷರಾದ ಅತಿ ವಂ|ಜೆರಾಲ್ಡ್ ಐಸಾಕ್ ಲೋಬೊ ಸನ್ಮಾನಿಸಿದರು.
ಧರ್ಮಪ್ರಾಂತ್ಯದ ಎಲ್ಲಾ ಆಯೋಗಗಳ ವತಿಯಿಂದ ಧರ್ಮಾಧ್ಯಕ್ಷ ಅತಿ ವಂ|ಡಾ| ಜೆರಾಲ್ಡ್ ಲೋಬೊ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಜೀವನದಲ್ಲಿ ಸಹಕಾರ ನೀಡಿದ ಸರ್ವರಿಗೂ ಧನ್ಯವಾದವಿತ್ತರು. ತನಗೆ ನೀಡಿದ ಜೀವನದಲ್ಲಿ ದೇವರು ಮಾಡಿದ ಎಲ್ಲಾ ಉತ್ತಮ ಕಾರ್ಯಗಳಿಗೆ ಕೃತಜ್ಞತಾಪೂರ್ವಕವಾಗಿ ಸ್ಮರಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ನಿವೃತ್ತ ಮಹಾ ಧರ್ಮಾಧ್ಯಕ್ಷ, ಪ್ರಸ್ತುತ ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ವಂ|ಡಾ|ಬರ್ನಾಡ್ ಮೊರಾಸ್, ಆಗ್ರಾ ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ವಂ|ಆಲ್ಬರ್ಟ್ ಡಿಸೋಜಾ, ಭದ್ರಾವತಿ ಬಿಷಪ್ ಅತಿ ವಂ|ಜೊಸೇಫ್ ಅರುಮಚಾಡತ್, ಬೆಳಗಾವಿ ಧರ್ಮಾಧ್ಯಕ್ಷ ಅತಿ ವಂ|ಡೆರಿಕ್ ಫೆರ್ನಾಂಡಿಸ್, ಬಳ್ಳಾರಿ ಬಿಷಪ್ ಅತಿ ವಂ|ಹೆನ್ರಿ ಡಿಸೋಜಾ, ಬೆಳ್ತಂಗಡಿ ಬಿಷಪ್ ಅತಿ ವಂ|ಲೊರೆನ್ಸ್ ಮುಕ್ಕುಝಿ, ಚಿಕ್ಕಮಗಳೂರು ಬಿಷಪ್ ಅತಿ ವಂ|ತೋಮಸಪ್ಪ ಅಂತೋನಿ ಸ್ವಾಮಿ, ಗುಲ್ಬರ್ಗಾ ಬಿಷಪ್ ಅತಿ ವಂ|ರೊಬರ್ಟ್ ಎಮ್ ಮಿರಾಂದಾ, ಕಾರವಾರ ಬಿಷಪ್ ಅತಿ ವಂ|ದುಮಿಂಗ್ ಡಯಾಸ್, ಮಂಗಳೂರಿನ ನಿವೃತ್ತ ಬಿಷಪ್ ಅತಿ ವಂ|ಅಲೋಶಿಯಸ್ ಪಾವ್ಲ್ ಡಿಸೋಜಾ, ಪುತ್ತೂರು ಬಿಷಪ್ ವಂ|ಗೀವರ್ಗಿಸ್ ಮಾರ್ ಮಕಾರಿಯೋಸ್ ಕಲಾಯಿಲ್, ಶಿವಮೊಗ್ಗ ಬಿಷಪ್ ವಂ|ಡಾ|ಪ್ರಾನ್ಸಿಸ್ ಸೆರಾವೊ, ಲಕ್ನೊ ಬಿಷಪ್ ವಂ|ಜೆರಾಲ್ಡ್ ಜೋನ್ ಮಥಾಯಸ್, ಬರಾಯಿಪುರ್ ನಿವೃತ್ತ ಬಿಷಪ್ ವಂ|ಸಾಲ್ವದೊರ್ ಲೋಬೊ, ಅಲಹಾಬಾದ್ ಬಿಷಪ್ ವಂ|ಲೂಯಿಸ್ ಮಸ್ಕರೇನ್ಹಸ್, ಬೆಂಗಳೂರಿನ ಸಹಾಯಕ ಧರ್ಮಾಧ್ಯಕ್ಷ ಅತಿ ವಂ|ಜೊಸೇಫ್ ಸುಶಿನಾಥನ್, ಮೈಸೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಆಲ್ಫ್ರೇಡ್ ಮೆಂಡೊನ್ಸಾ, ಮಂಗಳೂರಿನ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಮ್ಯಾಕ್ಷಿಮ್ ನೊರೊನ್ಹಾ, ಕುಲಪತಿಗಳಾದ ವಂ|ಡಾ|ರೋಶನ್ ಡಿಸೋಜಾ, ವಂ|ಜೊರ್ಜ್ ವಿಕ್ಟರ್ ಡಿಸೋಜಾ, ಉಡುಪಿ ಧರ್ಮ ಪ್ರಾಂತ್ಯದ ಸಲಹೆಗಾರರಾದ ವಂ|ಚಾರ್ಲ್ಸ್ ಮಿನೇಜಸ್, ವಂ|ಆಲ್ಬನ್ ಡಿಸೋಜಾ, ವಂ|ರೆಜಿನಾಲ್ಡ್ ಪಿಂಟೊ, ವಂ|ಜೋರ್ಜ್ ಡಿಸೋಜಾ, ವಂ|ಡಾ|ಲೆಸ್ಲಿ ಡಿಸೋಜಾ, ವಂ|ಅನಿಲ್ ಡಿಸೋಜಾ, ವಂ|ಪಾವ್ಲ್ ರೇಗೊ, ವಂ|ಡೆನಿಸ್ ಡೆಸಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿ ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ ವಂದಿಸಿದರು. ಧರ್ಮಪ್ರಾಂತ್ಯದ ಹಣಕಾಸು ಸಮಿತಿ ಸದಸ್ಯ ಪ್ರಿತೇಶ್ ಡೆಸಾ ಹಾಗೂ ಜೆನಿಶಾಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು.
