ಮೈಸೂರು ನಗರದ ಉದಯಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ʼ2047ರ ಹೊತ್ತಿಗೆ ಭಾರತವನ್ನು ಇಸ್ಲಾಂ ದೇಶವನ್ನಾಗಿ ಮಾಡಲು ಮುಂದಾಗಿದ್ದು, ಭಯಾನಯಕ ವಾತಾವರಣವನ್ನು ಸೃಷ್ಟಿ ಮಾಡಲು ಕಲ್ಲು ತೂರಾಟ ನಡೆಸಿದ್ದಾರೆʼ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೈಸೂರಿನ ಉದಯಗಿರಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣ ಖಂಡನೀಯ. ಈ ಘಟನೆಗೆ ಮುಸ್ಲಿಂರಿಗಿಂತ ಕಾಂಗ್ರೆಸ್ನವರೇ ಹೆಚ್ವು ಹೊಣೆಯಾಗುತ್ತಾರೆ. ವೋಟ್ ಬ್ಯಾಂಕ್ಗಾಗಿ ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ ಈ ರೀತಿ ಮುಸ್ಲಿಂ ಗೂಂಡಾಗಳಿಗೆ ಕುಮ್ಮಕ್ಕು ನೀಡುತ್ತಿದೆ. ಕೆಜೆ ಹಳ್ಳಿ ಡಿಜೆ ಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಈ ರೀತಿಯ ಹಲವು ಘಟನೆಗಳಲ್ಲಿ ಪೊಲೀಸರೇ ಓಡಿ ಹೋಗುವಂತಾಗಿದೆ. ಇದಕ್ಕೆ ಕಾಂಗ್ರೆಸ್ ನೇರ ಕಾರಣ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
“ಉದಯಗಿರಿಯಲ್ಲಿ ಮುಸ್ಲಿಮರೇ ಜಾಸ್ತಿ ಇರುವ ಪ್ರದೇಶವಾಗಿರುವುದರಿಂದ ಈ ಘಟನೆ ನಡೆಯಲು ಕಾರಣವಾಗಿದೆ. ತಪ್ಪು ಮಾಡಿದ ವ್ಯಕ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ದೇಶದಲ್ಲಿ ಕಾನೂನು, ಸಂವಿಧಾನವಿದೆ. ತಪ್ಪಿತಸ್ಥರಿಗೆ ಕಾನೂನು ಶಿಕ್ಷೆ ಕೊಡುತ್ತದೆ. ತೊಂದರೆಯಾಗಿದ್ದರೆ ದೂರು ನೀಡಿ, ಧರಣಿ ನಡೆಸಿ, ಅದನ್ನು ಬಿಟ್ಟು ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದು ಎಷ್ಟು ಸರಿ. ದಾಂಧಲೆ, ಗಲಾಟೆ ಮಾಡಲು ಇದು ಪಾಕಿಸ್ತಾನ, ಆಫ್ಘಾನಿಸ್ಥಾನ, ಬಾಂಗ್ಲಾದೇಶ ಅಲ್ಲ” ಎಂದು ಮುಸ್ಲಿಮರ ವಿರುದ್ಧ ಕಿಡಿಕಾರಿದ್ದಾರೆ.
“ನೀವು ಎಷ್ಟು ಬಾರಿ ಹಿಂದೂ ದೇವರುಗಳ ಮೇಲೆ ಅವಹೇಳನಕಾರಿಯಾಗಿ ಮಾತಾಡಿದ್ದೀರಿ. ಹಿಂದೂ ಸಮಾಜ ಕೂಡ ಈ ರೀತಿ ಸಿಡಿದೆದ್ದರೆ ಏನಾಗಬಹುದು ಊಹಿಸಿಕೊಳ್ಳಿ, ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡರೆ ಹಿಂದೂ ಸಮಾಜ ಉತ್ತರ ನೀಡುತ್ತದೆ. ಆರಕ್ಷಕರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆಂದರೆ ಕಾನೂನು ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದನ್ನು ತೋರಿಸುತ್ತಿದೆ. ಹೀಗೇ ಬಿಟ್ಟರೆ ಮತ್ತೆ ಬೇಲ್ ತೆಗೆದುಕೊಂಡು ವಾಪಸ್ ಬಂದು ಇದೇ ಕೆಲಸ ಮಾಡುತ್ತಾರೆ. ಹಾಗಾಗಿ ಪೊಲೀಸರಿಗೆ ಸ್ವಾತಂತ್ರ್ಯ ನೀಡಿದರೆ ಅವರು ಕೆಲಸ ಮಾಡುತ್ತಾರೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಜೆಟ್ ನಲ್ಲಿ ಸ್ಲಂ ನಿವಾಸಿಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಹಣ ಮೀಸಲಿಡುವಂತೆ ಸ್ಲಂ ಜನಾಂದೋಲನ ಕರ್ನಾಟಕದಿಂದ ಒತ್ತಾಯ
“ಮುಸ್ಲಿಮರು ಗಲಾಟೆ ಮಾಡಿದ ಕೂಡಲೇ ಎಚ್ಚರಗೊಳ್ಳುವ ಶ್ರೀರಾಮ ಸೇನೆ ಮುಖ್ಯಸ್ಥರು, ಅಪ್ರಾಪ್ತೆಯರ ಮೇಲೆ ಬಲತ್ಕಾರಗಳು ನಡೆಯುತ್ತಿರುವಾಗ, ದಲಿತರ ಮೇಲೆ ದೌರ್ಜನ್ಯಗಳಾಗುತ್ತಿರುವಾಗ ಎಲ್ಲಿ ಹೋಗಿರುತ್ತಾರೆ. ಇಂತಹ ವಿಷಯಗಳ ಬಗ್ಗೆ ಮುತಾಲಿಕ್ ಏಕೆ ಮಾತನಾಡುವುದಿಲ್ಲ. ಅವರೆಲ್ಲ ಹಿಂದೂಗಳಲ್ಲವೇ? ಅಥವಾ ಈ ದೇಶದ ನಿವಾಸಿಗಳಲ್ಲವೇ” ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
