ದೆಹಲಿ ರೈಲ್ವೇ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಕಾಲ್ತುಳಿತ ಸಂಭವಿಸಿದ್ದು, 18 ಮಂದಿ ದುರ್ಮರಣ ಹೊಂದಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಕಾಲ್ತುಳಿತಕ್ಕೆ ಬಲಿಯಾದವರಲ್ಲಿ ಹಲವರು ಉತ್ತರ ಪ್ರದೇಶದ ಪ್ರಯಾಗ್ರಾಜ್ ನಗರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರೀ ರೈಲ್ವೇ ಅಪಘಾತಗಳು, ಕಾಲ್ತುಳಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೆ, ಸರ್ಕಾರ, ಅಧಿಕಾರಿಗಳು ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳದೇ ಇರುವುದರ ವಿರುದ್ಧ ಭಾರೀ ಆಕ್ರೋಶವೂ ವ್ಯಕ್ತವಾಗುತ್ತಿದೆ.
ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಹೆಚ್ಚು ಟಿಕೆಟ್ ಮಾರಾಟ ಮತ್ತು ಕೊನೆ ಕ್ಷಣದಲ್ಲಿ ರೈಲಿನ ಪ್ಲಾಟ್ಫಾಂ ಬದಲಿಸಿದ್ದೇ ಕಾರಣವೆಂದು ಆರೋಪಿಸಲಾಗಿದೆ. ರೈಲ್ವೇಯಲ್ಲಿ ಹೀಗಾಗಿಯೇ, ಜನಸಂದಣಿಯನ್ನು ನಿಯಂತ್ರಿಸುವಲ್ಲಿ ರೈಲ್ವೇ ಇಲಾಖೆ ವಿಫಲವಾಗಿದೆ ಎಂದು ಆಪಾದನೆ ಕೇಳಿಬರುತ್ತಿದೆ.
ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಪ್ರತಿ ಗಂಟೆಗೆ ಬರೋಬ್ಬರಿ 1,500 ಸಾಮಾನ್ಯ (ಜೆನರಲ್) ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಎಷ್ಟು ಜನರು ಯಾವ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ, ಯಾವ ರೈಲಿನಲ್ಲಿ ಹೋಗುತ್ತಾರೆ, ರೈಲುಗಳಲ್ಲಿ ಜನರು ಪ್ರಯಾಣಿಸಬಹುದಾದ ಸಾಮರ್ಥ್ಯವೆಷ್ಟು ಎಂಬುದನ್ನು ಲೆಕ್ಕಿಸದೆ, ಟಿಕೆಟ್ ವಿತರಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಶನಿವಾರ ಹೆಚ್ಚಿನವರು ಕುಂಭಮೇಳಕ್ಕೆ ತೆರಳಲು ‘ಪ್ರಯಾಗ್ರಾಜ್ ಎಕ್ಸ್ಪ್ರೆಸ್’ ರೈಲಿಗೆ ಟಿಕೆಟ್ ಖರೀದಿಸಿದ್ದರು. ರೈಲಿನಲ್ಲಿ ನಾಲ್ಕೈದು ಸಾಮಾನ್ಯ ಬೋಗಿಗಳಿದ್ದರೂ, ಅವುಗಳ ಸಾಮರ್ಥ್ಯವನ್ನು ಲೆಕ್ಕಿಸದೆ, ಟಿಕೆಟ್ ವಿತರಿಸಲಾಗಿದೆ. ಪ್ರಯಾಗ್ರಾಜ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ, ರೈಲಿನಲ್ಲಿ ಜಾಗ ಹಿಡಿದುಕೊಳ್ಳಲು ಪ್ರಯಾಣಿಕರು ನೂಕುನುಗ್ಗಲಿನಲ್ಲಿ ರೈಲು ಹತ್ತಲು ಮುಂದಾಗಿದ್ದಾರೆ.
ಅಲ್ಲದೆ, ಪ್ರಯಾಗ್ರಾಜ್ ಎಕ್ಸ್ಪ್ರೆಸ್ ರೈಲು ಮೊದಲೇ ನಿಗದಿ ಮಾಡಲಾಗಿದ್ದು, ಪ್ಲಾಟ್ಫಾಮ್ಗೆ ಬಾರದೆ, ರೈಲು ಬರುವ ಪ್ಲಾಟ್ಫಾಮ್ಅನ್ನು ಕೊನೆ ಕ್ಷಣದಲ್ಲಿ ಬದಲಿಸಲಾಗಿದೆ. 15ನೇ ಪ್ಲಾಟ್ಫಾಮ್ಗೆ ರೈಲು ತಲುಪಿದೆ. ಹೀಗಾಗಿ, ಮತ್ತೊಂದ ಪ್ಲಾಟ್ಫಾಮ್ನಲ್ಲಿದ್ದ ಪ್ರಯಾಣಿಕರು ಅವಸರದಲ್ಲಿ 15ನೇ ಪ್ಲಾಟ್ಫಾಮ್ ಕಡೆಗೆ ಧಾವಿಸಿದ್ದಾರೆ. ನೂಕುನುಗ್ಗಲಿನಲ್ಲಿ ಪ್ರಯಾಣಿಕರು ಓಡಿಸಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಕಾಲ್ತುಳಿತ ಉಂಟಾದ ತಕ್ಷಣ ಎಚ್ಚೆತ್ತುಕೊಂಡು, ಅಗತ್ಯ ಕ್ರಮ ಕೈಗೊಳ್ಳಬೇಕಾದ ರೈಲ್ವೇ ಆಡಳಿತ ಮಂಡಳಿ, ರೈಲ್ವೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳು ವಿಫಲರಾಗಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಿ, ನಿರ್ವಹಿಸುವಲ್ಲಿ ರೈಲ್ವೇ ಇಲಾಖೆಯ ವೈಫಲ್ಯ ಎದ್ದು ಕಾಣಿಸಿದೆ. ಕಾಲ್ತುಳಿತ ಆರಂಭವಾಗಿ 1 ಗಂಟೆ ಕಳೆದರೂ, ರೈಲ್ವೇ ಇಲಾಖೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಎನ್ಡಿಆರ್ಎಫ್ ತಂಡಗಳು ಕೂಡ ತ್ವರಿತವಾಗಿ ಸ್ಥಳಕ್ಕೆ ಧಾವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ 10 ಲಕ್ಷ ರೂ. ಪರಿಹಾರ ಘೊಷಿಸಿದೆ. “ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತವಾಗಿದ್ದರಿಂದ ನನಗೆ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಆದರೆ, ದುರಂತಗಳು ಸಂಭವಿಸಿದಾಗ, ಸಂತಾಪ ಸೂಚಿಸುವುದು, ಪರಿಹಾರ ನೀಡುವುದು ಮಾನವೀಯ ನೆಲೆಯಲ್ಲಿ ಸರಿಯಾದ ಕ್ರಮ. ಆದರೆ, ಸಾವುಗಳಿಗೆ ಪರಿಹಾರ ನೀಡುವುದಷ್ಟೇ ಸಮಸ್ಯೆಗಳಿಗೆ, ಅವಗಢಗಳಿಗೆ ಪರಿಹಾರವೇ?
ಇಂತಹ ಭೀಕರ ಘಟನೆಗಳು ನಡೆಯುತ್ತಿರುವುದು ಇತ್ತೀಚಿನ ತಿಂಗಳುಗಳಲ್ಲಿ ಇದೇ ಮೊದಲೇನೂ ಅಲ್ಲ. ಒಂದು ತಿಂಗಳಿನಿಂದ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿಯೂ ಕಾಲ್ತುಳಿತ ಸಂಭವಿಸಿದ್ದು, 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರ. ಈ ಸಾವುಗಳ ಸಂಖ್ಯೆ 500 ದಾಟಿರಬಹುದು ಎಂದು ವಿಪಕ್ಷಗಳು ಅನುಮಾನಿಸಿವೆ. ಆದರೆ, ಸರ್ಕಾರ ಈವರೆಗೆ ಸಾವನ್ನಪ್ಪಿದವರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.
ಈ ವರದಿ ಓದಿದ್ದೀರಾ?: ಚೀನಾಕ್ಕೆ ತಲೆನೋವಾಗಿರುವ ಜನಸಂಖ್ಯೆ- ಭಾರತ ಕಲಿಯಬೇಕಿರುವ ಪಾಠಗಳು!
ಇನ್ನು, ಕಳೆದ ವರ್ಷ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ‘ಧರ್ಮ ಸಂಸತ್’ನಲ್ಲಿಯೂ ಕಾಲ್ತುಳಿತದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಅಲ್ಲದೆ, ಕಾಂಚನಜುಂಗ ಎಕ್ಸ್ಪ್ರೆಸ್ ಅಪಘಾತ, ಮೈಸೂರು–ದರ್ಭಾಂಗ ಎಕ್ಸ್ಪ್ರೆಸ್ ಅಪಘಾತ, ಬಬಲೇಶ್ವರದಲ್ಲಿ ರೈಲು ಅಪಘಾತ ಸೇರಿಂದತೆ ನಿರಂತರವಾಗಿ ರೈಲ್ವೇ ಅಪಘಾತಗಳು ಸಂಭವಿಸುತ್ತಿವೆ. ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಆದರೂ, ರೈಲ್ವೇ ಇಲಾಖೆ ರೈಲು ಅಪಘಾತಗಳನ್ನು ತಡೆಯುವಲ್ಲಿ ವಿಫಲವಾಗಿದೆ.
ಸಾಲದೆಂಬಂತೆ, ಇತ್ತೀಚೆಗೆ, ಕುಂಭಮೇಳ ನಡೆಯುತ್ತಿರುವ ಪ್ರಯಾಗ್ರಾಜ್ಗೆ ತೆರಳುತ್ತಿದ್ದ ರೈಲಿನ ಮೇಲೆ ಝಾನ್ಸಿ ಜಿಲ್ಲೆಯಲ್ಲಿ ಕಲ್ಲುತೂರಾಟವೂ ನಡೆದಿತ್ತು. ಹೆಚ್ಚಿನ ಸಂಖ್ಯೆಯ ಜನರು ಕುಂಭಮೇಳಕ್ಕೆ ರೈಲಿನಲ್ಲಿ ತೆರಳುತ್ತಿರುವ ಕಾರಣದಿಂದಾಗಿಯೇ, ರೈಲಿನಲ್ಲಿ ಜಾಗ ಸಿಗದೆ, ರೈಲಿನ ಬಾಗಿಲುಗಳನ್ನು ತೆರೆಯದ ಕಾರಣಕ್ಕಾಗಿಯೇ ಆ ಘಟನೆಯೂ ನಡೆದಿತ್ತು. ಆದರೂ, ಸರ್ಕಾರ, ರೈಲ್ವೇ ಇಲಾಖೆ ಎಚ್ಚುತ್ತಿಕೊಂಡಿಲ್ಲ. ಕುಂಭಮೇಳಕ್ಕೆ ತೆರಳುವ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಅಥವಾ ಹೆಚ್ಚು ಜನರ ಭಾಗವಹಿಸುವಿಕೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳಲಾಗಿಲ್ಲ.
ಹೀಗಾಗಿ, ನಿರಂತರವಾಗಿ ಒಂದರ ನಂತರ ಮತ್ತೊಂದರಂತೆ ದುರಂತ ಘಟನೆಗಳು ನಡೆಯುತ್ತಿವೆ. ರೈಲ್ವೇ ಇಲಾಖೆ, ಕೇಂದ್ರ ಸರ್ಕಾರಗಳು ಮತ್ತೆ-ಮತ್ತೆ ತಮ್ಮ ವೈಫಲ್ಯವನ್ನು ತೋರಿಸುತ್ತಿವೆ. ಇನ್ನಾದರೂ, ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ರೈಲ್ವೇ ಅಪಘಾತಗಳನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆಗಳನ್ನು ಜಾರಿಗೆ ತರಬೇಕು. ರೈಲ್ವೇ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿರ್ವಹಿಸಲು ಅಗತ್ಯವಿರುವ ಕ್ರಮಗಳನ್ನು ರೂಪಿಸಬೇಕು. ರೈಲ್ವೇ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗಬೇಕು. ಇಲ್ಲವಾದಲ್ಲಿ, ಪ್ರಯಾಣಿಕರು, ಅಮಾಯಕ ಜನರು ಇಂತಹ ದುರಂತಗಳಿಂದ ಸಾವನ್ನಪ್ಪುವುದು ಮುಂದುವರೆಯುತ್ತಲೇ ಇರುತ್ತದೆ.