ಕನ್ನಡ ಭಾಷೆ ಉಳಿಸಿ, ಬೆಳೆಸಲು ಸರ್ಕಾರವು ಎಲ್ಲ ಇಲಾಖೆಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಆದೇಶಿಸಬೇಕು. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳ ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪುಗಳನ್ನು ಕೊಡುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವಂಥ ಸಂಗತಿಯಾಗಿದೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅಶೋಕ್ ಮಣಿ ಹೇಳಿದರು.
ಮುದ್ದೇಬಿಹಾಳದ ಮಲ್ಲಿಕಾ ಸಾಬ್ ನದಾಫ್ ಅಮರಗೋಳ ಮಂಟಪದ ಮಾತೋಶ್ರೀ ಗಂಗಮ್ಮ ಬೀರಪ್ಪ ಪ್ರಧಾನ ವೇದಿಕೆಯಲ್ಲಿ ಶನಿವಾರ ನಡೆದ ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
“ಗಡಿನಾಡು ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳನ್ನು ಹೆಚ್ಚು ಅಭಿವೃದ್ಧಿಗೊಳಿಸಬೇಕು. ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳನ್ನು ಸುಸಜ್ಜಿತಗೊಳಿಸಿ ಉತ್ತಮ ಶಿಕ್ಷಕರನ್ನು ನೇಮಿಸಬೇಕು. ಪ್ರತಿಯೊಂದು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಾಚನಾಲಯ ಸ್ಥಾಪಿಸಿ ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಓದುವ, ಜ್ಞಾನ ಬೆಳೆಸಿಕೊಳ್ಳುವ ಅಭಿವೃದ್ಧಿ ಮೂಡಿಸಲು ಕ್ರಮ ಕೈಗೊಳ್ಳಬೇಕು. ಸಾಹಿತಿಗಳು, ಲೇಖಕರು ಪ್ರಕಟಿಸಿದ ಪುಸ್ತಕಗಳನ್ನು ಶೇ.50ರಷ್ಟು ಕೊಂಡುಕೊಳ್ಳುವಂತೆ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ, ಶಾಲೆ, ಕಾಲೇಜುಗಳಿಗೆ ಸೂಚಿಸಬೇಕು. ಬರೆಯುವವನ ಕೈ ಬರೆದಂತೆ ಬಡ ಬರಹಗಾರರಿಗೆ, ಸಾಹಿತಿಗಳಿಗೆ, ಸಾಹಿತ್ಯದ ಅಧ್ಯಯನಕ್ಕಾಗಿ ಪ್ರೇಕ್ಷಣೀಯ ಸ್ಥಳ ವೀಕ್ಷಿಸಲು ಉಚಿತ ಬಸ್ ಪಾಸ್ ನೀಡಬೇಕು” ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಶಾಸಕ ಸಿ ಎಸ್ ನಾಡಗೌಡ ಮಾತನಾಡಿ, “ಸಮ್ಮೇಳನ ಕನ್ನಡ ಚಿಂತನೆಯ, ಭಾಷೆ, ಸಂಸ್ಕೃತಿ ಶ್ರೀಮಂತಗೊಳಿಸುವ ವೇದಿಕೆಯಾಗಬೇಕು. ಮೂಲಭೂತ ವಿಚಾರಗಳನ್ನು ಮೆಲುಕು ಹಾಕುವಂತಿರಬೇಕು. ಆಧುನಿಕ ತಂತ್ರಜ್ಞಾನ ಬಳಕೆಯಾಗಬೇಕು. ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು. ಒಳ್ಳೆಯದನ್ನು ಪ್ರೋತ್ಸಾಹಿಸಬೇಕು. ಶರಣ ನಾಡಿನ ಬಳಗ ಅತ್ಯಂತ ಶ್ರೀಮಂತ ಬಳಗವಾಗಿದ್ದು, ಇದನ್ನು ರಕ್ಷಿಸುವ ಕೆಲಸವಾಗಬೇಕು. ಇತಿಹಾಸ ಮರೆ ಮಾಚಿದರೆ ಮುಂದಿನ ಪೀಳಿಗೆಗೆ ಸತ್ಯ ತಿಳಿಸಲಾಗುವುದಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಕೃಷ್ಣ ನದಿ ತೀರದ ಐತಿಹಾಸಿಕ ಅಮರಗೋಳ ಗ್ರಾಮ ಶರಣರ ಸ್ಮಾರಕವಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ವರದಿ ಫಲಶೃತಿ | ₹14 ಕೋಟಿ ವೆಚ್ಚದಲ್ಲಿ ಹಾಗರಗಾ ರಸ್ತೆ ಕಾಮಗಾರಿ ಆರಂಭ
ಈ ವೇಳೆ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಪ್ರೊ. ಬಿ ಎಂ ಹಿರೇಮಠ, ಬಿಇಒಬಿಎನ್ ಸಾವಳಗಿ, ಆರ್ ಎಸ್ ಪಾಟೀಲ ಕುಚಬಾಳ, ಪ್ರಭುಗೌಡ ದೇಸಾಯಿ, ನಾಲತವಾಡ ಕಸಾಪ ವಲಯ ಘಟಕದ ಅಧ್ಯಕ್ಷ ಡಾ. ದತ್ತಾತ್ರಯ ಮುಳಖೇಡ, ಕಸಾಪ ಜಿಲ್ಲಾಧ್ಯಕ್ಷ ಹಾಸಿಮ್ ಪೀರ್ ವಾಲಿಕಾರ, ಕಸಪಾ ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ಶ್ರೀ ಗುರು ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಖಾರಿ ಇಸಾಕ್ ಅಹಮದ್ ಮಾಗಿ, ಪುರಸಭೆ ಅಧ್ಯಕ್ಷ ಮೆಹಬೂಬ ಗೋಳಸಂಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ಕಸಾಪ ಗೌರವಾಧ್ಯಕ್ಷ ಎಂಬಿ ನಾವದಗಿ, ತಾಲೂಕು ಪಂಚಾಯತಿ ಇಒ ಎನ್ ಎಸ್ ಮಸಳಿ, ಪುರಸಭೆ ಮುಖ್ಯ ಅಧಿಕಾರಿ ಮಲ್ಲನಗೌಡ ಬಿರಾದಾರ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮದ್ನೂರ, ಗಣ್ಯರಾದ ಅಬ್ದುಲ್ ರೆಹಮಾನ್ ಬೀದರ್ ಕುಂದಿ, ಬರಹಗಾರರಾದ ಎಚ್ ಕೆ ವಿವೇಕಾನಂದ, ಬಿ ಸಿ ಮೊಟಗಿ, ಜಯಶ್ರೀ ಹಿರೇಮಠ, ಮದನ ಪಾಟೀಲ್ ಸಾಳವಾಡಗಿ ಬಾಂಬೆ, ಕಾಂಗ್ರೆಸ್ ಮುಖಂಡ ಸಿ ಬಿ ಅಸ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಸೇರಿದಂತೆ ಇತರರು ಇದ್ದರು.