ಅಪಘಾತಗಳ ಬಗ್ಗೆ ಎಷ್ಟೇ ಅರಿವು ಮೂಡಿಸುವ ಕಾರ್ಯಕ್ರಮಗಳಾಗುತ್ತಿದ್ದರೂ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ನಿಯಮಗಳು ಜಾರಿಯಾಗುವುದಕ್ಕಿಂತ ಅದರ ಜತೆಗೆ ಜನರೂ ಜಾಗೃತರಾಗಿರುವುದು ಅತಿಮುಖ್ಯ ಎಂದು ನ್ಯಾಯಾಧೀಶ ಸಿದ್ರಾಮಪ್ಪ ಕಲ್ಯಾಣರಾವ್ ಹೇಳಿದರು.
ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯ ಹಾಗೂ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ರಸ್ತೆ ಅಪಘಾತ ತಡೆ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, “ಕುಡಿದು ವಾಹನ ಚಾಲನೆ ಮಾಡುವುದರಿಂದ ದೇಶದಲ್ಲಿ ಶೇ.70ರಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಅತಿವೇಗದಿಂದ ವಾಹನ ಚಾಲನೆ ಮಾಡುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ರಸ್ತೆ ಬದಿಗಳಲ್ಲಿ ಅಧಿಕಾರಿಗಳು ವೇಗದ ಮಿತಿಯ ಕುರಿತು ಸೂಚನಾ ಫಲಕಗಳನ್ನು ಹಾಕಿದ್ದರೂ ಸಾರ್ವಜನಿಕರು ಆ ನಿಯಮವನ್ನು ಉಲ್ಲಂಘಿಸಿ ವಾಹನಗಳನ್ನು ಅತ್ಯಂತ ವೇಗವಾಗಿ ಚಾಲನೆ ಮಾಡುತ್ತಾರೆ ಇದು ಕಾನೂನು ಬಾಹಿರವಾಗಿದೆ. ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದೇ ಆದಲ್ಲಿ ಬಹುತೇಕ ಅಪಘಾತಗಳನ್ನು ತಡೆಯಬಹುದು” ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮಾತನಾಡಿ, “ಪ್ರತಿಯೊಬ್ಬರೂ ಕೂಡ ವಾಹನ ಚಾಲನೆ ಮಾಡುವಾಗ ತಮ್ಮ ಸುರಕ್ಷತೆ ಜೊತೆಗೆ ಬೇರೆ ಅವರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ನಿರ್ಲಕ್ಷ್ಯತೆಯಿಂದ ವಾಹನ ಚಾಲನೆ ಮಾಡುವುದರಿಂದ ತಮ್ಮ ಜೀವ ಸೇರಿದಂತೆ ಇತರರ ಜೀವವನ್ನೂ ಅಪಾಯಕ್ಕೆ ದೂಡಬಾರದು. ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲೇ ಅಧಿಕ ಸಾವುಗಳು ದಾಖಲಾಗಿದ್ದು, ಎರಡು ಸಾವಿರಕ್ಕೂ ಅಧಿಕ ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ದಲ್ಲಿ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಪ್ರತಿಯೊಬ್ಬರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದರು.
“ಜನರ ಅನುಕೂಲ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ಪ್ರತಿ ದಿನ ವಾಹನಗಳ ನೋಂದಣಿ ಹೆಚ್ಚಳವಾಗುತ್ತಿದ್ದು, ಜ.1 ರಿಂದ ಈವರೆಗೆ 25ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಅಪಘಾತಗಳ ತೀವ್ರತೆ ಎಷ್ಟು ಅಧಿಕವಾಗಿದೆ ಎಂಬುವುದನ್ನು ಗಮನಿಸಬೇಕಾಗುತ್ತದೆ. ವಾಹನ ಚಾಲಕರು ಸಾಮಾನ್ಯ ವರ್ಗದ ಕುಟುಂಬದ ಮುಖ್ಯ ವ್ಯಕ್ತಿಗಳಾಗಿರುತ್ತಾರೆ ಅವರ ನಿರ್ಲಕ್ಷತೆಯಿಂದ ಇಡೀ ಕುಟುಂಬ ನೋವು ಪಡುವ ಸಾಧ್ಯತೆ ಎದುರಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ದಲಿತ ಮನೆ ಮಾಲಿಕರ ಹೆಸರೇ ಖಾತೆಯಲ್ಲಿ ನಮೂದಿಲ್ಲ; ಕಣ್ಮುಚ್ಚಿ ಕುಳಿತ ನಗರಸಭೆ
ಈ ವೇಳೆ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ದೇವೇಂದ್ರ ಪ್ರಸಾದ್, ಮಂಜುನಾಥ ಕೊರವಿ, ರಾಕೇಶ, ಪ್ರವೀಣ, ಸಂಪನ್ಮೂಲ ವ್ಯಕ್ತಿ ದಂಡಪ್ಪ ಬಿರಾದಾರ, ಮೋಟಾರು ತರಬೇತಿ ಶಾಲೆಗಳ ಸಂಘದ ಅಧ್ಯಕ್ಷ ಅನ್ವರ್ ಪಾಷಾ, ಲಾರಿ ಅಸೋಸಿಯೇಷನ್ನ ಅಜೀಮ್ ಪಾಷಾ, ಅಧೀಕ್ಷಕ ಮಂಜುನಾಥ, ಜಿನತ್ ಸಾಜಿದಾ, ಎಸ್ಕೆಇಎಸ್ ಕಾಲೇಜು ಪ್ರಾಚಾರ್ಯ ಬಾಬುರಾವ್ ಶೇಗುಣಸಿ ಸೇರಿದಂತೆ ಇತರರಿದ್ದರು.
