ಭದ್ರಾವತಿಯಲ್ಲಿ ಹಾಡಹಗಲೇ ಲಾಂಗು ಮಚ್ಚಿನಿಂದ ಹೊಡೆದಾಡಿದ ವಿಡಿಯೊ ವೈರಲ್ ಆಗಿದೆ.
ಇತ್ತೀಚೆಗೆ ಭದ್ರಾವತಿ ನಗರದ ಭದ್ರಾ ನದಿಯಲ್ಲಿ ನಡೆಯುತ್ತಿದ್ದ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾದ ಮಹಿಳಾ ಅಧಿಕಾರಿಗೆ, ದಂಧೆಕೋರರು ಜೀವ ಬೆದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು.
ಸದರಿ ಪ್ರಕರಣ ಇನ್ನೂ ಮಾಸುವ ಮುನ್ನವೇ ಇದೀಗ ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಇನ್ನೊಂದು ಪ್ರಕರಣ ನಡೆದಿದ್ದು, ಯುವಕರ ಎರಡು ಗುಂಪುಗಳು, ಜನನಿಬಿಡ ರಸ್ತೆಯಲ್ಲಿಯೇ ಹಾಡಹಗಲೆ ಹೊಡೆದಾಡಿಕೊಂಡಿರುವ ವೀಡಿಯೊವೊಂದು ವೈರಲ್ ಆಗಿದೆ. ಆದರೆ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಫೆಬ್ರವರಿ 9ರಂದು ಸದರಿ ಮಾರಾಮಾರಿ ಘಟನೆ ನಡೆದಿದೆ ಎನ್ನಲಾಗಿದೆ. ಭದ್ರಾವತಿ ಪಟ್ಟಣದ ಉಜ್ಜನಿಪುರ ಸರ್ಕಲ್ನಲ್ಲಿ ಘಟನೆ ನಡೆದಿದೆ. ಲಾಂಗ್, ದೊಣ್ಣೆಗಳಿಂದ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಕಲ್ಲು ತೂರಾಟವೂ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಯುವಕ-ಯುವತಿಯ ವಿಡಿಯೊ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ; ಥಳಿತ
ಓಸಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಈ ಹೊಡೆದಾಟವು ಸಮೀಪದ ಕಟ್ಟಡಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಘಟನೆ ನಡೆದ ಹಲವು ದಿನಗಳ ನಂತರ ಸದರಿ ಮಾರಾಮಾರಿ ನಡೆದಿರುವ ವಿಡಿಯೊ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಇಷ್ಟೆಲ್ಲ ರಾದ್ಧಾಂತ ನಡೆದರೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಪೊಲೀಸರು ಯಾರ ವಿರುದ್ಧವೂ ಕ್ರಮಕೈಗೊಳ್ಳದಿರುವುದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ. ಒಟ್ಟಾರೆ ಸದರಿ ಗ್ಯಾಂಗ್ ವಾರ್ ಪ್ರಕರಣದಿಂದ ಮತ್ತೊಮ್ಮೆ ಭದ್ರಾವತಿ ನಗರದ ಕಾನೂನು ಸುವ್ಯವಸ್ಥೆಯ ವಿಷಯದ ಚರ್ಚೆಯೂ ಮುನ್ನೆಲೆಗೆ ಬರುವಂತಾಗಿದೆ.