ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಪುನರ್ವಸತಿ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ದೇವದಾಸಿ ಮಹಿಳೆಯರು ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದಾರೆ. ಆದರೂ ಈವರೆಗೆ ಯಾವುದೇ ಪ್ರಯೋಜನಗಳಾಗಿಲ್ಲ. ಈಗಲಾದರೂ ನೂತನ ಸರ್ಕಾರ ದೇವದಾಸಿಯರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಭಿಷೇಕ್ ಕೊಪ್ಪದ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ವತಿಯಿಂದ ಗದಗ ಜಿಲ್ಲೆಯ ರೋಣ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ದೇವದಾಸಿ ಮಹಿಳೆಯರ ಮರು ಸರ್ವೆ ಮತ್ತು ಮಾಸಿಕ ಸಹಾಯಧನ 3000 ರೂ.ಗಳಿಗೆ ಹೆಚ್ಚಿಸಬೇಕು. ಮುಂಬರುವ ಬಜೆಟ್ಗಳಲ್ಲಿ ಪ್ರತಿವರ್ಷ ಕನಿಷ್ಠ 1,000 ಕೋಟಿ ರೂ.ಅನುದಾನ ಮಂಡಿಸಬೇಕು. ದೌರ್ಜನ್ಯದ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಬೇಕು” ಎಂದು ಒತ್ತಾಯಿಸಿದರು.
“ರಾಜ್ಯ ಸರ್ಕಾರ ಎರಡು ಬಾರಿ ರಾಜ್ಯಾದ್ಯಂತ ಗಣತಿ ಮಾಡಿದರೂ ಈಗಲೂ ಗಣತಿಯಾಚೆ ಉಳಿದ ಮಹಿಳೆಯರ ಸಂಖ್ಯೆ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವುದು ಕಂಡುಬಂದಿದೆ. ಅದೇ ರೀತಿ ಗಣತಿ ಪಟ್ಟಿಯಲ್ಲಿರುವ ಮಹಿಳೆಯರಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ, ಮಾಸಿಕ ಪಿಂಚಣಿ ಅಥವಾ ಸಹಾಯಧನ ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದಲೂ ರಾಜ್ಯದ ಎಲ್ಲ ಸರ್ಕಾರಗಳು ಮಾಸಿಕ ಸಹಾಯಧನ ಹೆಚ್ಚಳ ಮಾಡುವುದಾಗಿ ಹೇಳುತ್ತಿವೆಯಾದರೂ ಹೆಚ್ಚಳ ಮಾಡಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ದೇವದಾಸಿ ಮಹಿಳೆಯರ ಮಕ್ಕಳ ಪುನರ್ವಸತಿ, ಪರಿತ್ಯಕ್ತ ಮಹಿಳೆಯರ ಗಣತಿ ಕಾರ್ಯಗಳನ್ನು ಈವರೆಗೂ ಗಂಭೀರವಾಗಿ ಕೈಗೊಂಡಿಲ್ಲ. ದಲಿತ ಕುಟುಂಬಗಳ ಸ್ವಾವಲಂಬಿ ಬದುಕು ಪಡೆಯುವಂತೆ ಮಾಡುವಲ್ಲಿಯೂ ಸರ್ಕಾರಗಳು ಸೋತಿರುವುದರಿಂದ ರಾಜ್ಯದಲ್ಲಿ ದೌರ್ಜನ್ಯದ ದೇವದಾಸಿ ಪದ್ಧತಿ ನಡೆಯುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಗಂಭೀರವಾಗಿ ಪರಿಗಣಿಸಬೇಕು” ಎಂದು ಅಭಿಷೇಕ್ ಕೊಪ್ಪದ ಆಗ್ರಹಿಸಿದರು.
“ಗಣತಿ ಪಟ್ಟಿಗೆ ಸೇರದ ಎಲ್ಲ ದೇವದಾಸಿ ಮಹಿಳೆಯರನ್ನು ಗಣತಿ ಮಾಡಿ ಗಣತಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಹಾಗೆಯೇ ದೇವದಾಸಿ ಮಹಿಳೆಯರ ಮಕ್ಕಳ ಮತ್ತು ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣುಮಕ್ಕಳ ಗಣತಿಯನ್ನು ಕೈಗೊಳ್ಳಬೇಕು” ಎಂದರು.
“ದೇವದಾಸಿ ಮಹಿಳೆಯರ ಮಕ್ಕಳ ಮದುವೆಗೆ ನೀಡುವ ಪ್ರೋತ್ಸಾಹ ಧನದಲ್ಲಿ ಇರುವ ಎಲ್ಲ ಷರತ್ತುಗಳನ್ನು ಮತ್ತು ಹಲವು ಅನಗತ್ಯ ದಾಖಲೆ ಕೇಳುವುದನ್ನು ಹಿಂಪಡೆದು ಸರಳೀಕರಿಸಬೇಕು. ಒಳ ಮೀಸಲಾತಿ ಆಧಾರದಲ್ಲಿ ಶಿಕ್ಷಣ ಮತ್ತು ಉದ್ಯೋಗ ನೀಡಲು ಕ್ರಮವಹಿಸಬೇಕು. ಉದ್ಯೋಗ ದೊರೆಯುವವರೆಗೆ ಮಾಸಿಕ ₹10,000ದಂತೆ ನಿರುದ್ಯೋಗ ಭತ್ಯೆ ಒದಗಿಸಬೇಕು” ಎಂದು ಒತ್ತಾಯಿಸಿದರು.
“ಎಲ್ಲ ದೇವದಾಸಿ ಮಹಿಳೆಯರು ಹಾಗೂ ಅವರ ಮಕ್ಕಳಿಗೆ ತಲಾ ಐದು ಎಕರೆ ನೀರಾವರಿ ಜಮೀನು ಒದಗಿಸಬೇಕು. ಇದಕ್ಕಾಗಿ ಪ್ರತಿ ವರ್ಷ ಪ್ರತಿ ತಾಲೂಕಿಗೂ ಕನಿಷ್ಟ 50 ಎಕರೆ ಭೂಮಿ ದೊರೆಯುವಂತೆ ಭೂಸ್ವಾಧೀನದ ಮೂಲಕ ಕ್ರಮವಹಿಸಬೇಕು. ದೇವದಾಸಿ ಮಹಿಳೆಯರ ಸಾಲ ಸೌಲಭ್ಯ ಹಾಗೂ ಸಹಾಯಧನ ಕಡಿತ ಮಾಡಿರುವುದನ್ನು ಹಿಂಪಡೆಯಬೇಕು. ಶೇ.75ರಷ್ಟು ಸಹಾಯಧನವಿರುವ ಮತ್ತು ಐದು ವರ್ಷಗಳ ಕಾಲ ಬಡ್ಡಿ ಇರದ ಕನಿಷ್ಟ 5 ಲಕ್ಷ ರೂ.ಗಳ ಸಾಲ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಪರಿಶಿಷ್ಟರ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆಗೆ ಆಗ್ರಹಿಸಿ ಧರಣಿ
“ಫಲಾನುಭವಿ ದೇವದಾಸಿ ಮಹಿಳೆಯರನ್ನು ಆಯ್ಕೆ ಮಾಡುವಾಗ ಸೀನಿಯಾರಿಟ್ ಆಧಾರದಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆಗೆ ಕ್ರಮವಹಿಸಬೇಕು. ಫಲಾನುಭವಿ ಆಯ್ಕೆಯಲ್ಲಿ ಉಂಟಾಗುವ ವಿಳಂಬವನ್ನು ತಡೆಯಬೇಕು” ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರು ದೇವಕ್ಕ ಜೋಗನವರ, ರೋಣವ್ವ ಹಂಚಿನಾಳ, ದುರುಗವ್ವ ಮಾದರ್, ಫಕೀರವ್ವ ಕರಕಿಕಟಿ, ವೀರಪ್ಪ ಮಾದರ, ಮೈನುದಿನ್ ನದಾಫ್, ಯಲಮ್ಮ ಚಲವಾದಿ ಸೇರಿದಂತೆ ಇತರರು ಇದ್ದರು.