- ಬೆಂಗಳೂರು ವಿವಿಯ ಕುಲಪತಿ, ಕುಲಸಚಿವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು
- ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆಡಳಿತದಲ್ಲಿ ಅಕ್ರಮ ನಡೆದಿರುವ ಆರೋಪ
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳ ಹಾಸಿಗೆ, ದಿಂಬುಗಳ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಎಲ್ಲ ವಿದ್ಯಾರ್ಥಿನಿಲಯಗಳ ಸ್ನಾಥಕೋತ್ತರ ಪದವಿ ಮತ್ತು ಪಿ.ಎಚ್ಡಿ ವಿದ್ಯಾರ್ಥಿಗಳು, ಕುಲಪತಿ ಮತ್ತು ಕುಲಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಬೆಂಗಳೂರು ವಿಶ್ವ ವಿದ್ಯಾನಿಲಯದ ಒಂಬತ್ತು ವಿದ್ಯಾರ್ಥಿನಿಲಯಗಳಿಗೆ ಅಗತ್ಯವಿದ್ದ ಹಾಸಿಗೆ, ದಿಂಬುಗಳ ಖರೀದಿಯಲ್ಲಿ ಅಕ್ರಮ ನಡೆದಿರುವುದಾಗಿ ವರದಿಯಾಗಿದೆ. ಪೂರೈಕೆಗೆಂದು ಕರೆಯಲಾಗಿದ್ದ ಟೆಂಡರಲ್ಲಿ ಉಲ್ಲೇಖಿಸಲಾಗಿದ್ದ ಗುಣಮಟ್ಟವೂ ಇಲ್ಲವಾಗಿದ್ದು, ಪೂರೈಸುವುದಾಗಿ ತೋರಿಸಲಾಗಿದ್ದ ಹಾಸಿಗೆ ದಿಂಬುಗಳ ಬದಲು ಕಳಪೆ ಹಾಗೂ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಲಭ್ಯವಿರುವ ಹಾಸಿಗೆ- ದಿಂಬುಗಳನ್ನು ಪೂರೈಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
2021-22ನೆ ಸಾಲಿನಲ್ಲಿ ಟೆಂಡರ್ ಕರೆಯಲಾಗಿದ್ದು, ಪ್ರತಿ ಹಾಸಿಗೆಗೆ ₹5,900 ಮತ್ತು ಪ್ರತಿ ದಿಂಬಿಗೆ ₹650 ನಿಗದಿಪಡಿಸಲಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ₹3,000 ಸಿಗುವ ಹಾಸಿಗೆ ಮತ್ತು ₹150 ಕ್ಕೆ ಸಿಗುವ ದಿಂಬುಗಳನ್ನು ಹೆಚ್ಚಿನ ದರದಲ್ಲಿ ಖರೀದಿಸಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆಡಳಿತದಲ್ಲಿ ಬೆಂಗಳೂರು ವಿವಿಯ ಒಂಬತ್ತು ವಿದ್ಯಾರ್ಥಿನಿಲಯಗಳಿಗೆ ಹಾಸಿಗೆ ಮತ್ತು ದಿಂಬು ಸರಬರಾಜು ಮಾಡುವ ಬಗ್ಗೆ ಟೆಂಡರ್ ಅನ್ನು ಪ್ರಕಟ ಮಾಡಿ, 2022ರ ಫೆ. 3ರಂದು ಎಸ್.ಎಲ್.ವಿ ಟ್ರೇಡಿಂಗ್ ಕಾರ್ಪೋರೇಶನ್ಗೆ ವಸ್ತುಗಳನ್ನು ಪೂರೈಕೆ ಮಾಡಲು ಆದೇಶ ನೀಡಲಾಗಿತ್ತು.
₹1,23,80,650 ಕೋಟಿ ಟೆಂಡರ್ ಇದಾಗಿದ್ದು, ಒಂಬತ್ತು ಹಾಸ್ಟೆಲ್ಗಳಿಗೆ 1,848 ಹಾಸಿಗೆ ಮತ್ತು 2,273 ದಿಂಬುಗಳನ್ನು ಪೂರೈಕೆ ಮಾಡುವಂತೆ ಆದೇಶ ನೀಡಲಾಗಿತ್ತು. ₹3,000 ಗಳಿಗಿಂತಲು ಕಡಿಮೆ ಬೆಲೆಯ ಪ್ರತಿ ಹಾಸಿಗೆಗೆ ₹5,900 ಬಿಲ್ ಮತ್ತು ₹150 ಪ್ರತಿ ದಿಂಬಿಗೆ ₹650 ಬಿಲ್ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆಎಸ್ಆರ್ಟಿಸಿ ನರ್ಮ್ ಬಸ್ ಪುನಾರಂಭಿಸಲು ಆಗ್ರಹ; ಜಿಲ್ಲಾಧಿಕಾರಿಗೆ ಡಿವೈಎಫ್ಐ ಮನವಿ
ಹಗರಣವು ಒಂದು ವರ್ಷದ ಹಿಂದೆ ನಡೆದಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಹಿರಂಗವಾಗಿದೆ. ಟೆಂಡರ್ ನೀಡಿದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಮತ್ತು ವಸ್ತುಗಳ ಗುಣಮಟ್ಟ ಪರೀಕ್ಷಿಸುವಲ್ಲಿ ಲೋಪವ ಎಸಗಿದ ಟೆಕ್ಟ್ಟೈಲ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಹನುಮಂತ ನಾಯ್ಕ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.