ದಲಿತ ಸಮುದಾಯದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ಮೆರವಣಿಗೆಯಲ್ಲಿ ಕುದುರೆ ಮೇಲೆ ಸವಾರಿ ಮಾಡುತ್ತಿದ್ದ ವರನ ಮೇಲೆ ಪ್ರಬಲ ಜಾತಿಯ 40 ಮಂದಿ ದುರುಳರು ಹಲ್ಲೆ ನಡೆದಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ.
ಬುಲಂದ್ಶಹರ್ನ ಧಮ್ರಾವಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ದಲಿತ ವರ ಸೇರಿದಂತೆ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಪ್ರಬಲ ಜಾತಿಯ ದುರುಳರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ವರನನ್ನು ಕುದುರೆಯಿಂದ ಎಳೆದು ಬೀಳಿಸಿದ್ದಾರೆ.
ಮೆರವಣಿಗೆ ಸಮಯದಲ್ಲಿ ಡಿಜೆ ಹಾಕಲಾಗಿತ್ತು. ವರನನ್ನು ಕುದುರೆ ಮೇಲೆ ಮೆರವಣಿಗೆ ಮಾಡಲಾಗುತ್ತಿತ್ತು. ಇದನ್ನು ಸಹಿಸದ ಪ್ರಬಲ ಜಾತಿಯವರು ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ವರನ ಕುಟುಂಬಸ್ಥರಾದ ಭಗವತ್ ಸಿಂಗ್ ಅವರ ಪ್ರಕಾರ, ರಾತ್ರಿ 8 ಗಂಟೆ ಸುಮಾರಿಗೆ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯಲ್ಲಿ ಹಾಕಲಾಗಿದ್ದ ಡಿಜೆ ಸಂಗೀತವನ್ನು ವಿರೋಧಿಸಿದ ಠಾಕೂರ್ ಸಮುದಾಯದವರು ಗಲಾಟೆ ಮಾಡಿದರು. ಮದುವೆಗೆ ಬಂದಿದ್ದ ಅತಿಥಿಗಳಿಗೆ ಜಾತಿ ನಿಂದನೆ ಮಾಡಿ, ಕೋಲುಗಳು, ಕಬ್ಬಿಣದ ರಾಡ್ಗಳು ಮತ್ತು ಚೂಪಾದ ವಸ್ತುಗಳಿಂದ ಹಲ್ಲೆ ನಡೆಸಿದರು. ಹಲವರಿಗೆ ಗಾಯಗಳಾಗಿವೆ. ಗಾಯಾಳಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
A #Dalit man's baraat (wedding procession) was allegedly attacked by around 40 upper caste men who hurled casteist slurs and pulled the groom – in full wedding dress – off the horse for passing through their locality and playing DJ music in #UttarPradesh's #Bulandshahr.… pic.twitter.com/6OpsX7ZiIl
— Hate Detector 🔍 (@HateDetectors) February 22, 2025
ಘಟನಾ ಸ್ಥಳಕ್ಕೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ರಿಜುಲ್ ಕುಮಾರ್ ಮತ್ತು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಐದು ಜನರನ್ನು ಬಂಧಿಸಲಾಗಿದೆ. ಗುರುತಿಸಲಾದ 30 ವ್ಯಕ್ತಿಗಳು ಮತ್ತು ಕೆಲವು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ.
“ಆರೋಪಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 191(2) (ಗಲಭೆ), 126(2) (ಚಲನೆಗೆ ತಡೆ), 324 (4) (ಕಿಡಿಗೇಡಿತನ), 115 (2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 352 (ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3 (1) (ಬಿ) (ಸಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ” ಎಂದು ರಿಜುಲ್ ಕುಮಾರ್ ಹೇಳಿದ್ದಾರೆ.