ತುಮಕೂರು ಜಿಲ್ಲೆಯ ಹುಳಿಯಾರು ಪಬ್ಲಿಕ್ ಶಾಲೆಯ ಮಕ್ಕಳನ್ನು ಮತಾಂತರ ಮಾಡಲು ಯತ್ನಿಸಲಾಗಿದೆ ಎಂಬ ಆರೋಪದ ವಿರುದ್ಧ ಕಾಂಗ್ರೆಸ್ ಮುಖಂಡ ಡಾ.ಎಸ್.ಎನ್.ಸತೀಶ್ ಸಾಸಲು ಕಿಡಿಕಾರಿದರು.
ಇಂದು ಸಾಸಲು-ಗೊಲ್ಲರಹಟ್ಟಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, “ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಡವರ ಮಕ್ಕಳ ಅನುಭವಾತ್ಮಕ ಕಲಿಕೆಯ ಅವಕಾಶಗಳನ್ನು ನಿರ್ಬಂಧಿಸಲು ಯತ್ನಿಸುತ್ತಿರುವ ಶಿಕ್ಷಣ ವಿರೋಧಿಗಳ ವಿರುದ್ಧ ಎಚ್ಚರಿಕೆ ವಹಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅಪಪ್ರಚಾರ ಮಾಡಿ, ಸುಳ್ಳು- ವದಂತಿಗಳನ್ನು ಹರಡಿ, ಸಮಾಜದಲ್ಲಿ ಕ್ಷೋಭೆ ಉಂಟುಮಾಡಿ ಶಾಂತಿ ಕದಡಲು ಯತ್ನಿಸುತ್ತಿರುವ ಮನುಷ್ಯ ವಿರೋಧಿಗಳ ವಿರುದ್ಧ ಗಮನ ಹರಿಸಬೇಕು” ಎಂದರು.
“ಹುಳಿಯಾರಿನಲ್ಲಿ ಫೆಬ್ರವರಿ 11ರಂದು ನಡೆದ ಘಟನೆಯನ್ನು ಸೂಕ್ಷ್ಮವಾಗಿ ನೋಡಿದಾಗ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಘಟನೆಯನ್ನು ತಿರುಚಿ ಕೆಲವರು ಗುಲ್ಲು ಹಬ್ಬಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆಯ 110 ಮಕ್ಕಳನ್ನು ಫೆಬ್ರವರಿ 11ರಂದು ಕೈಗಾರಿಕಾ ಪ್ರದೇಶದ ವೀಕ್ಷಣೆಗಾಗಿ ಶಿಕ್ಷಕರು ಕರೆದುಕೊಂಡು ಹೋಗಿದ್ದರು. ಕಲ್ಪತರು ಬ್ರಿಕ್ಸ್ ಫ್ಯಾಕ್ಟರಿಯನ್ನು ತೋರಿಸಿ, ಹಿಂತಿರುಗುವಾಗ ಕನಕದಾಸ ಸರ್ಕಲ್ನಲ್ಲಿ ಕನಕದಾಸರ ಪ್ರತಿಮೆಯನ್ನು ತೋರಿಸಿದ್ದರು. ಆಗ ಮಕ್ಕಳು ಪಕ್ಕದಲ್ಲೇ ಇರುವ ಚರ್ಚ್ ನೋಡಲು ಒತ್ತಾಯಿಸಿದ್ದರು. ಮಕ್ಕಳ ಒತ್ತಾಯದ ಮೇರೆಗೆ ಶಿಕ್ಷಕರು ಒಳಗಡೆ ಕರೆದುಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ಚರ್ಚ್ನಲ್ಲಿ ದಿನನಿತ್ಯದ ಚಟುವಟಿಕೆ ನಡೆಯುತ್ತಿತ್ತು. ಮೊದಲೇ ಚರ್ಚ್ ಒಳಗೆ ಸಾಕಷ್ಟು ಜನ ಇದ್ದರು. ಹೀಗಾಗಿ ಒಂದಿಷ್ಟು ಮಕ್ಕಳು ಚರ್ಚ್ ಒಳಗೆ, ಒಂದಿಷ್ಟು ಮಕ್ಕಳು ಹೊರಗಡೆ ಇದ್ದರು. ಆ ವೇಳೆ ಪತ್ರಕರ್ತರಲ್ಲದ ಕೆಲವರು ಪ್ರವೇಶಿಸಿ, ವಿಡಿಯೊ ಮಾಡಿಕೊಂಡು, ಮತಾಂತರ ನಡೆಯುತ್ತಿತ್ತು ಎಂದು ಹರಿಬಿಟ್ಟಿದ್ದಾರೆ” ಎಂದು ವಿವರಿಸಿದರು.
ಇದನ್ನೂ ಓದಿ:ತುಮಕೂರು | ರಾಜಕೀಯ ಪರಿವರ್ತನೆಗೆ ಜಾಗೃತ ಕರ್ನಾಟಕ ಸೇರಿ: ಅನಿಲ್ ಕುಮಾರ್ ಚಿಕ್ಕದಾಳವಟ್ಟ
ಚರ್ಚ್ಗಾಗಲೀ, ಮಾಧ್ಯಮಗಳಿಗಾಗಲೀ, ಶಾಲೆಗಾಗಲೀ ಸಂಬಂಧಪಡದವರು ಚಿತ್ರೀಕರಣ ಮಾಡಿದ್ದರು. ಅಲ್ಲಿ ಮತಾಂತರ ನಡೆದದ್ದು ನಿಜವಾಗಿದ್ದರೆ, ಸಾಮಾಜಿಕ ಜವಾಬ್ದಾರಿ ಇದ್ದ ಇವರೇಕೆ ಪ್ರಶ್ನಿಸಲಿಲ್ಲ? ವಾಸ್ತವದಲ್ಲಿ ಅಂತಹ ಕೃತ್ಯವೇ ನಡೆದಿಲ್ಲ. ನೂರಾರು ಮಕ್ಕಳನ್ನು ಕರೆದುಕೊಂಡು ಹೋಗಿ ಈ ರೀತಿಯಲ್ಲಿ ಮತಾಂತರ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
