ಸಣ್ಣ ಪ್ರಕಾಶಕರ ಗುಂಪೊಂದು ಕೆಂಪು ಪುಸ್ತಕ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಮಾತ್ರಭಾಷಾ ದಿನದ 171ನೇ ದಿನದ ನೆನಪಿನಲ್ಲಿ ಇತ್ತೀಚೆಗೆ ಆಚರಿಸಿತು. ಜಗತ್ತಿನಾದ್ಯಂತ ಇದುವರೆಗೆ ಸುಮಾರು 10 ಲಕ್ಷ ಜನರು ಆಸಕ್ತಿ,ಉತ್ಸವ ಮತ್ತು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಅವರು ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ಕಚೇರಿ ಬೆವರು ಕಟ್ಟಡದಲ್ಲಿ ನಡೆದ ಓದುವ ಖುಷಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಉನ್ನತ ವಿದ್ಯಾಭ್ಯಾಸ ಪಡೆದವ ಮಾತ್ರ ಪುಸ್ತಕ ಓದಬೇಕು ಎಂಬ ತಪ್ಪು ತಿಳುವಳಿಕೆ ದೂರ ಮಾಡಬೇಕಾದದ್ದು ಇಂದಿನ ಅಗತ್ಯ ಕಾರ್ಮಿಕರು,ರೈತರು ಕೂಲಿಕಾರರು ಕೂಡ ಓದುವ ಖುಷಿಯನ್ನು ಪಡೆದು ದಿನನಿತ್ಯ ಬದುಕಿನಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಅದು ಆಯುಧಗಳನ್ನು ಒದಗಿಸುತ್ತದೆ.
ಹಸಿ ಸುಳ್ಳುಗಳನ್ನು ವಾಟ್ಸ್ ಆ್ಯಪ್ ವಿವಿ ಮೂಲಕ ಹರಡುವ ಇಂದಿನ ದಿನಗಳಲ್ಲಿ ಸಮಾಜದ ಆಗುಹೋಗುಗಳಲ್ಲಿ ಸರಿಯಾದ ಮಾಹಿತಿಯೊಂದಿಗೆ ವಿವೇಕಯುತವಾದ ಭಾಗವಹಿಸುವಿಕೆ ಅಗತ್ಯ. ತಮ್ಮ ಹಿತಾಸಕ್ತಿಗಳಿಗೆ ಮಾರಕವಾಗುವ ಅತಾರ್ಕಿಕ ಧೋರಣೆಗಳಿಗೆ ಮಾರು ಹೋಗುವ ಪ್ರವ್ರತ್ತಿಗಳು ಇಂದು ವ್ಯಾಪಕವಾಗಿವೆ. ವಿದ್ಯಾಮಾನಗಳನ್ನು ವಾಸ್ತವವನ್ನು ಗ್ರಹಿಸುವ, ಸ್ವಂತ ಬುದ್ಧಿಯಿಂದ ವಿಶ್ಲೇಷಿಸುವ ಮತ್ತು ಅಗತ್ಯ ಮಧ್ಯಪ್ರವೇಶ ಮಾಡುವ ಸಾಮರ್ಥ್ಯವು ಓದಿನ ಮೂಲಕ ಬರಲು ಸಾಧ್ಯ. ಓದುವ ಹಿಗ್ಗನ್ನು ಮತ್ತು ಎಲ್ಲರಿಗೂ ಕೈಗೆಟಕುವ ಗ್ರಂಥಾಲಯಗಳನ್ನು ಹಳ್ಳಿ ಹಳ್ಳಿಗಳಲ್ಲಿ ಬೆಳೆಸುವ ಚಳುವಳಿ ಕೇರಳದಂತೆ ಕರ್ನಾಟಕದಲ್ಲಿಯೂ ನಡೆಸಬೇಕು ಎಂದು ಅವರು ಹೇಳಿದರು.
ಈ ವೇಳೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಕ್ರಷ್ಣ ಪೂಜಾರಿ, ಶ್ರೀನಿವಾಸ ಪೂಜಾರಿ ಇದ್ದರು.
ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಸ್ವಾಗತಿಸಿದರು.
ಡಿವೈಎಫ್ಐ ಯುವಜನ ಮುಖಂಡರಾದ ಗಣೇಶ್ ಹಾಗೂ ರಾಘವೇಂದ್ರ ನಿರಂಜನರ ಚಿರಸ್ಮರಣೆ ಕಾದಂಬರಿಗಳ ಓದುವಿಕೆಗೆ ಚಾಲನೆ ನೀಡಿದರು.
