ಈ ದೇಶದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳು ಆಳುವವರ ಕೈಗೊಂಬೆಯಾಗಿವೆ ಎಂದು ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ)ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.
ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ನೇತೃತ್ವದಲ್ಲಿ ಸಾಂಗತ್ಯ ಬಳಗ ಭಗತ್ ಸಿಂಗ್ ಟ್ರೋಫಿ-2025 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಉಳ್ಳಾಲ ಬೈಲ್ ಕೀರ್ತಿ ಮೈದಾನದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಂದು ಕಾಲದಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ನ ಅಧ್ಯಕ್ಷ ಸ್ಥಾನ ನರೇಂದ್ರ ಮೋದಿ ಅವರ ಕೈಯಲ್ಲಿತ್ತು. ಕ್ರಿಕೆಟ್ ಬಗ್ಗೆ ಗಂಧ ಗಾಳಿಯೇ ಗೊತ್ತಿಲ್ಲದ ಅಮಿತ್ ಷಾ ರವರ ಮಗ ಜಯ್ ಷಾ ಈಗ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ. ದೇಶದಲ್ಲಿರುವ ಅರ್ಹ ಯುವ ಪ್ರತಿಭೆಗಳಿಗೆ ಅವಕಾಶಗಳು ದೆೊರೆಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಂದ್ಯಾಕೂಟದಲ್ಲಿ 16 ತಂಡಗಳು ಭಾಗವಹಿಸಿದ್ದವು. ʼಕೀರ್ತಿ ಸ್ಪೋರ್ಟ್ಸ್ ಕ್ಲಬ್ ಉಳ್ಳಾಲʼ ಬೈಲ್ ಪಂದ್ಯಾಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ʼವೀರಾಂಜನೇಯ ಕುತ್ತಾರುʼ ತಂಡ ರನ್ನರ್ಸ್ ಅಪ್ ಪಡೆದುಕೊಂಡಿತು. ಪಂದ್ಯಾಕೂಟದ ಉತ್ತಮ ಬ್ಯಾಟರ್ ಆಗಿ ವೀರಾಂಜನೇಯ ತಂಡದ ವಂಶಿಕ್ ಉತ್ತಮ ಬೌಲರ್ ಆಗಿ ಗುರುದತ್ ಮೂಡಿಬಂದರು. ಕೀರ್ತಿ ಸ್ಪೋರ್ಟ್ಸ್ ತಂಡದ ತ್ವಾಯಿಫ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ನಿಝಾಮ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಇದನ್ನೂ ಓದಿ: ಮಂಗಳೂರು | ಬಂಜಾರ ಸಮುದಾಯ ಸಂಘಟನೆಯಲ್ಲಿ ಸಂತ ಸೇವಾಲಾಲ್ ಪಾತ್ರ ಅಪಾರ: ಉಳ್ಳಾಲ್
ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಜಿದ್ ಉಳ್ಳಾಲ, ಕೀರ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಫಾರೂಕ್, ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೊಕೇಟ್ ನಿತಿನ್ ಕುತ್ತಾರ್, ಜೀವನ್ ರಾಜ್ ಕುತ್ತಾರ್, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಹರೇಕಳ, ಸುನೀಲ್ ತೇವುಲ, ಅಶ್ಫಾಕ್ ಅಲೇಕಳ, ಅಮೀರ್ ಉಳ್ಳಾಲ ಬೈಲ್, ರಝಾಕ್ ಮೊಂಟೆಪದವು, ಶರೀಫ್ ಮೊಂಟೆಪದವು, ಮಿಥುನ್ ಕುತ್ತಾರ್, ರಝಾಕ್ ಮುಡಿಪು, ನವೀಝ್ ಉಳ್ಳಾಲ ಬೈಲ್ ಉಪಸ್ಥಿತರಿದ್ದರು. ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಮುಂತಾದವರು ಇದ್ದರು.
