ಕಾಂಗ್ರೆಸ್ನಲ್ಲಿ ತಮ್ಮನ್ನು ಇದೇ ರೀತಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ ನನ್ನ ಬಳಿ ಬೇರೆ ಆಯ್ಕೆಗಳೂ ಇವೆ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಎಚ್ಚರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ತೊರೆಯುವ ಮುನ್ಸೂಚನೆಯನ್ನು ತರೂರ್ ನೀಡಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.
‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಜೊತೆ ಮಾತನಾಡಿರುವ ಶಶಿ ತರೂರ್ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಕೇರಳದ ಪಿಣರಾಯಿ ವಿಯಜನ್ ನೇತೃತ್ವದ ಎಲ್ಡಿಫ್ ಸರ್ಕಾರವನ್ನು ಹೊಗಳಿರುವ ಅವರು, ಪಕ್ಷಾಂತರದ ಬಗ್ಗೆ ಸ್ಪಷ್ಟ ನಿರಾಕರಣೆ ಮಾಡಿದ್ದಾರೆ. “ಬೇರೆ ಪಕ್ಷಗಳತ್ತ ಹೋಗುವ ಬಗ್ಗೆ ನಂಬಿಕೆ ಇಲ್ಲ. ಹಾಗಂತ ಬೇರೆ ಆಯ್ಕೆಗಳ ಬಗ್ಗೆ ಯಾವುದೇ ಕೊರತೆಯೂ ಇಲ್ಲ” ಎಂದಿದ್ದಾರೆ.
“ನನ್ನ ಬಳಿ ಪುಸ್ತಕಗಳಿವೆ, ಭಾಷಣಗಳಿವೆ, ಇಡೀ ವಿಶ್ವದಿಂದ ಭಾಷಣಕ್ಕಾಗಿ ಕರೆಯುತ್ತಾರೆ” ಎಂದು ಹೇಳುವ ಮೂಲಕ ತರೂರ್ ರಾಜಕೀಯ ನಿವೃತ್ತಿ ಬಗ್ಗೆಯೂ ಮನದ ಇಂಗಿತ ವ್ಯಕ್ತಪಡಿಸಿದ್ದಾರಾ? ಒಟ್ಟಾರೆ ಕಾಂಗ್ರೆಸ್ ಮೇಲೆ ಅವಲಂಬಿತ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
“2024ರ ಲೋಕಸಭಾ ಚುನಾವಣೆಗಳಲ್ಲಿ ಗೆಲುವುಗಳ ನಂತರ ಕಾಂಗ್ರೆಸ್ ಸತತ ವಿಧಾನಸಭಾ ಚುನಾವಣೆಯ ಸೋಲುಗಳನ್ನು ಎದುರಿಸುತ್ತಿರುವಾಗ, ಪಕ್ಷವು ತನ್ನ ಬದ್ದ ಮತದಾರರ ನೆಲೆಯನ್ನು ಮೀರಿ ಜನರನ್ನು ಸೆಳೆಯುವ ಅಗತ್ಯವಿದೆ. ಕಾಂಗ್ರೆಸ್ ತನ್ನ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸದಿದ್ದರೆ, ಮುಂದಿನ ವರ್ಷದ ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ” ಎಂದು ಹೇಳಿದ್ದಾರೆ.
“ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ, ಕಾಂಗ್ರೆಸ್ ತನ್ನ ಬದ್ಧತೆಯ ಮತಗಳ ನೆಲೆಯಿಂದ ಮಾತ್ರ ಗೆಲ್ಲಲು ಸಾಧ್ಯವಿಲ್ಲ. ಇದು ವಾಸ್ತವ. ರಾಷ್ಟ್ರಮಟ್ಟವನ್ನು ನೋಡಿದರೆ, ಕಾಂಗ್ರೆಸ್ ಮತಗಳು ಸುಮಾರು 19% ರಷ್ಟಿದ್ದವು. ಇಷ್ಟು ಸಾಕೆ? ನಾವು 26-27% ಹೆಚ್ಚುವರಿ ಪಡೆದರೆ ಮಾತ್ರ ನಾವು ಅಧಿಕಾರಕ್ಕೆ ಬರಬಹುದು. ಆದ್ದರಿಂದ, ಕಳೆದ ಎರಡು ಚುನಾವಣೆಗಳಲ್ಲಿ ನಮ್ಮನ್ನು ಬೆಂಬಲಿಸದವರ ಅಗತ್ಯವಿದೆ” ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ದೇವರು ಬೇಕಿಲ್ಲ – ಇಚ್ಛಾಶಕ್ತಿ ಸಾಕು
ಪ್ರಧಾನಿ ಮೋದಿ ಹೊಗಳಿದ್ದ ಶಶಿ ತರೂರ್
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ, ಟ್ರಂಪ್ ಜೊತೆಗಿನ ಮಾತುಕತೆ ಹಾಗೂ ವ್ಯಾಪಾರ ಒಪ್ಪಂದಗಳ ಬಗ್ಗೆ ಶಶಿ ತರೂರ್ ಹೊಗಳಿ ಮಾತನಾಡಿ, “ಒಳ್ಳೆಯದನ್ನು ಹೊಗಳಲು ಮತ್ತು ಕೆಟ್ಟದ್ದನ್ನು ತೆಗಳಲು ನನಗೆ ಯಾರ ಅನುಮತಿಯೂ ಬೇಕಿಲ್ಲ” ಎಂದು ಹೇಳಿದ್ದರು.
ಅಲ್ಲದೆ ಶಶಿ ತರೂರ್ ಅವರು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಬಗ್ಗೆಯೂ, ಅದರ ನಿರ್ಧಾರಗಳನ್ನು ತೆಗೆದುಕೊಳ್ಳುವ ರೀತಿಯ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದರು. ಉತ್ತಮ ನಿರ್ಧಾರಗಳನ್ನು, ಪ್ಲ್ಯಾನ್ಗಳನ್ನು ಮಾಡುವ ಬದಲು 100 ಜನ ಇರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಮಾವೇಶದ ರೀತಿ ನಡೆಯುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದರು.
2026 ರಲ್ಲೇ ಕೇರಳ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿವಾಗಿವುದರಿಂದ ಪಕ್ಷವನ್ನು ಅಲರ್ಟ್ ಮಾಡುವ ಬಗ್ಗೆ ತರೂರ್ ಹೇಳಿಕೆ ಭಾರೀ ಮಹತ್ವ ಪಡೆದಿದೆ.
ಏ 8, 9ಕ್ಕೆ ಅಹಮದಾಬಾದ್ನಲ್ಲಿ ಎಐಸಿಸಿ ಅಧಿವೇಶನ
ಗುಜರಾತಿನ ಅಹಮದಾಬಾದ್ನಲ್ಲಿ ಏಪ್ರಿಲ್ 8 ಮತ್ತು 9 ರಂದು ಎಐಸಿಸಿ ಅಧಿವೇಶನ ನಡೆಸುವುದಾಗಿ ಕಾಂಗ್ರೆಸ್ ಪಕ್ಷ ಭಾನುವಾರ ಘೋಷಿಸಿದೆ. ಬಿಜೆಪಿಯ ಜನ ವಿರೋಧಿ ನೀತಿಗಳು, ಚುನಾವಣೆಗಳು, ಪಕ್ಷದ ಭವಿಷ್ಯದ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು ಎಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆ ಹೊರಡಿಸಿದ್ದು, “ಈ ಮಹತ್ವದ ಸಭೆಯು ದೇಶಾದ್ಯಂತ ಎಐಸಿಸಿ ಪ್ರತಿನಿಧಿಗಳನ್ನು ಒಗ್ಗೂಡಿಸಲಿದೆ. ಜನ ವಿರೋಧಿ ನೀತಿಗಳಿಂದ ಎದುರಾಗಿರುವ ಸವಾಲುಗಳು, ಸಂವಿಧಾನ ಮತ್ತು ಅದರ ಮೌಲ್ಯಗಳ ಮೇಲೆ ಬಿಜೆಪಿ ನಿರಂತರ ದಾಳಿಯ ಕುರಿತು ಚರ್ಚಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಪಕ್ಷದ ಭವಿಷ್ಯದ ಮಾರ್ಗಸೂಚಿ ಬಗ್ಗೆ ಚರ್ಚಿಸುತ್ತೇವೆ” ಎಂದಿದ್ದಾರೆ.