ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುರಿಗೇನಹಳ್ಳಿ ತುಳಸಿದಾಸ್ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು. ಈ ಹಿಂದೆ ಅಶ್ವತ್ತೇಗೌಡ ನೀಡಿದ ರಾಜೀನಾಮೆ ಹಿನ್ನಲೆ ತೆರವಾದ ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿ ಸುರಿಗೇನಹಳ್ಳಿ ಸದಸ್ಯ ತುಳಸಿದಾಸ್ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷ ತುಳಸಿದಾಸ್ ಮಾತನಾಡಿ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಅಭಿವೃದ್ದಿ ವಿಚಾರದಲ್ಲಿ ಒಕ್ಕೊರಲಿನ ಅಭಿಪ್ರಾಯ ಪಡೆದು ಮಾದರಿ ಗ್ರಾಮ ಪಂಚಾಯಿತಿ ಹೆಗ್ಗಳಿಕೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗ್ರಾಮೀಣ ಭಾಗದಲ್ಲಿ ಅವಶ್ಯ ರಸ್ತೆ, ನೀರು, ಬೀದಿ ದೀಪ ಒದಗಿಸಿ ಚುನಾಯಿತ ಪ್ರತಿನಿಧಿಗಳ ಮೂಲಕ ಸರ್ಕಾರದ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷ ರಂಗರಾಜು, ಸದಸ್ಯರಾದ ಗಂಗನರಸಮ್ಮ, ಜಯಮ್ಮ, ಶಾಂತಲ, ವೆಂಕಟಲಕ್ಷ್ಮಮ್ಮ, ಅಂಬುಜಮ್ಮ, ನೀಲಮ್ಮ, ಧನಲಕ್ಷ್ಮಿ, ಅನಿತಾ, ಶಿವಣ್ಣ, ಶ್ವೇತಾ, ಮಂಜಮ್ಮ, ರಾಮೇಗೌಡ, ನಾಗರಾಜು, ಪ್ರೇಮಾ, ಸೈಯದ್ ಖಲಂದರ್, ಭಾರತಿ, ಮುಖಂಡರಾದ ಸು.ಮುನಿಯಪ್ಪ, ಕೆ.ಸಿ.ಗಿರೀಶ್ ಪಾಂಡುರಂಗಯ್ಯ, ದಿವಾಕರ್, ರಂಗನಾಥ್ ಇತರರು ಇದ್ದರು.
