ವರ್ತಮಾನದಲ್ಲಿ ಹಲವಾರು ಕಾರಣಗಳಿಂದ ಯುವಸಮೂಹ ಮದುವೆ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಅದರಲ್ಲಿ ಸಲಿಂಗಕಾಮಿಗಳಾಗಿರುವವರೂ ಇದ್ದಾರೆ. ಕುಟುಂಬ, ಸಮಾಜ, ಬಂಧು ಬಳಗ, ಸ್ನೇಹಿತರು ಇನ್ನಿತರರಿಗಾಗಿ ಬಹುತೇಕ ಸಲಿಂಗ ಕಾಮಿಗಳು ವಿವಾಹವಾಗಿ ಸಮಾಜದ ಅನೌಪಚಾರಿಕ ಕಾನೂನುಗಳಿಗೆ ಬಂಧಿಯಾಗಿ ಬದುಕುತ್ತಿದ್ದಾರೆ. ಕೆಲವರು ಮಾತ್ರ ವಿವಾಹವಾಗದೆ ತಮ್ಮಿಷ್ಟದಂತೆ ಬದುಕಲು ನಿತ್ಯವೂ ಹೋರಾಟ ಮಾಡುತ್ತಿದ್ದಾರೆ.
ಮದುವೆ, ವಿವಾಹ, ಲಗ್ನ, ಮ್ಯಾರೇಜ್, ನಿಖಾ ಹೀಗೆ ಆಯಾ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ವಿವಾಹ ಎಂಬ ಸಂಸ್ಥೆಯು ಹಿಂದಿನ ಮತ್ತು ಈಗಿನ ಕಾಲದಲ್ಲೂ ಸಮಾಜದಲ್ಲಿ ತಲೆಎತ್ತಿ ಜೀವಿಸಲು, ಸಮಾಜದ ಸ್ವೀಕಾರವನ್ನು ಪಡೆಯಲು ಅತೀಮುಖ್ಯ. ಗೃಹಸ್ಥ ಆಶ್ರಮಕ್ಕೆ ವಿವಾಹದೊಂದಿಗೆ ಪದಾರ್ಪಣೆಯನ್ನು ಮಾಡಿ, ಕುಟುಂಬ, ಸಂತಾನೋತ್ಪತ್ತಿ, ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ನಂತರ ಮರಣ ಹೀಗೆ ಪ್ರತಿಯೊಬ್ಬನ ಜೀವನವು ಅನಾದಿ ಕಾಲದಿಂದಲೂ ನಿರ್ದೇಶಿಸಲಾಗಿದೆ.
ಪುರಾತನ ಕಾಲದಲ್ಲಿ ಅವಿವಾಹಿತರು ಸನ್ಯಾಸಿಗಳಾಗಿ ಗುರುತಿಸಿಕೊಳ್ಳುತ್ತಿದ್ದರು. ದೇವರ ಪ್ರಾರ್ಥನೆ, ದೇವರ ಸೇವೆ, ಧರ್ಮಪ್ರಚಾರ ಈ ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜದ ಒಪ್ಪಿಗೆ ಪಡೆಯುತ್ತಿದ್ದರು. ಇವರು ಸ್ವ ಇಚ್ಛೆಯಿಂದಲೇ ಸನ್ಯಾಸಿಗಳು ಅಥವಾ ದೈವಾರಾಧಕರು ಆಗಿದ್ದರೋ? ಅಥವಾ ಸಮಾಜದ ಒಪ್ಪಿಗೆಗಾಗಿ ಹೀಗೆ ಆಗಿದ್ದರೋ? ಎಂಬುವುದು ಕೂಡ ಒಂದು ಸಂಶಯ. ಭೂತ ಭವಿಷ್ಯತ್, ವರ್ತಮಾನ ಎಲ್ಲಾ ಕಾಲಗಳಲ್ಲೂ ಅವಿವಾಹಿತರು ಇದ್ದರು, ಇರುವರು, ಇರುತ್ತಾರೆ. ಈ ವರ್ತಮಾನದಲ್ಲಿ ಹಲವಾರು ಕಾರಣಗಳಿಂದ ಯುವಕ ಯುವತಿಯರು ಮದುವೆಯನ್ನು ಮಾಡಿಕೊಳ್ಳಲು ಆಸಕ್ತಿಯನ್ನು ತೋರುತ್ತಿಲ್ಲ. ಅದರಲ್ಲಿ ಬಹು ಮುಖ್ಯವಾದ ಒಂದು ಕಾರಣ ಅವರು ಸಲಿಂಗಕಾಮಿಗಳು ಆಗಿರುವುದು. ಕುಟುಂಬ, ಸಮಾಜ, ಬಂಧು ಬಳಗ, ನೆರೆಹೊರೆ ಮತ್ತು ಸ್ನೇಹಿತರು ಇನ್ನಿತರರಿಗಾಗಿ ಬಹುತೇಕ ಸಲಿಂಗ ಕಾಮಿಗಳು ವಿವಾಹವಾಗಿ ಸಮಾಜದ ಅನೌಪಚಾರಿಕ ಕಾನೂನುಗಳಿಗೆ ಬಂಧಿಯಾಗಿ ಬದುಕುತ್ತಿದ್ದಾರೆ. ಕೆಲವರು ಮಾತ್ರ ವಿವಾಹವಾಗದೆ ತಮ್ಮಂತೆ ತಾವು ಬದುಕಲು ಪ್ರತಿನಿತ್ಯವೂ ಹೋರಾಟ ಮಾಡುತ್ತಿದ್ದಾರೆ. ಇವರ ಮೇಲೆ ಆಗುತ್ತಿರುವ ಶೋಷಣೆ, ಹಿಂಸೆ ದಬ್ಬಾಳಿಕೆ, ಅನ್ಯಾಯ, ಅಸಮಾನತೆಗಳನ್ನು ಕುರಿತಾಗಿ ಯೋಚಿಸುವವರೂ ಇಲ್ಲ. ಹಾಗಾದರೆ ಇವರಿಗೆ ಯಾವ ರೀತಿಯ ಅಸಮಾನತೆ ಆಗುತ್ತಿದೆ? ಎಂದು ತಿಳಿಯೋಣ.
- ಕುಟುಂಬ ಬಹಿಷ್ಕಾರ / ಮನೆಯಿಂದ ಆಚೆ ಹಾಕುವುದು
- ಜಾತಿ ಬಹಿಷ್ಕಾರ
- ಧರ್ಮ ಬಹಿಷ್ಕಾರ
- ಆಸ್ತಿ ಹಕ್ಕಿನಿಂದ ವಂಚನೆ
- ಬಹುತೇಕ ಮೂಲಭೂತ ಹಕ್ಕುಗಳಿಂದ ವಂಚನೆ
- ಅಸಹಕಾರ
- ಮನೆಯಿಂದ ಹಿಡಿದು ಕೆಲಸದ ಸ್ಥಳಗಳಲ್ಲಿಯೂ ಕೂಡ ಪ್ರತಿರೋಧ
- ಚುಚ್ಚು ಪ್ರಶ್ನೆಗಳಿಂದ ಮಾನಸಿಕ ಹಿಂಸೆ
- ಇಷ್ಟ ಬಂದ ಕಟ್ಟು ಕಥೆಗಳನ್ನು ಕಟ್ಟಿ ತೇಜೋವಧೆ
- ಸಭೆ ಸಮಾರಂಭಗಳಿಂದ ಬಹಿಷ್ಕಾರ
- ದೈಹಿಕ ಹಲ್ಲೆಗಳು
- ಇವರ ಸ್ವಯಾರ್ಜಿತ ಆಸ್ತಿಗಾಗಿ ನಯಮಂಚನೆ, ಮೋಸ, ಪ್ರೀತಿಯ ನಾಟಕ
- ಅವಮಾನ, ತಾತ್ಸಾರ, ಲಿಂಗ ನಿಂದನೆ, ಲಘುವಾಗಿ ಕಾಣುವುದು
- ತಮಾಷೆಯ ಗೊಂಬೆಯಂತೆ ಕಾಣುವುದು.
- ಅಪಹಾಸ್ಯ ಮಾಡುವುದು
- ನಿರೂಪಯುಕ್ತ ವಸ್ತುವಂತೆ ಕಾಣುವುದು.
- ಪ್ರೀತಿ, ಸ್ನೇಹ, ಮಮತೆ, ದಯೆ, ಲಾಲನೆ ಪಾಲನೆಗಳಿಂದ ವಂಚನೆ
- ದುಡಿಯುವ ಯಂತ್ರಗಳು
- ನಿರಂತರವಾಗಿ ಮದುವೆ ಮಾಡಿಕೊಳ್ಳಲು ಒತ್ತಾಯಿಸುವುದು.
- ಮಾನ ಮರ್ಯಾದೆಯ ಹೆಸರಲ್ಲಿ ಗೃಹ ಬಂದನ ಮಾಡುವುದು.
- ಮರ್ಯಾದೆ ಆತ್ಮಹತ್ಯೆಗಳಿಗೆ ಪ್ರೇರೇಪಿಸುವುದು.
- ಮರ್ಯಾದೆ ಹತ್ಯೆಗಳನ್ನು ಮಾಡುವುದು.
- ಬಲವಂತವಾಗಿ ದೈವಾರಾಧಕರನ್ನಾಗಿಸುವುದು.
- ಸಂಗಾತಿಗಳು ಮತ್ತು ಸ್ನೇಹಿತರು ಇವರ ಬಗೆಗಿನ ರಹಸ್ಯಗಳನ್ನು ಬಯಲು ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುವುದು.
ನಮ್ಮ ಸಂವಿಧಾನದಲ್ಲಿ ಮದುವೆ ಕಡ್ಡಾಯ ಎಂದು ಯಾವ ವಿಧಿಯಲ್ಲಿ ಹೇಳಲಾಗಿದೆ? ಮದುವೆಯಾಗದಿದ್ದರೆ ಅವರನ್ನು ಕಡೆಗಣಿಸಬೇಕೆಂದು, ಶಿಕ್ಷಿಸಬೇಕು ಎಂದು ಯಾವ ಕಾನೂನಿನಲ್ಲಿ ಪ್ರಸ್ತಾಪಿಸಲಾಗಿದೆ?
ಯಾವುದೋ ಮನು ಕಾಲದ ಅನೌಪಚಾರಿಕ ಕಾನೂನುಗಳನ್ನು ಇಟ್ಟುಕೊಂಡು ಅವಿವಾಹಿತ ವ್ಯಕ್ತಿಯೋರ್ವನ ತೀರಾ ವೈಯಕ್ತಿಕವಾದ ವಿಷಯಗಳನ್ನು ಒಪ್ಪದೇ ಹೀಗೆ ಶಿಕ್ಷಿಸುವುದು ಸರಿಯೇ?
ನಮ್ಮ ಭಾರತೀಯ ಸಮಾಜವು ಇನ್ನು ಅನಾದಿಕಾಲದ ಆಚಾರ ವಿಚಾರಗಳನ್ನು ಮತ್ತು ಮನುಸ್ಮೃತಿಯನ್ನು ಆಧರಿಸಿ ನಡೆಯುತ್ತಿದೆಯೇ? ಸಂವಿಧಾನ ಆಶಯಗಳು ಸಂಪೂರ್ಣವಾಗಿ ಯಾವಾಗ ಈಡೇರುತ್ತವೆ? ಲಿಂಗ, ಜಾತಿ,ವರ್ಣ, ಹುಟ್ಟಿದ ಸ್ಥಳ ಇನ್ನಿತರೆಗಳ ಆಧಾರದ ಮೇಲೆ ಅಸಮಾನತೆ ಸಲ್ಲದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದರೂ, ನಮ್ಮ ಕಾನೂನು ಸಲಿಂಗ ವಿವಾಹಕ್ಕೆ ಅವಕಾಶ ಕೊಡದ ಕಾರಣ ಕಾನೂನನ್ನು ಗೌರವಿಸಿ ಅವಿವಾಹಿತರಾಗಿ ಉಳಿದ ವ್ಯಕ್ತಿಗಳ ಮೇಲೆ ಹೀಗೆ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಇನ್ನಿತರೆ ಅಂಶಗಳ ಆಧಾರದ ಮೇಲೆ ಅವರು ಸಾಯುವವರೆಗೂ ಕೂಡ ಮೌಖಿಕ ಮತ್ತು ದೈಹಿಕವಾಗಿ ದಾಳಿ ಮಾಡುವುದು ಸರಿಯೇ?
ಒಬ್ಬ ವ್ಯಕ್ತಿ ಘನತೆಯ ಬದುಕನ್ನು ಬದುಕಲು ಸಾಮಾಜಿಕ ಕಟ್ಟುಪಾಡುಗಳು ಬಹುದೊಡ್ಡ ಅಡೆತಡೆಗಳಾಗಿವೆ. ಕಾಲಕ್ಕೆ ತಕ್ಕಂತೆ ನಿಯಮಗಳು ಬದಲಾಗಬೇಕು, ಕಾಲಬಾಹಿಯರವಾದ ನಿಯಮಗಳನ್ನು ಆಚರಿಸಸುವುದು ಆಧುನಿಕ ಸಮಾಜಕ್ಕೆ ಮಾರಕವಾಗುತ್ತದೆ ಎಂಬುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಈ ಕುರಿತು ಪ್ರಗತಿಪರ ಚಿಂತಕರು, ನೀತಿ ರೂಪಕರು, ಸರ್ಕಾರಗಳು ಸಂಘ ಸಂಸ್ಥೆಗಳು ಯೋಚಿಸಬೇಕಾಗಿದೆ.ಹೊಸತನ್ನು ಮತ್ತು ಬದಲಾವಣೆಯನ್ನು ಎಲ್ಲರೂ ಸ್ವೀಕರಿಸಬೇಕು. ಯಾವುದೇ ಆಧಾರದ ಮೇಲೆ ಆಗುವ ಅಸಮಾನತೆಯನ್ನು ಅಳಿಸಬೇಕು ಎಂಬುವುದೇ ನಮ್ಮ ಅಭಿಲಾಷೆ.

ಲಕ್ಷ್ಮಣ್ (ಮಾಳವಿಕ )
ಲಿಂಗತ್ವ ಅಲ್ಪಸಂಖ್ಯಾತೆ. ʼಒಂದೆಡೆ ಸಂಸ್ಥೆʼ, ರಾಯಚೂರು