ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಮಡದಿಯರ ಒಲುಮೆ
‘ಶಿವ’ ಎಂಬ ವಚನವ ಬಿಡದಿರಿ
ಮಡದಿಯರ ಒಲುಮೆಯ ನಚ್ಚದಿರಿ ದರ್ಪಣದ ಒಪ್ಪವ ತಪ್ಪದಿರಿ
ವಾಯುವ ಕಡೆಗಡೆಗೆ ತಿದ್ದದಿರಿ
ಹಿಡಿವಡೆ ದೃಢವಾಗಿ ಹಿಡಿಯಿರೆಲರೊ,
ಗುಹೇಶ್ವರ ಸಿಕ್ಕಿದ ಅಲ್ಲಮಂಗೆ.
ಪದಾರ್ಥ:
ನಚ್ಚದಿರಿ = ನಂಬದಿರಿ
ದರ್ಪಣ = ಕನ್ನಡಿ
ಒಪ್ಪವ = ಬಿಂಬವ
ವಚನಾರ್ಥ:
ನನಗೆ ಗುಹೇಶ್ವರ ಸಿಕ್ಕ ಎಂದು ಅಲ್ಲಮ ಅತ್ಯಂತ ಆತ್ಮವಿಶ್ವಾಸದಿಂದ ಹೇಳುವ ಮಾತು ಈ ವಚನದಲ್ಲಿದೆ. ಅಲ್ಲಮನಂತೆ ತಂತಮ್ಮ ಆರಾಧ್ಯ ದೈವನನ್ನು ದೃಢವಾಗಿ ಹಿಡಿದುಕೊಳ್ಳಬೇಕಾದರೆ ಮತ್ತು ಒಳಿಸಿಕೊಳ್ಳಬೇಕಾದರೆ ಏನೇನು ಮಾಡಬೇಕು ಎಂದು ಅಲ್ಲಮ ಕೊಡುವ ಸೂಚನೆ ಸಲಹೆಗಳು ಇಲ್ಲಿವೆ. ಸೂಚನೆ: ಶಿವ ಶಿವಾ ಎಂಬ ವಚನವನ್ನು ಬಿಡದಂತೆ ಸ್ಮರಿಸುತ್ತಿರಿ. ಸಲಹೆ: ಮಡದಿಯರ ಮೇಲಿನ ಮೋಹವನ್ನು ನಂಬದಿರಿ. ಆರಾಧ್ಯ ದೈವನನ್ನು ದೃಢವಾಗಿ ಒಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಲ್ಲಮ ನೀಡುವ ಎರಡು ಉದಾಹರಣೆಗಳು: ಹಿಡಿವಡೆ ದೃಢವಾಗಿ ಹಿಡಿಯುವುದು ಅಂದರೆ ಕನ್ನಡಿ ತೋರುವ ಪ್ರತಿಬಿಂಬವನ್ನು ಹೇಗೆ ತಪ್ಪಿಸಲು ಸಾಧ್ಯವಿಲ್ಲವೋ ಹಾಗೆ. ಹೇಗೆ ಗಾಳಿ ಬೀಸುವ ದಿಕ್ಕನ್ನು ತಿದ್ದಿ ಬದಲಿಸಲು ಸಾಧ್ಯವಿಲ್ಲವೋ ಹಾಗೆ.
ಪದಪ್ರಯೋಗಾರ್ಥ:
ಮಡದಿಯರ ಒಲುಮೆಯ ನಚ್ಚದಿರಿ ಅಂದರೆ ಹೆಣ್ಣಿನ ಮೇಲಿನ ಮೋಹವನ್ನು ತೊರೆಯಿರಿ. ಅಲ್ಲಮನ ಈ ಹೇಳಿಕೆ ಆತನ ಬದುಕಿನ ವೈಯಕ್ತಿಕ ಅನುಭವವೂ ಹೌದು. ಅಲ್ಲಮನು ಮಾಯಾಲತೆ ಎಂಬ ಸುಂದರಿಯ ಒಲುಮೆಯನ್ನು ನಚ್ಚದೆ ಇದ್ದದ್ದರಿಂದಲೇ ಗುಹೇಶ್ವರನು ಸಿಕ್ಕುವಂತಾಯಿತು. ಇಲ್ಲಿ ತುಳಸಿದಾಸರ ಜೀವನದ ಪ್ರಸಂಗವೊಂದು ಪ್ರಸ್ತುತವಾಗುತ್ತದೆ. ತುಳಸಿದಾಸರು ತಮ್ಮ ಪೂರ್ವಾಶ್ರಮದಲ್ಲಿ ರತ್ನವಲ್ಲಿ ಎಂಬ ಸುಂದರ ಯುವತಿಯನ್ನು ವಿವಾಹವಾಗಿದ್ದರು. ಒಂದು ದಿನ ರತ್ನವಲ್ಲಿಯು ತವರಿಗೆ ಹೋಗಿದ್ದಾಗ ಆಕೆಯನ್ನು ಬಿಟ್ಟಿರಲಾಗದ ಅತೀವ ಮೋಹದಿಂದ ರಾತ್ರೋರಾತ್ರಿ ಸರಜೂ ನದಿಯನ್ನು ಈಜಿ ದಾಟಿಕೊಂಡು ಆಕೆಯನ್ನು ಸೇರುತ್ತಾರೆ. ಈ ವಿಷಯವನ್ನು ತಿಳಿದ ಪತ್ನಿಯು ನನ್ನ ಮೇಲೆ ನೀವಿಟ್ಟಿರುವ ಇಷ್ಟೊಂದು ಮೋಹದಲ್ಲಿ ಕೆಲವಷ್ಟನ್ನಾದರೂ ದೈವದ ಕಡೆ ಹರಿಸಿದ್ದಲ್ಲಿ ನೀವು ದೈವಕೃಪೆಗೆ ಪಾತ್ರರಾಗುತ್ತಿದ್ದಿರಿ ಎಂದು ವಿನೋದ ಮಾಡುತ್ತಾಳೆ. ಪತ್ನಿಯ ಈ ಮಾತು ತುಳಸಿದಾಸರು ಸಂಪೂರ್ಣ ಆಧ್ಯಾತ್ಮಿಕತೆಗೆ ಮುಖಮಾಡುವಂತಾಗುತ್ತದೆ. ಶ್ರೀ ರಾಮಚರಿತಮಾನಸ ಮತ್ತು ಹನುಮಾನ್ ಚಾಲೀಸದಂತ ಅಮರ ಕೃತಿಗಳನ್ನು ರಚಿಸುವಂತಾಗುತ್ತದೆ. ಮಡದಿಯರ ಒಲುಮೆಯ ನಚ್ಚದಿರಿ ಎಂಬ ಅಲ್ಲಮನ ಪದಪ್ರಯೋಗ ಈ ಹಿನ್ನಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾದದ್ದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.