- ತಹಶೀಲ್ದಾರ ಅವರಿಂದ ಆರ್ಡರ್ ಪಾಸ್ ಮಾಡಿರುವಂತಹ ಒತ್ತುವರಿ ಶೀಘ್ರ ತೆರವು
- ಒತ್ತುವರಿ ತೆರವುಗೊಳಿಸಿ ಕಾಲುವೆ ನಿರ್ಮಾಣ ಮಾಡಬೇಕು: ತುಷಾರ್ ಗಿರಿನಾಥ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಗುರುತು ಮಾಡಲಾಗಿದೆ. ತಹಶೀಲ್ದಾರ ಅವರಿಂದ ಆರ್ಡರ್ ಪಾಸ್ ಮಾಡಿರುವಂತಹ ಒತ್ತುವರಿಗಳನ್ನು ಶೀಘ್ರದಲ್ಲಿಯೇ ತೆರವು ಮಾಡಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ಗುರುವಾರ ಸಭೆ ನಡೆಯಿತು. ಈ ವೇಳೆ, ಮಾತನಾಡಿದ ಅವರು, “ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರಿಗೆ ಬಾಕಿ ಆರ್ಡರ್ ಪಾಸ್ ಮಾಡಬೇಕಿರುವಂತಹ ಸರ್ವೇಗಳಿಗೆ ತಹಶೀಲ್ದಾರ್ ಆರ್ಡರ್ ಪಾಸ್ ಮಾಡಬೇಕು. ತದನಂತರ ಹಂತ-ಹಂತವಾಗಿ ಎಲ್ಲ ಒತ್ತುವರಿಗಳ ತೆರವು ಮಾಡಬೇಕು. ಯಾರಾದರು ತಡೆಯೊಡ್ಡಿದರೆ ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿಗಳ ತೆರವು ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಭೂ ಮಾಪನ ಕಾರ್ಯ ಮಾಡಿರುವ ಕಡೆ ಗ್ರಾಮ ನಕ್ಷೆ ಮತ್ತು ಟಿಪ್ಪಣಿಗಳ ಅನ್ವಯ ಯಾವುದೇ ವ್ಯತ್ಯಾಸ ಮಾಡದೆ ಸಂಬಂಧಪಟ್ಟ ಭೂ ಮಾಪಕರು ನಕ್ಷೆಯನ್ನು ಸಿದ್ಧಪಡಿಸಿ ತಹಶೀಲ್ದಾರ್ ರವರು ಅದಕ್ಕೆ ಆದೇಶಗಳನ್ನು ಜಾರಿಮಾಡಬೇಕು. ತದನಂತರ ಒತ್ತುವರಿ ತೆರವುಗೊಳಿಸಿ ಕಾಲುವೆ ನಿರ್ಮಾಣ ಮಾಡಬೇಕು” ಎಂದರು.
“ಪಾಲಿಕೆಯ ಎಂಟೂ ವಲಯಗಳಲ್ಲಿ ಬಾಕಿಯಿರುವ ಒತ್ತುವರಿಗಳನ್ನು ತೆರವು ಮಾಡಿ ರಾಜಕಾಲುವೆಗಳನ್ನು ನಿರ್ಮಾಣ ಮಾಡಿ ಎಲ್ಲಿಯೂ ಜಲಾವೃತವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿ ತೆರವು ಮಾಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಇಂದಿರಾ ಕ್ಯಾಂಟೀನ್ನಲ್ಲಿ ಇನ್ನುಮುಂದೆ ಊಟದ ಜೊತೆಗೆ ಮೊಟ್ಟೆ ನೀಡಲು ಚಿಂತನೆ
ಈ ವೇಳೆ, ವಲಯ ಆಯುಕ್ತರಾದ ಜಯರಾಮ್ ರಾಯಪುರ, ಡಾ. ತ್ರಿಲೋಕ್ ಚಂದ್ರ, ರವೀಂದ್ರ, ಡಾ.ಹರೀಶ್ ಕುಮಾರ್, ಡಾ.ದೀಪಕ್, ಪ್ರೀತಿ ಗೆಹ್ಲೋಟ್ ಸೇರಿದಂತೆ ಎಲ್ಲ ವಲಯ ಜಂಟಿ ಆಯುಕ್ತರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.