- ಆಂಧ್ರಪ್ರದೇಶ ಪಲಮನೇರು ಮಂಡಲದಲ್ಲಿ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ
- ರಾಜ್ಯದ ಪಾರ್ವತಿಪುರಂ ಜಿಲ್ಲೆಯ ಪೂಜಾರಿಗುಡ ಗ್ರಾಮಕ್ಕೆ ಆಗಮಿಸಿದ್ದ ಆನೆಗಳ ಹಿಂಡು
ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ ರಾತ್ರಿ ವೇಗವಾಗಿ ಬಂದ ಲಾರಿಯೊಂದು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಆನೆ ಮರಿಗಳು ಸ್ಥಳದಲ್ಲೇ ಮೃತಪಟ್ಟಿವೆ ಎಂದು ಅರಣ್ಯಾಧಿಕಾರಿಗಳು ಗುರುವಾರ (ಜೂನ್ 15) ತಿಳಿಸಿದ್ದಾರೆ.
ಚಿತ್ತೂರು ಜಿಲ್ಲೆಯ ಪಲಮನೇರು ಮಂಡಲ ಪ್ರದೇಶದಲ್ಲಿ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಬಳಿಯ ಜಗಮರ್ಲಾ ಕ್ರಾಸ್ ನಲ್ಲಿ ಬುಧವಾರ (ಜೂನ್ 14) ರಾತ್ರಿ ಈ ಅಪಘಾತ ಸಂಭವಿಸಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ತನಿಖೆ ಆರಂಭಿಸಿದ್ದಾರೆ.
ತಮ್ಮ ತಾಯಿಯ ಜೊತೆ ಮರಿ ಆನೆಗಳು ಹೆದ್ದಾರಿ ದಾಟುತ್ತಿದ್ದ ವೇಳೆ ಲಾರಿ ಚಾಲಕ ಕುಡಿದ ಅಮಲಿನಲ್ಲಿ ಡಿಕ್ಕಿ ಹೊಡೆದಿದ್ದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆಂಧ್ರಪ್ರದೇಶ ಅರಣ್ಯಾಧಿಕಾರಿ ಚೈತನ್ಯ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮೃತ ಆನೆ ಮರಿಗಳಲ್ಲಿ ಒಂದು ಹೆಣ್ಣು ಹಾಗೂ ಎರಡು ಗಂಡು ಅನೆಗಳು ಸೇರಿವೆ. ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಚೈತನ್ಯ ಕುಮಾರ್ ರೆಡ್ಡಿ ಹೇಳಿದ್ದಾರೆ. ಟ್ರಕ್ ಚಾಲಕರ ಅತಿ ವೇಗದ ಚಾಲನೆ ಇಂತಹ ಅವಘಡಗಳಿಗೆ ಕಾರಣವಾಗುತ್ತವೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
“ಘಟನೆಗೆ ಸಂಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣವೊಂದನ್ನು ದಾಖಲಿಸಲಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಂಧ್ರಪ್ರದೇಶ ಗ್ರಾಮವೊಂದಕ್ಕೆ ನೀರು ಕುಡಿಯಲು ಆನೆಗಳ ಹಿಂಡು ನುಗ್ಗುತ್ತಿರುವ ವಿಡಿಯೋವೊಂದು ಈ ಮುನ್ನ ವೈರಲ್ ಆಗಿತ್ತು. ಆನೆಗಳ ಹಿಂಡು ಬುಧವಾರ ಬೆಳಗ್ಗೆ ರಾಜ್ಯದ ಪಾರ್ವತಿಪುರಂ ಜಿಲ್ಲೆಯ ಪೂಜಾರಿಗುಡ ಗ್ರಾಮಕ್ಕೆ ಆಗಮಿಸಿತ್ತು.
ಈ ಸುದ್ದಿ ಓದಿದ್ದೀರಾ? ಮಣಿಪುರ ಸಚಿವೆ ನಿವಾಸಕ್ಕೆ ಬೆಂಕಿ: ಭದ್ರತಾ ಪಡೆಯಿಂದ ಶೋಧ ಕಾರ್ಯ
ಗ್ರಾಮಸ್ಥರು ಸಂಗ್ರಹಿಸಿಟ್ಟ ಎರಡು ಬಕೆಟ್ಗಳಲ್ಲಿ ಆನೆಗಳು ನೀರು ಕುಡಿಯುತ್ತಿರುವುದು ವಿಡಿಯೋದಲ್ಲಿ ಕಾಣಿಸಿತ್ತು. ಆಂಧ್ರಪ್ರದೇಶ ಗ್ರಾಮದಲ್ಲಿ ಆನೆಗಳು ಆಗಮಿಸಿದ್ದು ಜನರಲ್ಲಿ ಭೀತಿ ಮೂಡಿಸಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದರು. ಆನೆಗಳನ್ನು ಮರಳಿ ಕಾಡಿಗೆ ಕರೆತರಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದರು.