ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ಮತ್ತು ಗೋಧಿ ಮಾರಾಟ ನಿಲ್ಲಿಸಿರುವ ಬಗ್ಗೆ ಕಾಂಗ್ರೆಸ್ ಗುರುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, “ಬಿಜೆಪಿಗೆ ಮತ ಹಾಕದಿದ್ದರೆ ಕರ್ನಾಟಕಕ್ಕೆ ಮೋದಿಯವರ ಆಶೀರ್ವಾದ ಸಿಗುವುದಿಲ್ಲ’’ ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಹೇಳಿದ್ದಕ್ಕೆ ಅರ್ಥ ಇದೇನಾ ಎಂದು ಪ್ರಶ್ನಿಸಿದ್ದಾರೆ.
“ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ತಮ್ಮ “ಹತಾಶೆಯನ್ನು” ಹೊರಹಾಕುತ್ತಿದ್ದಾರೆ. ಈ ಮೂಲಕ ಸರಕಾರ ಸಮಾಜದ ಕಟ್ಟ ಕಡೆಯ ವರ್ಗಗಳಿಗೆ ನೋವುಂಟು ಮಾಡುತ್ತಿದೆ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ.
“ಮುಕ್ತ ಮಾರುಕಟ್ಟೆ ಯೋಜನೆ ಮೂಲಕ ರಾಜ್ಯಗಳಿಗೆ ಗೋಧಿ ಮತ್ತು ಅಕ್ಕಿ ಮಾರಾಟವನ್ನು ನಿಲ್ಲಿಸುವಂತೆ ಭಾರತೀಯ ಆಹಾರ ನಿಗಮಕ್ಕೆ ಒತ್ತಾಯಿಸುವ ಮೂಲಕ, ಮೋದಿ ಸರ್ಕಾರವು ಸಮಾಜದ ಅತ್ಯಂತ ಅಂಚಿನಲ್ಲಿರುವ ವರ್ಗಗಳನ್ನು ನೋವುಂಟು ಮಾಡುತ್ತಿದೆ. ಕರ್ನಾಟಕದಿಂದ ಚುನಾವಣೆಯಿಂದ ಆಗಿರುವ ನಷ್ಟದಿಂದ ಬಿಜೆಪಿ ಸರ್ಕಾರವು ತಮ್ಮ ಹತಾಶೆ ಹೊರಹಾಕಲು ಪ್ರಧಾನಿ ಈ ರೀತಿ ಎಷ್ಟು ಸಣ್ಣತನ ತೋರಬಾರದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವಂತೆ ಅನ್ನಭಾಗ್ಯ ಖಾತ್ರಿಯನ್ನು ಜಾರಿಗೊಳಿಸಲು ಮತ್ತು ಬಡ ಕುಟುಂಬಗಳಿಗೆ 10 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು” ಎಂದು ಜೈರಾಂ ರಮೇಶ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಪಠ್ಯಪುಸ್ತಕದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಎನ್ಸಿಇಆರ್ಟಿಗೆ ದೇಶದ ಪ್ರತಿಷ್ಠಿತ 33 ವಿವಿ ಪ್ರಾಧ್ಯಾಪಕರ ಪತ್ರ
ಭಾರತೀಯ ಆಹಾರ ನಿಗಮ ಇತ್ತೀಚೆಗೆ ಹೊರಡಿಸಿದ ಆದೇಶದ ಪ್ರಕಾರ, “ರಾಜ್ಯ ಸರ್ಕಾರಗಳಿಗೆ ಮುಕ್ತ ಮಾರುಕಟ್ಟೆ ಯೋಜನೆಯಡಿ ಗೋಧಿ ಮತ್ತು ಅಕ್ಕಿ ಮಾರಾಟವನ್ನು ನಿಲ್ಲಿಸಲಾಗಿದೆ. ಆದಾಗ್ಯೂ, ಈ ಯೋಜನೆ ಮೂಲಕ ಅಕ್ಕಿ ಮಾರಾಟವನ್ನು ಈಶಾನ್ಯ ರಾಜ್ಯಗಳು, ಗುಡ್ಡಗಾಡು ರಾಜ್ಯಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಕ್ವಿಂಟಾಲ್ಗೆ 3,400 ರೂ.ಗಳ ದರದಲ್ಲಿ ಮುಂದುವರಿಸಲಾಗುವುದು ಎಂದು ನಿಗಮ ತಿಳಿಸಿದೆ.
“ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ತನ್ನ ‘ಅನ್ನಭಾಗ್ಯ ’ಯೋಜನೆಯನ್ನು ಜಾರಿಗೆ ತರಲು ರಾಜ್ಯಕ್ಕೆ ಅಗತ್ಯವಿರುವಷ್ಟು ಅಕ್ಕಿಯನ್ನು ಪಡೆಯದಂತೆ ನೋಡಿಕೊಳ್ಳುವ ಮೂಲಕ ಕಾಂಗ್ರೆಸ್ ಆಡಳಿತದ ಚುನಾವಣಾ ಭರವಸೆಯನ್ನು“ವಿಫಲಗೊಳಿಸಲು” ಸಂಚು ನಡೆಸುತ್ತಿದೆ. ಈ ಮೂಲಕ ಬಡವರಿಗೆ ನೀಡುವ ಹೆಚ್ಚುವರಿ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಡವರಿಗೆ ಅನುಕೂಲ ಮಾಡಿಕೊಡುವ ಯೋಜನೆಯನ್ನು ಹಾಳು ಮಾಡಲು ಯತ್ನಿಸುತ್ತಿರುವುದು ಬಡವರ ವಿರೋಧಿ ನೀತಿಯನ್ನು ತೋರಿಸುತ್ತಿದೆ. ಆದರೂ ತಮ್ಮ ಸರ್ಕಾರವು ಇತರ ಮೂಲಗಳಿಂದ ಅಕ್ಕಿಯನ್ನು ಪಡೆಯಲು ಮತ್ತು ಉತ್ಪಾದಿಸುವ ರಾಜ್ಯಗಳಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಭರವಸೆ ನೀಡಿದಂತೆ ಅಗತ್ಯವಿರುವವರಿಗೆ ಸೂಕ್ತ ಸಮಯಕ್ಕೆ ಸರಬರಾಜು ಮಾಡುವ ಗುರಿಯನ್ನು ಹೊಂದಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸಿನ ಐದು ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸುವ ಭಾಗವಾಗಿ, ಸಿದ್ದರಾಮಯ್ಯ ಸರ್ಕಾರವು ಈ ತಿಂಗಳ ಆರಂಭದಲ್ಲಿ ‘ಅನ್ನ ಭಾಗ್ಯ’ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿತು. ಪ್ರತಿ ತಿಂಗಳು ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಒಟ್ಟು 10 ಕೆಜಿ ಆಹಾರ ಧಾನ್ಯ ಗಳು/ಅಕ್ಕಿಯನ್ನು ಜುಲೈ 1ರಿಂದ ನೀಡಲಾಗುತ್ತದೆ. ಪ್ರಸ್ತುತ ಬಿಪಿಎಲ್ ಕುಟುಂಬದ ಸದಸ್ಯರಿಗೆ ಈಗಾಗಲೇ ಐದು ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಇದೀಗ ಹೊಸ ಸರ್ಕಾರದಿಂದ ಅದನ್ನು ಮತ್ತೆ ಐದು ಕೆಜಿ ಹೆಚ್ಚಿಸಲಾಗುತ್ತಿದೆ.