ಮಹಾಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನದ ಸತ್ಯಾಗ್ರಹ ನಿರತ ಬೌದ್ಧ ಬಿಕ್ಕುಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ ಪ್ರತಿಭಟನೆಗೆ ಕರೆ ನೀಡಿದೆ.
ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ ಕರ್ನಾಟಕದ ಪ್ರತಿನಿಧಿ ಬುದ್ಧ ಘೋಷ್ ದೇವಿಂದ್ರ ಹೆಗಡೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, “ಬೋಧ್ ಗಯಾ ಟೆಂಪಲ್ ಆಕ್ಟ್ 1949 ರದ್ದುಗೊಳಿಸಿ, ಮಹಾಬೋಧಿ ಮಹಾ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಬುದ್ಧ ಗಯಾದ ಮಹಾಬೋಧಿ ಮಹಾ ವಿಹಾರದ ಮುಂದೆ ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಫೆ. 12ರಿಂದ ಪ್ರಾರಂಭವಾದ ಮಹಾಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನದ ಅನಿರ್ಧಿಷ್ಟಾವಧಿ ಸರದಿ ಆಮರಣಾಂತ ಉಪವಾಸ ಸತ್ಯಾಗ್ರಹ ಶಾಂತಿಯುತವಾಗಿ ಹದಿನಾರನೇ ದಿನಕ್ಕೆ ತಲುಪಿದೆ. ಈ ಹೋರಾಟವನ್ನು ವಿಫಲಗೊಳಿಸಲು ಸಂಘಪರಿವಾರ ಹಲವು ಕುತಂತ್ರಗಳನ್ನು ಮಾಡಿದೆ. ಆದರೆ ಧರಣಿ ನಿರತ ಬೌದ್ಧ ಸಂಘ ಶಾಂತಿ ಮತ್ತು ತಾಳ್ಮೆಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಡೆದುಕೊಂಡು ವಿರೋಧಿಗಳ ತಂತ್ರಗಳನ್ನು ವಿಫಲಗೊಳಿಸಿದೆ”
ಮಹಾಬೋಧಿ ಮಹಾ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡುವವರೆಗೆ ಹೋರಾಟ ನಿಲ್ಲದು. ಬಿಹಾರ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಕಾಲಮಿತಿಯೊಳಗೆ ಬೌದ್ಧರ ಬೇಡಿಕೆ ಈಡೇರಿಸುತ್ತೇವೆ ಎಂದು ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಿದರೆ ಮಾತ್ರ ಹೋರಾಟವನ್ನು ಮುಂದೂಡಬಹುದು” ಎಂದು ಸ್ಪಷ್ಟಪಡಿಸಿದರು.
“ಆದರೆ ಸರ್ಕಾರ ತನ್ನ ಕುತಂತ್ರ ಬುದ್ದಿ ತೋರಿ, ಬಂತೇಜಿಗಳ ಮೇಲೆ ಪ್ರಾಣಿಗಳಿಗಿಂತ ಕೀಳಾಗಿ ದೌರ್ಜನ್ಯ ಎಸಗಿದ್ದು, ನಿಮ್ಮ ಆರೋಗ್ಯ ಸರಿ ಇಲ್ಲ ಎಂದು ಕೆಲವರನ್ನು ಅಂಬುಲೆನ್ಸ್ ಗೆ ಬಲವಂತವಾಗಿ ಹಾಕಿಕೊಂಡು, ಇನ್ನೂ ಕೆಲವರಿಗೆ ಇಲ್ಲಿ ಸತ್ಯಾಗ್ರಹ ಕೂಡಲು ನಿಮಗೆ ಪರವಾನಗಿ ಇಲ್ಲ ಎಂದು ಪೊಲೀಸ್ ವ್ಯಾನ್ ನಲ್ಲಿ ಎತ್ತಿಹಾಕಿ ಹಿಂಸೆ ನೀಡಿದ್ದು, ಮಹಿಳಾ ಬಿಕ್ಕುಣಿಗಳ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಎಲ್ಲರನ್ನೂ ಬಲವಂತವಾಗಿ ಸತ್ಯಾಗ್ರಹ ಸ್ಥಳದಿಂದ ಬಂಧಿಸಿ ಕರೆದೊಯ್ದಿದ್ದಾರೆ. ಕೆಲವರನ್ನು ಗಯಾ ನಗರದ ಅನುಗ್ರಹ ನಾರಾಯಣ ಮಗಧ ಮೆಡಿಕಲ್ ಕಾಲೇಜು ಆಸ್ಪತ್ರೆ ಗೇಟ್ ಬಳಿ ತಂದು ಬಿಟ್ಟು ಪೊಲೀಸರು ಪರಾರಿಯಾಗಿದ್ದಾರೆ. ಇನ್ನೂ ಕೆಲವರಿಗೆ ಎಲ್ಲಿ ಬಂಧನದಲ್ಲಿ ಇಟ್ಟಿದ್ದಾರೆ ಎಂದು ಮಾಹಿತಿ ಸಹ ನೀಡಿರುವುದಿಲ್ಲ ಬಂತೇಜಿಗಳ ಆರೋಗ್ಯ ನೆಪ ಹೇಳಿದ ಅಧಿಕಾರಿಗಳು ಬಂತೇಜಿಗಳನ್ನು ಕನಿಷ್ಠ ಆಸ್ಪತ್ರೆಗೆ ದಾಖಲು ಸಹ ಮಾಡದೆ ಅಮಾನವೀಯವಾಗಿ ವರ್ತನೆ ಮಾಡಿದ್ದಾರೆ
ಬಿಹಾರ ಸರ್ಕಾರದ ಈ ಕ್ರಮ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಉನ್ನತ ಶಿಕ್ಷಣ ಸಂಸ್ಥೆಯಿಲ್ಲ, ಸಾಕ್ಷರತೆಯೂ ಇಲ್ಲ: ಶೈಕ್ಷಣಿಕವಾಗಿ ಹಿಂದುಳಿದ ಯಾದಗಿರಿ
“ಕರ್ನಾಟಕ ರಾಜ್ಯದ ಎಲ್ಲಾ ದಲಿತ ಸಂಘಟನೆಗಳು, ಬೌದ್ಧ ಸಂಘ ಸಂಸ್ಥೆಗಳು ಮತ್ತು ಪ್ರಗತಿಪರ ಸಂಘಟನೆಗಳು, ಹಾಗೂ ಪ್ರಜಾಪ್ರಭುತ್ವ ವಾದಿ ಚಿಂತಕರು ಈ ಘಟನೆಯನ್ನು ಉಗ್ರವಾಗಿ ಖಂಡಿಸಿ ಪ್ರತಿಭಟನೆ ಮಾಡಿ ಮಹಾಬೋಧಿ ಮಹಾ ವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲಿಸಬೇಕೆಂದು ಮತ್ತು ಆದಷ್ಟು ಬೇಗನೆ ಎಲ್ಲಾ ಜಿಲ್ಲೆಗಳಿಂದ ತಂಡಗಳನ್ನು ರಚಿಸಿಕೊಂಡು ಬುದ್ಧ ಗಯಾಕ್ಕೆ ತೆರಳಿ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಬೇಕೆಂದು” ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ ಪ್ರತಿನಿಧಿ ಬುದ್ಧಘೋಷ್ ದೇವೇಂದ್ರ ಹೆಗಡೆ ಮನವಿ ಮಾಡಿದರು.
