ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಆಡು ಮೇಯಿಸಲು ಹೋದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಮಾಲೀಕ ಮಹಿಳೆಗೆ ಜಾತಿನಿಂದನೆ ಮಾಡಿರುವ ಘಟನೆ ನಡೆದಿದೆ.
ಸಂತ್ರಸ್ತೆ ಮಹಿಳೆ ಸರೋಜಮ್ಮ ಎಂಬುವವರು ಹಲ್ಲೆಗೊಳಗಾಗಿರುವವರು. ತೋಟದಲ್ಲಿ ಆಡು ಮೇಯಿಸಲು ಬಂದ ಮಹಿಳೆ ಮೇಲೆ ಫೆಬ್ರವರಿ 23ರಂದು ಮಾಲೀಕನಿಂದ ಹಲ್ಲೆ ನಡೆದಿತ್ತು. ಘಟನೆ ನಡೆದು ಐದು ದಿನಗಳ ಬಳಿಕ ಶಿಕಾರಿಪುರ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.
ಹಲ್ಲೆ ಬಳಿಕ ಮಹಿಳೆ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಹಿಳೆಯ ಮೇಲೆ ಹಲ್ಲೆ ನಡೆದಿದ್ದನ್ನು ಹೇಳಿಕೆ ನೀಡಿದ್ದ ವಿಡಿಯೊ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ನೀಡಿದ ಬಳಿಕ ತೋಟದ ಮಾಲೀಕ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ತೋಟದ ಮಾಲೀಕ ಅರುಣ್ ಕುಮಾರ್ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸತ್ಯಾಗ್ರಹ ನಿರತ ಬೌದ್ಧ ಬಿಕ್ಕುಗಳ ಮೇಲೆ ದೌರ್ಜನ್ಯ; ಪ್ರತಿಭಟನೆಗೆ ಬುದ್ಧಿಸ್ಟ್ ಫೋರಂ ಕರೆ
“ಈಸೂರು ಗ್ರಾಮದ ರಾಮವಳ್ಳಿ ಗ್ರಾಮಕ್ಕೆ ಕುರಿ ಮೇಯಸಲು ಹೋಗಿದ್ದ ವೇಳೆ ಅರುಣ ಎಂಬಾತ ಏಕಾಏಕಿ ಜಾತಿನಿಂದನೆ ಮಾಡಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾನೆ” ಎಂದು ಮಹಿಳೆ ಆರೋಪ ಮಾಡಿದ್ದಾರೆ.
“ಘಟನೆ ಹಿನ್ನೆಲೆ ತೀವ್ರವಾದ ತನಿಖೆ ಮುಂದುವರೆದಿದೆ. ಆರೋಪಿಯ ಸುಳಿವು ಪತ್ತೆ ಹಚ್ಚಲಾಗುತ್ತಿದ್ದು, ಶೀಘ್ರದಲ್ಲಿಯೇ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಶಿಕಾರಿಪುರ ಡಿವೈಎಸ್ಪಿ ಕೇಶವ್ ಈ ದಿನ.ಕಾಮ್ಗೆ ತಿಳಿಸಿದರು.