ದಲಿತರ ಮೀಸಲು ಹಣದಿಂದ ನಿರ್ಮಾಣಗೊಂಡಿದ್ದ ಉಡುಪಿ ನಗರ ಸಭೆಯ ವ್ಯಾಪ್ತಿಯಲ್ಲಿರುವ ಬನ್ನಂಜೆ ಗಾಂಧಿಭವನವನ್ನು ಬೇರೆಯವರಿಗೆ ಹಸ್ತಾಂತರಿಸಿದರೆ ಉಗ್ರಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಸಮಿತಿ ಸದಸ್ಯ ಜಯನ್ ಮಲ್ಪೆ ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.
ಕಳೆದ 90 ವರ್ಷಗಳಿಂದ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯಾಗಿದ್ದ ಈ ಜಾಗದಲ್ಲಿ ಆಗಿನ ಪುರಸಭೆ ಅಧ್ಯಕ್ಷರಾಗಿದ್ದ ಡಾ.ವಿ.ಎಸ್.ಆಚಾರ್ಯ ಮತ್ತು ರೊನಾಲ್ಡ್ ಪ್ರವೀನ್ ಕುಮಾರ್ರವರು ದಲಿತರ ಸಭೆ-ಸಮಾರಂಭ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಮೀಸಲು ನಿಧಿಯನ್ನು ಬಳಸಿಕೊಂಡು 1985ರಲ್ಲಿ ಗಾಂಧಿಭವನವನ್ನು ನಿರ್ಮಿಸಲಾಗಿತ್ತು.
ಈ ಗಾಂಧಿಭವನದಲ್ಲಿ ದಲಿತ ಸಂಘರ್ಷ ಸಮಿತಿ ಕಳೆದ ಸುಮಾರು 40 ವರ್ಷಗಳಿಂದ ದಲಿತರ ಕುಂದುಕೊರತೆ ಸಭೆ ನಡೆಸಿಕೊಂಡು ಬರುತ್ತಿತ್ತು. ಜೊತೆಗೆ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಹಾಗೂ ಉಡುಪಿ ತಾಲೂಕಿನ ದಲಿತರ ಸಾಂಸ್ಕೃತಿಕ, ತರಬೇತಿ, ಮದುವೆ ಸಭೆ ಸಮಾರಂಭ ನಡೆಸಿಕೊಂಡು ಬರಲಾಗುತ್ತಿತ್ತು.

ಈ ಗಾಂಧಿಭವನದ ಕಟ್ಟಡ ಕ್ರಮೇಣ ಸರಿಯಾದ ನಿರ್ವಾಹಣೆಗೆ ಉಡುಪಿ ನಗರಸಭೆ ಹಣನೀಡದೆ ಇರುವುದರಿಂದ ಕಟ್ಟಡ ಶೀತಲೀಕರಣಗೊಂಡು ಸರಿಯಾದ ನಿರ್ವಾಹಣೆ ಇಲ್ಲದೆ ಪಾಲುಬಿದ್ದಿತ್ತು.
ಇದೀಗ ದಲಿತರ ಮೀಸಲು ಹಣದಿಂದ ನಿರ್ಮಿಸಿರುವ ಮತ್ತು ಹಲವು ದಶಕಗಳಿಂದ ದಲಿತರಿಗಾಗಿ ಮೀಸಲಾಗಿರಿಸಿದ್ದ ಈ ಗಾಂಧಿಭವನವನ್ನು ಜಿಲ್ಲಾಧಿಕಾರಿ ಉಡುಪಿಯ ಸಂಜೀವನಿ ಜೀವನೋಪಾಯ ಪ್ರಚಾರ ಮತ್ತು ಮಾರ್ಕೆಟಿಂಗ್ ಸೊಸೈಟಿ, ಮಹಿಳಾ ಸ್ವಸಹಾಯ ಸಂಘಕ್ಕೆ ಹಾಗೂ ಹಿರಿಯ ನಾಗರಿಕ ಸಮಾಲೋಚನೆ ಘಟಕಕ್ಕೆ ಹಸ್ತಾಂತರಿಸಿರುವುದು ಜಿಲ್ಲೆಯ ದಲಿತ ಸಮುದಾಯಕ್ಕೆ ಮಾಡಿದ ಮಹಾದ್ರೋಹ ಎಂದಿರುವ ಜಯನ್ ಮಲ್ಪೆ ತಕ್ಷಣ ಈ ಆದೇಶವನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ದಲಿತರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಾಹಿಸಬೇಕಾದ ಜಿಲ್ಲಾಧಿಕಾರಿ ಕಳೆದ 90 ವರ್ಷಗಳಿಂದ ದಲಿತರ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಿದ್ದ ಈ ಗಾಂಧಿಭವನವನ್ನು ಅನ್ಯರಿಗೆ ಹಸ್ತಾಂತರಿಸುವ ಮುನ್ನ ಸೌಜನ್ಯಕ್ಕೂ ದಲಿತರನ್ನು ವಿಶ್ವಾಸಕ್ಕೆ ಪಡೆಯದೆ ಏಕಾಎಕಿ ಗಾಂಧಿಭವನವನ್ನು ಹಸ್ತಾಂತರಿಸುವ ನಿರ್ಧಾರ ತೆಗೆದುಕೊಂಡು ಆದೇಶಿಸಿರುವುದು ದಲಿತ ಸಮಾಜಕ್ಕೆ ಮಾಡಿರುವ ಅನ್ಯಾಯ ಎಂದು ಜಯನ್ ಮಲ್ಪೆ ತಿಳಿಸಿದ್ದಾರೆ.
